ಜಾಗತಿಕ ಸಮುದಾಯದ ಒತ್ತಡಕ್ಕೆ ಭಯಪಡಲ್ಲ: ಆಂಗ್ ಸಾನ್ ಸೂಕಿ

Public TV
2 Min Read

ನೇಪಿಡಾ: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆ ಆಗುತ್ತಿರುವ ರೋಹಿಂಗ್ಯಾ ಮುಸ್ಲಿಮರ ಸಂಘರ್ಷದಲ್ಲಿ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಹೇಳಿದ್ದಾರೆ.

ಮ್ಯಾನ್ಮಾರ್ ವಿದೇಶಾಂಗ ಸಚಿವೆ ಆಗಿರುವ ಆಂಗ್ ಸಾನ್ ಸೂಕಿ, ತಮ್ಮ ದೇಶದಲ್ಲಿ ನಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮ್ ಸಂಘರ್ಷದ ಕುರಿತು ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಮೌನವನ್ನು ಮುರಿದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಟೀಕೆಗಳನ್ನು ಎದುರಿಸುತ್ತಿರುವ ಮ್ಯಾನ್ಮಾರ್, ದೇಶದ ಕಾನೂನು ಸುವ್ಯವಸ್ಥೆಯ ರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡುತ್ತದೆಯೇ ಹೊರತು ಜಾಗತಿಕ ಸಮುದಾಯದ ಒತ್ತಡಕ್ಕೆ ಭಯ ಪಡುವುದಿಲ್ಲ. ಇಲ್ಲಿನ ವಸ್ತು ಸ್ಥಿತಿಯನ್ನು ಕಣ್ಣಾರೆ ಕಂಡಾಗ ಮಾತ್ರ ಪರಿಸ್ಥಿತಿಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಹಲವು ತಿಂಗಳುಗಳ ಕಾಲ ಶಾಂತಿ ಹಾಗೂ ಸುವ್ಯವಸ್ಥೆ ಸ್ಥಾಪನೆಯಾಗಿತ್ತು. ಆದರೆ ಆಗಸ್ಟ್ 25 ರಂದು 30 ಪೊಲೀಸ್ ಔಟ್‍ಪೋಸ್ಟ್ ಮೇಲೆ ಮುಸ್ಲಿಂ ಶಸ್ತ್ರಸಜ್ಜಿತ ಗುಂಪುಗಳು ದಾಳಿಯನ್ನು ನಡೆಸುವ ಮೂಲಕ ಅಶಾಂತಿಯನ್ನು ಸೃಷ್ಟಿಸಿತ್ತು. ಈ ದಾಳಿಯನ್ನು ನಡೆಸಿದ ಅರ್ಕನ್ ರೋಹಿಂಗ್ಯಾ ಮುಸ್ಲಿಮ್ ಸಂಘಟನೆಯನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಲಾಗಿದೆ ಎಂದರು.

ಮಾಧ್ಯಮಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅಪಪ್ರಚಾರವನ್ನು ಮಾಡುತ್ತಿವೆ. ಬೇರೆ ಯಾವ ಭಾಗದಲ್ಲಿಯೂ ನಡೆಯದ ಘಟನೆಗಳು ಇಲ್ಲಿ ಮಾತ್ರ ಏಕೆ ನಡೆಯುತ್ತಿವೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. 70 ವರ್ಷಗಳ ಅಂತಾರಾಷ್ಟ್ರೀಯ ಸಂಘರ್ಷದ ನಂತರ ಮ್ಯಾನ್ಮಾರ್ ನಲ್ಲಿ ಶಾಂತಿ ನೆಲೆಸಿದೆ. ಹಲವು ಮುಸ್ಲಿಮ್ ಕುಟುಂಬಗಳು ಇಂದಿಗೂ ಮ್ಯಾನ್ಯಾರ್ ಹಳ್ಳಿಗಳಲ್ಲಿ ಉಳಿದುಕೊಂಡಿವೆ ಎಂದು ಮಾಹಿತಿ ನೀಡಿದರು.

ಮಾನವ ಹಕ್ಕುಗಳ ರಕ್ಷಣೆಗಾಗಿ ದೇಶದ ಎಲ್ಲ ಗಡಿ ಪ್ರದೇಶಗಳನ್ನು ಒಳಗೊಂಡಂತೆ ಪ್ರತ್ಯೇಕ ಸಮಿತಿಯೊಂದನ್ನು ನಮ್ಮ ಸರ್ಕಾರವು ರಚಿಸಿದೆ. ನಮ್ಮ ದೇಶದಲ್ಲಿ ನಾವು ಶಾಂತಿ ನೆಲೆಸುವುದನ್ನು ಬಯಸುತ್ತೇವೆ. ಅಲ್ಲದೆ ಎಲ್ಲಾ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸಹ ಖಂಡಿಸುತ್ತೇವೆ ಎಂದರು.

ದೇಶವನ್ನು ತೊರೆದಿರುವ 4 ಲಕ್ಷ ರೋಹಿಂಗ್ಯಾ ಮುಸ್ಲಿಮರು ಮತ್ತೆ ಮ್ಯಾನ್ಯಾರ್ ಗೆ ಬರಲು ಬಯಸಿದರೆ ವಾಪಸ್ ಕರೆತರಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ರೋಹಿಂಗ್ಯಾ ಮುಸ್ಲಿಮರಲ್ಲಿ ಸಾಮರಸ್ಯವನ್ನು ತಂದು ದೇಶದಲ್ಲಿ ಮತ್ತೆ ಶಾಂತಿಯನ್ನು ಸ್ಥಾಪಿಸಲು ನಾವು ಮುಂದಾಗುತ್ತೇವೆ. ಈ ರೀತಿಯ ಸಂಘರ್ಷ ನಡೆಯಲು ಕಾರಣ ಏನೆಂಬುದನ್ನು ತಿಳಿಯಲು ನಾವು ರೋಹಿಂಗ್ಯಾರ ಜೊತೆ ಮಾತುಕತೆ ನಡೆಸುತ್ತೇವೆ ಎಂದರು.

ಮ್ಯಾನ್ಯಾರ್ ಸೇನೆ ರೋಹಿಂಗ್ಯಾ ಮುಸ್ಲಿಮರು ನೆಲೆಸಿರುವ ಗ್ರಾಮಗಳಿಗೆ ತೆರಳಿ ಅವರಿಗೆ ಹಿಂಸೆ ನೀಡಿದ್ದು ಅಲ್ಲದೇ ಅವರನ್ನು ಅಲ್ಲಿಂದ ಓಡಿಸಿದ್ದಾರೆ ಎಂದು ವಿಶ್ವಸಂಸ್ಥೆ ಆರೋಪಿಸಿತ್ತು.

ಇದನ್ನೂ ಓದಿ: ರೋಹಿಂಗ್ಯಾ ಮುಸ್ಲಿಮರಿಂದ ದೇಶದ ಭದ್ರತೆಗೆ ಅಪಾಯ- ಭಾರತ ಸರ್ಕಾರ

Share This Article
Leave a Comment

Leave a Reply

Your email address will not be published. Required fields are marked *