ಮಂದಿರ-ಮಸೀದಿ ವಿವಾದ ಹೆಚ್ಚಳಕ್ಕೆ RSS ಕಳವಳ; ಇದು ಒಪ್ಪಲಾಗದು ಎಂದ ಮೋಹನ್ ಭಾಗವತ್

Public TV
1 Min Read

– ಕೋಮು ವಿವಾದ ಸೃಷ್ಟಿಸುವುದನ್ನು ನಾವು ಒಪ್ಪಲ್ಲ: ರಾಮಮಂದಿರ ಅರ್ಚಕರು

ನವದೆಹಲಿ: ಇತ್ತೀಚಿಗೆ ಮಂದಿರ-ಮಸೀದಿ ವಿವಾದಗಳು ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ನಿರ್ಮಾಣ ಬಳಿಕ ಇಂತಹ ವಿವಾದಗಳನ್ನೇ ಸೃಷ್ಟಿಸಿ ತಾವು ಕೂಡ ಹಿಂದೂ ಮುಖಂಡರೆನಿಸಿಕೊಳ್ಳಬಹುದು ಎಂದು ಕೆಲವರು ಭಾವಿಸಿದ್ದಾರೆ. ಆದರೆ, ಇದು ತಮಗೆ ಒಪ್ಪಿತವಲ್ಲ. ಇದು ಸರಿಯಲ್ಲ ಎಂದು ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.

ನಿತ್ಯವೂ ಒಂದು ಹೊಸ ವಿವಾದ ಸೃಷ್ಟಿಸ್ತಿದ್ದಾರೆ. ಇವುಗಳನ್ನು ಹೇಗೆ ಒಪ್ಪಲು ಸಾಧ್ಯ? ಇದು ಮುಂದುವರೆಯಬಾರದು. ನಮ್ಮ ದೇಶ ಸಾಮರಸ್ಯದಿಂದ ಕೂಡಿದೆ ಎಂಬುದನ್ನು ವಿಶ್ವಕ್ಕೆ ಸಾರಿ ಹೇಳಬೇಕು ಎಂದು ಪ್ರತಿಪಾದಿಸಿದ್ದಾರೆ. ತಾವು ಹಿಂದೂಗಳಾಗಿರುವ ಕಾರಣ ರಾಮಕೃಷ್ಣ ಆಶ್ರಮದಲ್ಲಿ ಕ್ರಿಸ್ಮಸ್ ಆಚರಿಸ್ತಿದ್ದೇವೆ ಎಂದಿದ್ದಾರೆ.

ಮೋಹನ್ ಭಾಗವತ್ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ, ಭಾಗವತ್ ಹೇಳಿಕೆಯನ್ನು ರಾಮಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಸಮರ್ಥಿಸಿದ್ದಾರೆ. ನಾಯಕರಾಗುವ ಉದ್ದೇಶದಿಂದ ಕೋಮು ವಿವಾದ ಸೃಷ್ಟಿಸೋದನ್ನು ನಾವು ಒಪ್ಪೋದಿಲ್ಲ ಎಂದಿದ್ದಾರೆ.

Share This Article