ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು

Public TV
1 Min Read

ಮಂಗಳೂರು: ಬಂಟ್ವಾಳದಲ್ಲಿ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ಶರತ್ ಮಡಿವಾಳ (28) ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ನಗರದ ಎ.ಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬಿ.ಸಿ. ರೋಡ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬಳಿ ಮಂಗಳವಾರ ರಾತ್ರಿ ದುಷ್ಕರ್ಮಿಗಳ ತಂಡವೊಂದು ಹಲ್ಲೆ ಮಾಡಿತ್ತು. ಬೆನ್ನು, ಕೆನ್ನೆ, ಕೊರಳು, ತಲೆಯ ಹಿಂಬದಿಯಲ್ಲಿ ತೀವ್ರ ಗಾಯಗೊಂಡಿದ್ದ ಶರತ್ ಅವರನ್ನು ಉಳಿಸಲು ವೈದ್ಯರು ಶತಾಯಗತಾಯ ಪ್ರಯತ್ನಿಸಿದ್ದರೂ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ.

ಇಂದು ಬೆಳಿಗ್ಗೆಯಷ್ಟೇ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಶರತ್ ಹಲ್ಲೆಗೈದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬಿ.ಸಿ. ರೋಡಿನಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಸಂಜೆ ಸ್ವತಃ ಶರತ್ ಸಾವನ್ನಪ್ಪಿದ್ದಾರೆ.

ಶರತ್ ಮಡಿವಾಳ ಸಜಿಪಮುನ್ನೂರು ಗ್ರಾಮದ ಕಂದೂರು ನಿವಾಸಿ ತನಿಯಪ್ಪ ಎಂಬವರ ಮಗನಾಗಿದ್ದು 28 ವರ್ಷ ವಯಸ್ಸಾಗಿತ್ತು. ಬಿ.ಸಿ.ರೋಡಿನಲ್ಲಿ ಉದಯಲಾಂಡ್ರಿಯನ್ನು ನಡೆಸುತ್ತಿದ್ದ ಅವರು  ಕೆಲಸ ಮುಗಿಸಿ, ಅಂಗಡಿಯಿಂದ ಹೊರಬರುತ್ತಿದ್ದ ವೇಳೆ ದಾಳಿ ನಡೆದಿತ್ತು.

ಆರ್‍ಎಸ್‍ಎಸ್ ನಿರಂತರ ಚಟುವಟಿಕೆಯಲ್ಲಿ ಶರತ್  ಭಾಗಿಯಾಗುತ್ತಿದ್ದರು. ಹೀಗಾಗಿಯೇ ಶರತ್‍ರನ್ನು ಗುರಿಯಾಗಿಸಿ ಕೊಲೆ ಯತ್ನ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.

ದಾಳಿಯ ನಂತರ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಶರತ್ ಅವರನ್ನು ಹಣ್ಣಿನ ವ್ಯಾಪಾರಿಯಾಗಿರುವ ಅಬ್ದುಲ್ ರವೂಫ್ ತಮ್ಮ ರಿಕ್ಷಾದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬಳಿಕ ಅಲ್ಲಿನ ಆಂಬುಲೆನ್ಸ್ ಮೂಲಕ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಸಾಗಿಸಿದ್ದರು.

ಈ ಹಿಂದೆ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಗಳು:
1. ಬೆಂಗಳೂರಿನ ಶಿವಾಜಿನಗರಲ್ಲಿ ಆರ್. ರುದ್ರೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. 2016 ಅಕ್ಟೋಬರ್ 16ರ ಭಾನುವಾರ ಆರ್‍ಎಸ್‍ಎಸ್ ಪಥಸಂಚಲ ಮುಗಿಸಿ ವಾಪಸ್ ಬರುವಾಗ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರು.

2. ಮೈಸೂರಿನಲ್ಲಿ ಮಾರ್ಚ್ 13ರಂದು ರಾಜು ಎಂಬವರನ್ನು ಹತ್ಯೆ ಮಾಡಲಾಗಿತ್ತು. ನೇತಾಜಿ ಸರ್ಕಲ್‍ನಲ್ಲಿ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ದೊಣ್ಣೆಯಿಂದ ಹೊಡೆದು ಸಾಯಿಸಿದ್ರು.

3. ಬೊಮ್ಮಸಂದ್ರ ಮುನ್ಸಿಪಾಲಿಟಿ ಮೆಂಬರ್ ಕಿತ್ತಗಾನಹಳ್ಳಿ ವಾಸು ಎಂಬುವರನ್ನು ಮಾರ್ಚ್ 14ರಂದು ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿತ್ತು.

 

Share This Article
Leave a Comment

Leave a Reply

Your email address will not be published. Required fields are marked *