ಗೀತಾ ಪೋಷಕರನ್ನು ಹುಡುಕಿಕೊಟ್ಟವರಿಗೆ ಸಿಗುತ್ತೆ 1 ಲಕ್ಷ ರೂ. ಬಹುಮಾನ

Public TV
1 Min Read

ನವದೆಹಲಿ: ಪಾಕಿಸ್ತಾನದಲ್ಲಿ ಹಲವು ದಶಕಗಳ ಕಾಲ ನೆಲೆಸಿ ಭಾರತಕ್ಕೆ ವಾಪಸ್ಸಾದ ಗೀತಾ ಪೋಷಕರಿಗಾಗಿ ಹುಡುಕಾಟ ಮುಂದುವರಿದಿದ್ದು, ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಒಂದು ಲಕ್ಷ ರೂ.ಹಣವನ್ನು ಬಹುಮಾನವಾಗಿ ಘೋಷಣೆ ಮಾಡಿದ್ದಾರೆ.

ತನ್ನ ಬಾಲ್ಯದಲ್ಲಿ ಭಾರತದ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ ಯುವತಿಯನ್ನು ಸುಷ್ಮಾ ಸ್ವರಾಜ್‍ರವರು ಭಾರತಕ್ಕೆ ವಾಪಸ್ ಕರೆತಂದು ಎರಡು ವರ್ಷಗಳೇ ಕಳೆದಿವೆ. ಪ್ರಸ್ತುತ ಗೀತಾ ಅವರು ಇಂದೋರ್‍ನ ಮೂಕ ಹಾಗೂ ಕಿವುಡರ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ.

ಸುಷ್ಮಾ ಅವರು ಈ ಕುರಿತು ವಿಡಿಯೋವನ್ನು ಬಿಡುಗಡೆಗೊಳಿಸಿದ್ದು, ಗೀತಾ ಕುಟುಂಬವರ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನವನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಗೀತಾರನ್ನು ಭಾರತಕ್ಕೆ ವಾಪಸ್ ಕರೆತಂದ ಸಂದರ್ಭದಲ್ಲಿ ಹಲವರು ಆಕೆ ತಮ್ಮ ಮಗಳೇ ಎಂದು ಆಗಮಿಸಿದ್ದರು. ಆದರೆ ಇದನ್ನು ಗೀತಾ ತನ್ನ ನಿರಾಕರಿಸಿದ್ದರು. ಗೀತಾ ಪ್ರಸ್ತುತ ಸಂಜ್ಞಾ ಭಾಷೆಯನ್ನು ಕಲಿತ್ತಿದ್ದು, ಕಂಪ್ಯೂಟರ್ ತರಬೇತಿಯನ್ನು ಪಡೆಯುತ್ತಿದ್ದಾರೆ.

ಗೀತಾ ಪೋಷಕರು ಎಲ್ಲೇ ಇದ್ದರೂ ಆಕೆಯನ್ನು ಕರೆದುಕೊಂಡು ಹೋಗಬೇಕು, ಆಕೆಯ ವಿದ್ಯಾಭ್ಯಾಸ ಮತ್ತು ಮದುವೆಗೆ ಬೇಕಾದ ಎಲ್ಲಾ ಸಹಾಯವನ್ನು ಸರ್ಕಾರವೇ ನೀಡುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ.

ಗೀತಾ ಬಿಹಾರ್ ಅಥವಾ ಜಾರ್ಖಡ್ ರಾಜ್ಯಕ್ಕೆ ಸೇರಿರಬೇಕು, ಆಕೆಯ ಕುರಿತು ವಾರದ 7 ದಿನಗಳು ಹೆಚ್ಚಿನ ಜಾಹೀರಾತನ್ನು ನೀಡಿ ಇದರಿಂದ ಆಕೆಯ ಪೋಷಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಎರಡು ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಸುಷ್ಮಾ ಸ್ವರಾಜ್ ಮನವಿ ಮಾಡಿಕೊಂಡಿದ್ದಾರೆ.

ಗೀತಾ ತನ್ನ 7-8 ವಯಸ್ಸಿನಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ತೆರಳುವ ಸಂಜೋತಾ ಎಕ್ಸ್‍ಪ್ರೆಸ್‍ನಲ್ಲಿ ಒಬ್ಬಳೇ ಪ್ರಯಾಣ ಬೆಳೆಸಿ ಲಾಹೋರ್ ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿದ್ದಳು. ಈಕೆಯ ಮೂಲ ಹೆಸರು ಗುಡ್ಡಿ ಎಂದಾಗಿದ್ದು, ಪಾಕಿಸ್ತಾನದಲ್ಲಿ ಈಕೆಗೆ ಆಶ್ರಯವನ್ನು ನೀಡಿದ್ದ ಈಧಿ ಸಂಘಟನೆಯವರು ಈಕೆಗೆ ಗೀತಾ ಎಂಬ ಹೆಸರನ್ನು ಇಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *