ಪ್ರೀತಿ ಒಲ್ಲೆ ಎಂದಿದ್ದಕ್ಕೆ ಪಾಗಲ್ ಪ್ರೇಮಿಯಿಂದ ಬೆಂಗ್ಳೂರು ಗಗನಸಖಿಯ ಕಿವಿಕಟ್!

Public TV
2 Min Read

ಬೆಂಗಳೂರು: ಪ್ರೀತಿಸಲ್ಲ ಎಂದು ಹೇಳಿದ್ದಕ್ಕೆ ರೌಡಿ ಶೀಟರ್ ಗಗನ ಸಖಿಯ ಕಿವಿಯನ್ನು ಹರಿದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ರೌಡಿ ಶೀಟರ್ ಅಜಯ್ ಅಲಿಯಾಸ್ ಜಾಕಿ ಯುವತಿಗೆ ಬೆದರಿಕೆ ಹಾಕಿ ಕಿವಿಯನ್ನು ಚಾಕುವಿನಿಂದ ಕಿವಿಯನ್ನು ಕತ್ತರಿಸಿದ್ದಾನೆ. ಗಗನ ಸಖಿ ಮೇಲೆ ಹಲ್ಲೆ ನಡೆಸಿ ಅಜಯ್ ಈಗ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಏನಿದು ಪ್ರಕರಣ?
ಯುವತಿ ಇಂಡಿಗೊ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಜಾಕಿ ಪ್ರಪೋಸ್ ಮಾಡಿದ್ದ. ಇದಕ್ಕೆ ಒಪ್ಪದ ಯುವತಿ ಜಾಕಿ ಲವ್ ಪ್ರಪೋಸ್ ರಿಜೆಕ್ಟ್ ಮಾಡಿದ್ದಳು. ನಂತರ ಮನೆಯವರಿಗೆ ತಿಳಿಸಿ ರೌಡಿ ಅಜಯ್‍ಗೆ ಎಚ್ಚರಿಕೆ ಕೊಡಿಸಿದ್ದಳು.

ಇದಕ್ಕೆ ಬಗ್ಗದ ಜಾಕಿ ಯುವತಿಯ ಮನೆಗೆ ತೆರಳಿ ಕಾರು ಹಾಗೂ ಬೈಕ್ ಗ್ಲಾಸ್‍ಗಳನ್ನು ಪುಡಿ ಮಾಡಿದ್ದ. ಈತನ ಕಾಟದಿಂದ ಬೇಸತ್ತ ಗಗನಸಖಿಯ ಮನೆಯವರು ದೂರು ನೀಡಿದ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸರು ಜಾಕಿಯನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದರು.

ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಕ್ಕೆ ಯುವತಿಯ ಮೇಲೆ ಸೇಡು ತೀರಿಸಲು ಜಾಕಿ ಕಾದು ಕುಳಿತ್ತಿದ್ದ. ಮೇ 12ರಂದು ಸಂಜೆ ಯುವತಿ ಕೆಲಸ ಮುಗಿಸಿ ಸಂಜೆ ಮನೆಗೆ ಕ್ಯಾಬ್‍ನಲ್ಲಿ ಬರುತ್ತಿದ್ದ ವೇಳೆ ಹೆಬ್ಬಾಳ ಬಳಿ ಜಾಕಿ ಹಲ್ಲೆ ನಡೆಸಿದ್ದಾನೆ.

ಹೆಬ್ಬಾಳ ಸಿಗ್ನಲ್ ಬಳಿ ಯುವತಿ ಇದ್ದ ಕ್ಯಾಬ್ ನಿಂತಾಗ, ಹಿಂದೆ ಬೇರೊಂದು ಕಾರಿನಲ್ಲಿದ್ದ ಜಾಕಿ ಬಂದು ಕ್ಯಾಬ್ ಹತ್ತಿದ್ದಾನೆ. ಬಳಿಕ ಚಾಕು ತೋರಿಸಿ ಕ್ಯಾಬ್ ಡ್ರೈವರ್ ಗೆ ಕಾರನ್ನು ಚಲಾಯಿಸುವಂತೆ ಹೆದರಿಸಿದ್ದಾನೆ. ಈ ವೇಳೆ ಕ್ಯಾಬ್ ಡ್ರೈವರ್ ಪ್ರತಿರೋಧ ತೋರಿದಾಗ ಡ್ರೈವರ್ ಭುಜಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ನಂತರ ಯುವತಿಯ ಬಳಿ ನನ್ನ ಪ್ರೀತಿಸು, ನನ್ನ ಮೇಲಿನ ಕೇಸನ್ನು ಹಿಂದಕ್ಕೆ ಪಡೆದುಕೋ, ನಿನ್ನಿಂದಾಗಿ ನನ್ನ ಮೇಲೆ ರೌಡಿಶೀಟರ್ ಓಪನ್ ಆಗಿದೆ ಎಂದು ಹೇಳಿದ್ದಾನೆ. ಈ ಮಾತಿಗೆ ಯುವತಿ ಒಪ್ಪದೇ ಇದ್ದಾಗ ಚಾಕುವಿನಿಂದ ಯುವತಿಯ ಕಿವಿಗಳನ್ನು ರೌಡಿ ಕತ್ತರಿಸಿದ್ದಾನೆ. ಗಾಯಗೊಂಡಿರುವ ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿ ಜಾಕಿಯನ್ನ ಕೂಡಲೇ ಬಂಧಿಸುವಂತೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ. ಸದ್ಯ ಜಾಕಿಯ ಹಿಂದೆ ಬಿದ್ದಿರುವ ಕೋಡಿಗೆಹಳ್ಳಿ ಠಾಣೆ ಪೊಲೀಸರು, ನಾಲ್ಕು ದಿನದಿಂದ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *