ತಾಕತ್ತಿದ್ರೆ RSS, ಭಜರಂಗದಳವನ್ನ ಬ್ಯಾನ್ ಮಾಡ್ಲಿ- ಎಚ್‍ಡಿಕೆಗೆ ಕಲ್ಲಡ್ಕ ಸವಾಲ್

Public TV
2 Min Read

ಚಿತ್ರದುರ್ಗ: ಶಿಸ್ತು, ದೇಶಭಕ್ತಿ ಬೆಳೆಸುವ ಆರ್‌ಎಸ್‌ಎಸ್ ಹಾಗೂ ಭಜರಂಗದಳ ಸಂಘಟನೆಯನ್ನು ತಾಕತ್ತಿದ್ದರೆ ಬ್ಯಾನ್ ಮಾಡಲಿ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಾಜಿ ಸಿಎಂ ಕುಮಾರಸ್ವಾಮಿಗೆ ಸವಾಲ್ ಹಾಕಿದ್ದಾರೆ.

ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಭೇಟಿ ನೀಡಿದ್ದರು. ಈ ವೇಳೆ ಆರ್‌ಎಸ್‌ಎಸ್, ಭಜರಂಗದಳ ನಿಷೇಧಿಸುವಂತೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಸಿದರು. 1947ರಿಂದ ಹಿಂದೂ ಸಮಾಜಕ್ಕೆ ಆರ್‌ಎಸ್‌ಎಸ್ ರಕ್ಷಕರಾಗಿ ಬೆಳೆದು ಬಂದಿತು. ಆದರೆ ರಾಜಕೀಯ ಎದುರಾಳಿಗಳಿಂದ ಆರ್‌ಎಸ್‌ಎಸ್ ನಾಶಕ್ಕೆ ಪ್ರಯತ್ನ ನಡೆಯಿತು. ಗಾಂಧೀಜಿ ಕೊಲೆ ಕೇಸ್ ಮುಂದಿಟ್ಟುಕೊಂಡು ಆರ್‌ಎಸ್‌ಎಸ್ ನಿಷೇಧ ಮಾಡಿದರು. ಆದರೆ ಜನ ಬೆಂಬಲದಿಂದ ಮತ್ತೆ ಆರ್‌ಎಸ್‌ಎಸ್ ವಾಪಸ್ಸು ಬಂದು ದೇಶದಲ್ಲಿನ ಹಿಂದೂಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ. ಎಂದಿಗೂ ಸಹ ಆರ್‌ಎಸ್‌ಎಸ್ ಹಿಂಸೆ ಮೇಲೆ ನಂಬಿಕೆ ಇಟ್ಟುಕೊಂಡು ಮುಂದೆ ಬಂದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಇದಕ್ಕೆ ಆರ್‌ಎಸ್‌ಎಸ್ ಚರೀತ್ರೆಯನ್ನು ಓದಿಕೊಳ್ಳಬೇಕು. ಶಿಸ್ತು, ದೇಶಭಕ್ತಿ ಬೆಳೆಸುವ ಆರ್‌ಎಸ್‌ಎಸ್ ಹಾಗೂ ಭಜರಂಗದಳ ಸಂಘಟನೆಯನ್ನು ತಾಕತ್ತಿದ್ದರೆ ಬ್ಯಾನ್ ಮಾಡಲಿ ಎಂದು ಹೆಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ರೈಸ್ತರು, ಮುಸಲ್ಮಾನರು ಪಾಶ್ಚಾತ್ಯ ದೃಷ್ಠಿಕೋನದವರಾಗಿದ್ದು, ಇದರಿಂದಲೇ ನಕ್ಸಲರಿಂದ ನಮ್ಮ ಮೇಲೆ ದಾಳಿ ಮಾಡಿಸಲಾಗುತ್ತಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಿಸಿದರು. ಅಲ್ಲದೆ ನಮ್ಮ ಹೆಣ್ಣುಮಕ್ಕಳನ್ನು ಹಾರಿಸಿಕೊಂಡು ಹೊಗಲಾಗುತ್ತಿದೆ. ಗೋವುಗಳ ಮಾರಣಹೋಮ ಮಾಡಲಾಗುತ್ತಿದೆ. ಇದನ್ನು ತಡೆಯುವುದಕ್ಕೆ, ಹಿಂದೂ ಸಮಾಜ ರಕ್ಷಣೆಗೆ ಆರ್‌ಎಸ್‌ಎಸ್ ಹೋರಾಟ ಮಾಡುತ್ತಿದೆ ಎಂದು ಹೇಳಿದರು.

ಗಾಂಧೀಜಿ ಹೇಳಿದ ಮತಾಂತರ, ಗೋಹತ್ಯೆ ನಿಷೇಧದ ಪರ ನಾವು ಹೋರಾಡುತ್ತಿದ್ದೇವೆ. ಆದರೆ ಈಗಿನವರು ನಕಲಿ ಗಾಂಧಿಗಳು, ಢೋಂಗಿಗಳು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಲೇವಡಿ ಮಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಲ್‍ನಲ್ಲಿ ಗೋಮಾಂಸ ತಿನ್ನುವುದಾಗಿ ಹೇಳಿದ್ದರು. ಗಾಂಧೀಜಿ ಹೇಳಿದ ಮಾತನ್ನು ಕಾಂಗ್ರೆಸ್ಸಿನವರು ಸೇರಿದಂತೆ ಯಾರೂ ಸಹ ಪಾಲನೆ ಮಾಡುತ್ತಿಲ್ಲ ಎನ್ನುವುದು ಇದರಿಂದಲೇ ತಿಳಿಯುತ್ತದೆ. ಆದರೆ ಗಾಂಧೀಜಿ ಅವರ ಮಾತನ್ನು ಕೇವಲ ಆರ್‌ಎಸ್‌ಎಸ್ ಮಾತ್ರ ಪಾಲಿಸುತ್ತಿದೆ ಎಂದರು.

ಪಿಎಫ್‍ಐ(ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ)ಗೆ ಹೊರ ದೇಶದಿಂದ ಅನೇಕ ವರ್ಷದಿಂದ ಹಣ ಬರುತ್ತಿದೆ. ಇದರಿಂದಲೇ ಅವರು ಅಟ್ಟಹಾಸ ಮೆರೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಇದನ್ನು ಮೆಟ್ಟಿ ನಿಲ್ಲುವುದಕ್ಕಾಗಿಯೇ ದೇಶದ ಪ್ರಧಾನಿ ಮೋದಿ ಹುಟ್ಟಿಬಂದಿದ್ದು, ಎಲ್ಲಾ ಹಿಂಸಾತ್ಮಕ ಕೃತ್ಯಗಳನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿರುವುದು ಎಂದು ಮೋದಿ ಅವರನ್ನು ಹಾಡಿ ಹೊಗಳಿದರು.

ಡಾ. ಅಂಬೇಡ್ಕರ್ ಅವರು ರಾಷ್ಟ್ರೀಯ ದೃಷ್ಟಿಕೋನವುಳ್ಳ ಶ್ರೇಷ್ಠ ಮನುಷ್ಯ. ಇದರಿಂದಲೇ ಆರ್‌ಎಸ್‌ಎಸ್ ಪ್ರತಿ ಶಿಬಿರಗಳಲ್ಲಿ ಅಂಬೇಡ್ಕರ್ ಬಗ್ಗೆ ವಿಚಾರ ಚಿಂತನೆಗಳನ್ನು ನಡೆಸಲಾಗುತ್ತದೆ. ಅವರ ವಿಚಾರಧಾರೆಗಳು ಎಲ್ಲರಿಗೂ ಪ್ರೇರೇಪಣೆ ಮಾಡುವಂತದ್ದು ಎಂದರು.

Share This Article
Leave a Comment

Leave a Reply

Your email address will not be published. Required fields are marked *