ಬೆಂಗ್ಳೂರಲ್ಲಿ 9 ಕೋಟಿ ರೂ. ಹಳೇ ನೋಟು ವಶ – ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅಳಿಯ ಅರೆಸ್ಟ್

Public TV
1 Min Read

ಬೆಂಗಳೂರು: ಬ್ಲ್ಯಾಕ್ ಅಂಡ್ ವೈಟ್ ಮನಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅವರ ಅಳಿಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವೀರಣ್ಣ ಮತ್ತಿಕಟ್ಟಿ ಅವರ ಅಳಿಯ ಪ್ರವೀಣ್ ಕುಮಾರ್ ಸೇರಿದಂತೆ 14 ಜನ ಆರೋಪಿಗಳನ್ನು ಬಂಧಿಸಲಾಗಿದೆ. 4 ದಿನಗಳ ಹಿಂದೆ 5 ಕೋಟಿ ರೂ. ಹಳೆಯ ನೋಟ್‍ಗಳನ್ನ ಜಪ್ತಿ ಮಾಡಿ ಐವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧಿತರ ವಿಚಾರಣೆ ನಡೆಸಿದ ನಂತರ ಸಿಕ್ಕ ಮಾಹಿತಿಯ ಮೇಲೆ ಕಾರ್ಯಾಚರಣೆ ನಡೆಸಿ ಇದೀಗ ಪ್ರವೀಣ್ ಕುಮಾರ್ ಸೇರಿದಂತೆ 14 ಆರೋಪಿಗಳನ್ನ ಬಂಧಿಸಲಾಗಿದೆ.

ರಿಯಲ್ ಎಸ್ಟೆಟ್ ಉದ್ಯಮಿ ಉಮೇಶ್ ಎಂಬವರಿಂದ ಹಣ ತಂದು ವೈಟ್ ಮಾಡಿಕೊಡುವುದಾಗಿ ಆರೋಪಿ ಪ್ರವೀಣ್ ಕುಮಾರ್ ಒಪ್ಪಿಕೊಂಡಿದ್ದರು. ಪ್ರವೀಣ್ ಕುಮಾರ್ ಜೊತೆ 14 ಜನ ಭಾಗಿಯಾಗಿದ್ರು ಎನ್ನಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ನಾಗರಬಾವಿ ನಿವಾಸಿಯಾಗಿದ್ದು, ನಾಗರಬಾವಿಯಲ್ಲಿ ಒಂದೂವರೆ ಎಕರೆ ಆಸ್ತಿಯನ್ನು ಹೊಂದಿದ್ದಾರೆ. ಆಸ್ತಿ ಮಾರಾಟ ಮಾಡುವ ವಿಚಾರಕ್ಕೆ ಬ್ಲ್ಯಾಕ್ ಅಂಡ್ ವೈಟ್ ಮನಿ ದಂಧೆಗೆ ಆರೋಪಿಗಳು ಮುಂದಾಗಿದ್ದರು ಎಂದು ಹೇಳಲಾಗಿದೆ.

ಶನಿವಾರ ರಾತ್ರಿ ನಾಗರಬಾವಿಯ ಬೆಸ್ಕಾಂ ಲೇಔಟ್‍ನಲ್ಲಿ ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿದ್ದ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 9 ಕೋಟಿ 10 ಲಕ್ಷ ರೂ. ಹಳೇ ನೊಟುಗಳನ್ನ ಜಪ್ತಿ ಮಾಡಿದ್ದಾರೆ. 25 ಕೋಟಿ ರೂ. ಹಳೆಯ ನೋಟಿನ ಜೊತೆ ಇನ್ನೊಂದು ಗ್ಯಾಂಗ್ ಪರಾರಿಯಾಗಿದೆ.

14 ಜನ ಆರೋಪಿಗಳಲ್ಲಿ ಮಂಜುನಾಥ್ ಎಂಬ ಆರೋಪಿ ಬಿಎಂಟಿಸಿ ಉದ್ಯೋಗಿಯಾಗಿದ್ದು, ಉಳಿದ 13 ಜನರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *