ಬೆಂಗಳೂರು ಪೊಲೀಸರ ವಿರುದ್ಧ ರೌಡಿಗಳ ಸ್ಕೆಚ್!

Public TV
1 Min Read

ಬೆಂಗಳೂರು: ರೌಡಿಗಳ ಸಭೆ ಕೇಳಿದ್ರಾ? ಇಲ್ಲದ್ರೆ ಕೇಳಿ. ರೌಡಿಗಳ ಮೇಲೆ ಪೊಲೀಸ್ ದಾಳಿ ನಡೆಸಿದ್ದಕ್ಕೆ ಈಗ ಬೆಂಗಳೂರಿನ ರೌಡಿಗಳು ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದು ಭಯಂಕರ ಅಪರಾಧಗಳನ್ನು ನಡೆಸಲು ಮುಂದಾಗಿದ್ದಾರೆ.

ಹೌದು. ಸೈಲೆಂಟ್ ಸುನಿಲ್, ಒಂಟೆ ರೋಹಿತನ ಬಂಧನ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ನಗರದ ಅಪಾರ್ಟ್ ಮೆಂಟ್‍ನಲ್ಲಿ ರೌಡಿಗಳು ಸಭೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

ನಿರ್ದಾಕ್ಷಿಣ್ಯವಾಗಿ ರೌಡಿಗಳನ್ನು ಬಂಧನ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲಲು ರೌಡಿಗಳು ಪ್ಲಾನ್ ಮಾಡಿದ್ದಾರೆ. ಭಯಂಕರವಾಗಿ ಅಪರಾಧ ನಡೆಸಿ ಪೊಲೀಸರಿಗೆ ರೌಡಿ ಚಟುವಟಿಕೆ ಬಿಸಿ ಮುಟ್ಟಿಸೋಕೆ ಸಭೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಬಾಳ್ಕರ್, ಇಲ್ಲಿಯವರೆಗೆ ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೆವು. ಇನ್ನು ಮುಂದೆ ರೌಡಿಗಳ ಅಕ್ರಮ ಆಸ್ತಿಗಳನ್ನು ಕಲೆ ಹಾಕಲಾಗುವುದು ಎಂದು ಹೇಳಿದ್ದರು.

ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಹೊಣೆ. ಕಾನೂನು ಸುವ್ಯವಸ್ಥೆ ವಿರುದ್ಧವಾಗಿದ್ದವರನ್ನು ಸುಮ್ಮನೇ ಬಿಡುವುದಿಲ್ಲ. ಸಾರ್ವಜನಿಕರು ಧೈರ್ಯವಾಗಿ ಮುಂದೆ ಬಂದು ದೂರು ನೀಡಿ. ಸ್ಥಳೀಯ ಠಾಣೆಗಳಿಗೆ ದೂರು ನೀಡಿ, ಇಲ್ಲವಾದಲ್ಲಿ ನಮ್ಮ ಬಳಿ ಬನ್ನಿ ಎಂದು ಅವರು ತಿಳಿಸಿದ್ದರು.

ಬೆಂಗಳೂರಿನಲ್ಲಿ ಅಂಡರ್ ವಲ್ರ್ಡ್ ಮಾಫಿಯಾ, ರಿಯಲ್ ಎಸ್ಟೇಟ್, ಪುಡಿ ರೌಡಿಗಳ ಉಪಟಳ ಹೆಚ್ಚಾಗಿದೆ. ಗುಂಪಿನಲ್ಲಿದ್ದರೆ ಮಾತ್ರ ಅವರು ರೌಡಿಗಳು, ಒಬ್ಬರೆ ಇದ್ದರೆ ಇವರು ಪುಕ್ಕಲರು. ಭೂಮಾಫಿಯಾ, ಗಾರ್ಬೆಜ್ ಮಾಫಿಯಾ, ಸಂಬಂಧ ವಿಲ್ಲದ ವಿಚಾರಗಳಿಗೆ ತಲೆಹಾಕುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಮಂತ್ ನಿಂಬಾಳ್ಕರ್ ಎಚ್ಚರಿಕೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *