ಡಿಕೆಶಿ ಆಪ್ತನ ಮನೆಯಲ್ಲಿ ಹಣದ ಗೋಪುರ: ವಿಚಾರಣೆ ವೇಳೆ ಆಂಜನೇಯ ಹೇಳಿದ್ದೇನು?

Public TV
2 Min Read

ನವದೆಹಲಿ: ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬವನ್ನ ಅದ್ದೂರಿಯಾಗಿ ಆಚರಿಸುತ್ತಿದ್ದ ಇಂಧನ ಸಚಿವ ಡಿ.ಕೆ ಶಿವಕುಮಾರ್‍ಗೆ ಈ ಬಾರಿ ಐಟಿ ಸಂಕಟ ತಂದಿಟ್ಟಿದ್ದು,  ದೆಹಲಿಯ ಆಪ್ತ ಆಂಜನೇಯ ನಿವಾಸದಲ್ಲಿ ಜೋಡಿಸಿಟ್ಟಿದ್ದ 8.5 ಕೋಟಿ ನೋಟುಗಳು ಬಹಿರಂಗವಾಗಿವೆ.

100 ರೂ, 500 ರೂ ಮತ್ತು 2000 ಸಾವಿರ ನೋಟುಗಳನ್ನ ಪ್ರತ್ಯೇಕವಾಗಿ 3 ಸಾಲಿನಲ್ಲಿ ಕಂತೆ ಕಂತೆಯಾಗಿ ಜೋಡಿಸಿಡಲಾಗಿದೆ. ಇದೆಲ್ಲವೂ ದೆಹಲಿಯ ಸಫ್ದಾರ್‍ಜಂಗ್ ಎನ್‍ಕ್ಲೇವ್‍ನ ಡಿಕೆಶಿ ಮನೆಯಲ್ಲಿದ್ದ ಹಣವಾಗಿದೆ. ಗುರುವಾರ ವಿಚಾರಣೆ ವೇಳೆ ಆಂಜನೇಯ ಹಣ ಇರುವ ವಿಚಾರದ ಬಗ್ಗೆ ತಪ್ಪೊಪ್ಪಿಕೊಂಡಿದ್ದರು ಎನ್ನುವ ಮಾಹಿತಿಯನ್ನು ಮಾಧ್ಯಮವೊಂದು ಪ್ರಸಾರ ಮಾಡಿತ್ತು.

ಬೆಂಗಳೂರಿನ ಡಿಕೆಶಿ ನಿವಾಸದಲ್ಲಿ ಸತತ ಮೂರನೇ ದಿನವೂ ಐಟಿ ವಿಚಾರಣೆ ಮುಂದುವರಿದಿದೆ. ಬೆಳಗ್ಗಿನಿಂದಲೂ ಡ್ರಿಲ್ ಮಾಡಿರುವ ಐಟಿ ಅಧಿಕಾರಿಗಳು, ವಿವಿಧ ಬ್ಯಾಂಕ್ ಖಾತೆಗಳು ಹಾಗೂ ವಿದೇಶದ ಹಣದ ವ್ಯವಹಾರದ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಮೂರು ದಿನಗಳ ತನಿಖೆಯಲ್ಲಿ ನೂರು ಕೋಟಿಗೂ ಹೆಚ್ಚಿನ ಆಸ್ತಿ ಪತ್ರಗಳು ಸಿಕ್ಕಿದೆ ಎನ್ನಲಾಗಿದೆ. ಇವತ್ತು ರಾತ್ರಿಯೂ ತನಿಖೆ ಮುಂದುವರಿಯುವ ಸಾಧ್ಯತೆ ಇದೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿರ್ದೇಶನನದಲ್ಲಿ ನಾನು 5 ಕೋಟಿ ರೂ. ಹಣವನ್ನು ಸಾಗಿಸಿದ್ದೇನೆ ಎಂದು ಎಚ್.ಆಂಜನೇಯ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು.

ರಾಷ್ಟ್ರೀಯ ಸುದ್ದಿ ವಾಹಿನಿ ‘ಟೈಮ್ಸ್ ನೌ’ಗೆ ದೆಹಲಿಯ ಡಿಕೆಶಿ ನಿವಾಸದ ಮೇಲೆ ಮಾಡಿದ ದಾಳಿಯ ವೇಳೆ ಐಟಿ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯ ಪ್ರತಿ ಸಿಕ್ಕಿದ್ದು ಇದರಲ್ಲಿ ಆಂಜನೇಯ ಹಣದ ಮೂಲದ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದು ಸುದ್ದಿ ಪ್ರಸಾರ ಮಾಡಿತ್ತು.

ಹೇಳಿಕೆಯಲ್ಲೇನಿದೆ?: ಶೈಲೇಂದರ್ 1 ಕೋಟಿ ರೂ., 2.5 ಕೋಟಿ ರೂ., 1.5 ಕೋಟಿ ರೂ. ಸೇರಿ ಒಟ್ಟು 5 ಕೋಟಿ ರೂ. ಹಣವನ್ನು ತಂದಿದ್ದರು. ಕಳೆದ ವಾರ 1.60 ಕೋಟಿ ರೂ. ಹಣವನ್ನು ನಾನೇ ಸಾಗಿಸಿದೆ. ಸಚಿವ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ನಾನು ಹಣವನ್ನು ಬಿ2/107 ಮನೆಯಿಂದ ಬಹ/201 ಮನೆಗೆ ಸಾಗಿಸಿದ್ದೇನೆ. ಆದರೆ ಈ ಹಣವನ್ನು ನನ್ನ ಮೂಲಕವೇ ಯಾಕೆ ಸಾಗಿಸಿದ್ದಾರೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿರುವ ಪ್ರಶ್ನಾವಳಿಗೆ ಆಂಜನೇಯ ಸಹಿ ಹಾಕಿದ್ದಾರೆ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ.

ಡಿಕೆಶಿ ದೆಹಲಿಗೆ ಹೋಗಿದ್ದು ಯಾಕೆ?: ಇಂಧನ ಸಚಿವ ಡಿಕೆ ಶಿವಕುಮಾರ್ ಆಗಸ್ಟ್ 1ರಂದು ದೆಹಲಿಗೆ ಆಗಮಿಸಿದ್ದರು. ಜೆಟ್ ಏರ್ ವೇಸ್ ವಿಮಾನದಲ್ಲಿ ಆಗಮಿಸಿದ್ದ ಶಿವಕುಮಾರ್ ದೆಹಲಿಯ ಏರೋಸಿಟಿಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಹಣ ಸಂದಾಯವಾಗಿದೆಯಾ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆಯಂತೆ. ಐಟಿ ದಾಳಿ ವೇಳೆ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ನಿವಾಸದಿಂದ 7.5 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆದರೆ ಇದ್ಯಾವುದನ್ನೂ ಐಟಿ ಅಧಿಕಾರಿಗಳು ಇನ್ನೂ ಖಚಿತ ಪಡಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *