ದೀಪಕ್ ರಾವ್ ಕೊಲೆಗೆ 50 ಲಕ್ಷ ರೂ.ಸುಪಾರಿ: ಆರ್ ಅಶೋಕ್

Public TV
2 Min Read

ಬೆಂಗಳೂರು: ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಕೊಲೆಗೆ 50 ಲಕ್ಷ ರೂ. ಸುಪಾರಿ ನೀಡಲಾಗಿದೆ ಎಂದು ಮಾಜಿ ಗೃಹ ಸಚಿವ, ಮಾಜಿ ಡಿಸಿಎಂ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಮೌರ್ಯ ಸರ್ಕಲ್‍ನ ಬಳಿ ದೀಪಕ್ ಹತ್ಯೆ ಖಂಡಿಸಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಆರ್.ಅಶೋಕ್ ದೀಪಕ್ ಹತ್ಯೆಗೆ 50 ಲಕ್ಷ ಸುಪಾರಿ ನೀಡಿದ್ದಾರೆ. ಮಾಧ್ಯಮಗಳಲ್ಲಿ, ಪೊಲೀಸ್ ತನಿಖೆಯಲ್ಲಿ ಇದು ಗೊತ್ತಾಗಿದೆ. ಹಾಗಾದರೆ ಸುಪಾರಿ ಕೊಟ್ಟವರು ಯಾರು ಗೊತ್ತಾಗಬೇಕು. ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಯವರ ಕೇಸ್‍ಗಳು ನಡೆಸಲು ಎಲ್ಲಿಂದ ಹಣ ಬರುತ್ತೆ. ಈ ಬಗ್ಗೆಯೂ ತನಿಖೆ ಆಗಬೇಕು ಅಂತ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧದಲ್ಲಿ ಎರಡನೇ ಸ್ಥಾನದಲ್ಲಿದೆ. ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪರೇಶ್ ಮೆಸ್ತಾ ಸಾವು ಇನ್ನು ನಿಗೂಢವಾಗಿದೆ. ಪ್ರಕರಣ ಮುಚ್ಚಿ ಹಾಕುವ ಕೆಲಸ ಸರ್ಕಾರ ಮಾಡುತ್ತಿದೆ. ಮಂಗಳೂರಿನಲ್ಲಿ ದೀಪಕ್, ಬಶೀರ್ ಹತ್ಯೆಯಾಗಿದೆ. ಪೊಲೀಸ್ ಇಲಾಖೆಯನ್ನ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸಲಹೆಗಾರ ಕೆಂಪಯ್ಯ ಗೃಹ ಇಲಾಖೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ವಾಗ್ದಾಳಿ ನಡೆಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಮಲಿಂಗಾರೆಡ್ಡಿ ಗೃಹ ಸಚಿವರಾಗಿ ವಿಫಲರಾಗಿದ್ದಾರೆ. 4 ವರ್ಷಗಳಲ್ಲಿ 6525 ಕೊಲೆಗಳು ನಡೆದಿವೆ. ಸಾವಿರಾರು ಮಹಿಳೆಯರ ಕೊಲೆ, ಅಪಹರಣ, ಮಕ್ಕಳ ಅತ್ಯಾಚಾರ ನಡೆದಿದೆ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ದೀಪಕ್ ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೋರೇಟರ್ ಕೈವಾಡ ಇದೆ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಹೇಳಿಕೆ ಬೇಜಾವಾಬ್ದಾರಿಯಿಂದ ಕೂಡಿದೆ. ಎಚ್‍ಡಿಕೆ ಹೇಳಿಕೆಯನ್ನ ನಾನು ಖಂಡಿಸುತ್ತೇನೆ. ತನಿಖೆ ನಡೆಯುತ್ತಿದೆ ತನಿಖೆ ದಾರಿ ತಪ್ಪಿಸುವ ಕೆಲಸ ಕುಮಾರಸ್ವಾಮಿ ಮಾಡಬಾರದು. ತನಿಖೆಯಲ್ಲಿ ಸತ್ಯಾಸತ್ಯತೆ ಹೊರ ಬರುತ್ತೆ ಎಂದು ಎಚ್‍ಡಿಕೆ ವಿರುದ್ದ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದೀಪಕ್‍ ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೋರೇಟರ್ ಕೈವಾಡವಿದೆ: ಹೆಚ್‍ಡಿಕೆ

ಸಂಸದೆ ಶೋಭಾ ಕರಂದ್ಲಾಜೆ ಅವರು ಎಚ್‍ಡಿಕೆ ಹೇಳಿಯನ್ನು ಖಂಡಿಸಿದರು. ಕುಮಾರಸ್ವಾಮಿ ಹೇಳಿಕೆ ಅತ್ಯಂತ ಬೇಜಾವಾಬ್ದಾರಿ, ಕ್ಷುಲ್ಲಕ ಸುಳ್ಳು ಆರೋಪ ಮಾಡುತ್ತಿದ್ದಾರೆ. ಜಿಹಾದಿಗಳ ಮತಕ್ಕಾಗಿ ಒಂದು ಜನಾಂಗ ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ. ಕುಮಾರಸ್ವಾಮಿ ಅವರು ನಮ್ಮ ಜೊತೆ ಸರ್ಕಾರ ಮಾಡಿದವರು. ರಾಜ್ಯದಲ್ಲಿ ನಾಯಕರಾಗಿ ಬೆಳೆಯಬೇಕು ಎನ್ನುವ ಅವರು ತನಿಖೆ ದಾರಿ ತಪ್ಪಿಸುವ ಕೆಲಸ ಮಾಡಬಾರದರು ಎಂದು ಮನವಿ ಮಾಡಿದರು.

https://www.youtube.com/watch?v=0vDJV9oPKaI

Share This Article
Leave a Comment

Leave a Reply

Your email address will not be published. Required fields are marked *