ಯಾವುದೇ ಬೆದರಿಕೆ ಕರೆ ನನಗೆ ಬಂದಿಲ್ಲ- ರಾಕಿಂಗ್ ಸ್ಟಾರ್

Public TV
2 Min Read

-ನನ್ನನ್ನು ಯಾರೂ ಏನೂ ಮಾಡಕ್ಕಾಗಲ್ಲ

ಬೆಂಗಳೂರು: ಇಂದು ಬೆಳಗ್ಗೆಯಿಂದ ಕೆಲವು ಸುದ್ದಿಗಳು ಬಿತ್ತರವಾಗುತ್ತಿದ್ದು, ಕೆಲವರು ಅನಾವಶ್ಯಕವಾಗಿ ನನ್ನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಂಧಿತರ ಮೇಲೆ ದಾಖಲಾದ ಎಫ್‍ಐಆರ್ ನ್ನು ನಾನು ನೋಡಿದ್ದು, ಅಲ್ಲಿಯೂ ಕೇವಲ ನಟ ಎಂಬುವುದು ಮಾತ್ರ ಉಲ್ಲೇಖಿಸಲಾಗಿದೆ. ಈ ರೀತಿ ನನ್ನ ಹೆಸರು ಬಳಕೆ ಮಾಡುವುದರಿಂದ ಆಪ್ತರು ಹಾಗೂ ಕುಟುಂಬಸ್ಥರಲ್ಲಿ ಭಯದ ವಾತಾವರಣ ನಿರ್ಮಾಣ ಆಗುತ್ತಿದೆ ಎಂದು ನಟ ಯಶ್ ಬೇಸರ ವ್ಯಕ್ತಪಡಿಸಿದರು.

ಈ ಸಂಬಂಧ ನಾನು ಗೃಹಸಚಿವ ಎಂ.ಬಿ.ಪಾಟೀಲ್ ಜೊತೆ ಮಾತನಾಡಿದ್ದು, ಅವರು ಸಹ ಆ ನಟ ನಾನು ಅಲ್ಲ ಎಂಬುವುದನ್ನು ಖಚಿತ ಪಡಿಸಿದ್ದಾರೆ. ನಟನೊಬ್ಬನ ಕೊಲೆಗೆ ಸುಪಾರಿ ನೀಡುವಂತಹ ಕಲಾವಿದರು ನಮ್ಮ ಇಂಡಸ್ಟ್ರಿಯಲ್ಲಿ ಇಲ್ಲ. ಈ ರೀತಿಯ ಸ್ಟೋರಿಗಳಿಂದ ಚಂದನವನದ ವಾತಾವರಣ ಹಾಳಾಗುತ್ತದೆ. ಇಂದು ಬೆಳಗ್ಗೆ ನನಗೆ ನೂರಾರು ಕರೆಗಳು ಬರುತ್ತಿವೆ. ನನ್ನ ಮೇಲಿನ ಕಾಳಜಿಯಿಂದ ಸುದ್ದಿಗಳು ಬಿತ್ತರವಾಗುತ್ತಿವೆ ಎಂದರು.

ನನಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ. ಪದೇ ಪದೇ ನನ್ನ ಹೆಸರುಗಳನ್ನು ತೇಲಿ ಬಿಡಲಾಗುತ್ತಿದೆ. ನಮಗೆ ಲಭ್ಯವಿರುವ ಮಾಹಿತಿಯ ಮೇಲೆ ಸುದ್ದಿ ಬಿತ್ತರವಾಗಿದೆ ಎಂದು ಹೇಳುತ್ತಿದ್ದಾರೆ. ನನ್ನನ್ನು ಯಾರೂ ಏನು ಮಾಡೋದಕ್ಕೆ ಆಗಲ್ಲ. ನನ್ನ ಹತ್ಯೆ ವಿಚಾರ ಕೇವಲ ಊಹಾಪೋಹ. ಸಿಸಿಬಿ ಡಿಜಿಪಿ ಅಲೋಕ್ ಕುಮಾರ್ ಜೊತೆ ಎರಡು ಗಂಟೆ ಮೊದಲು ಮಾತನಾಡಿದ್ದು, ಇದೊಂದು ಇಂಡಸ್ಟ್ರಿಯ ನಿರ್ಮಾಪಕರ ಜಗಳ ಎಂದು ವೈಯಕ್ತಿಕವಾಗಿ ಹೇಳಿದರು. ಈ ಪ್ರಕರಣದಲ್ಲಿ ಯಾವ ಸ್ಟಾರ್ ಕಲಾವಿದರು ಇಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ ಎಂದು ತಿಳಿಸಿದರು.

ಏನಿದು ಪ್ರಕರಣ?
ಕನ್ನಡ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಲಾಗಿತ್ತು. ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ, ವಿಜಯನಗರದ ಮಧು ಹಾಗೂ ಪಿಜಿಹಳ್ಳಿಯ ಪೃಥ್ವಿ ಬಂಧಿತ ಆರೋಪಿಗಳು. ಸಿಸಿಬಿ ಪೊಲೀಸರು ಶೇಷಾದ್ರಿಪುರಂ ಠಾಣೆಯ ಬಿಡಿಎ ಕಚೇರಿ ಬಳಿ ಆರೋಪಿಗಳನ್ನ ಬಂಧಿಸಲಾಗಿತ್ತು. ಆದ್ರೆ ಯಾವ ಸ್ಟಾರ್ ನಟನನ್ನು ಹತ್ಯೆ ಮಾಡಲು ಸುಪಾರಿ ನೀಡಲಾಗಿತ್ತು ಎಂಬುದನ್ನು ಪೊಲೀಸರು ಬಹಿರಂಗಗೊಳಿಸರಿಲಿಲ್ಲ.

ಮಾರ್ಚ್ 7 ರಂದು ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿ, ನಾಲ್ವರ ಬಳಿಯೂ ಲಾಂಗು ಮತ್ತು ಡ್ರಾಗರ್ ಸೇರಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಸಿಬಿ ದಾಳಿ ವೇಳೆ ಐದು ಮಂದಿ ಸ್ಥಳದಲ್ಲಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳೆಲ್ಲ ಸ್ಲಂ ಭರತನ ಸಹಚರರು ಎಂದು ಗುರುತಿಸಲಾಗಿದೆ.

ಭರತ ಯಾರು?
ಸ್ಲಂ ಭರತ ರಾಜಗೋಪಾಲನಗರ ಠಾಣೆ ರೌಡಿಶೀಟರ್ ಆಗಿದ್ದು, ಕೊಲೆ ಮತ್ತು ಕೊಲೆಯತ್ನ ಸೇರಿ ಸುಮಾರು 30ಕ್ಕೂ ಹೆಚ್ಚು ಕೇಸ್ ಭರತನ ಮೇಲೆ ದಾಖಲಾಗಿದೆ. ಎಡರು ದಿನಗಳ ಹಿಂದೆಯಷ್ಟೆ ಕೊಲೆಯಾಗಿ ರೌಡಿ ಲಕ್ಷ್ಮಣನ ಶಿಷ್ಯನೇ ಈ ಸ್ಲಂ ಭರತ ಎಂದು ತಿಳಿದು ಬಂದಿದೆ. ಕನ್ನಡದ ನಟರೊಬ್ಬರ ಹತ್ಯೆಗೆ ಸುಪಾರಿ ಪಡೆದಿದ್ದಾಗಿ ಸ್ಲಂ ಭರತ ಹೇಳಿಕೊಂಡಿದ್ದನು. ಈ ವಿಚಾರವನ್ನ ಬಾರ್‍ವೊಂದರಲ್ಲಿ ತನ್ನ ಸಹಚರರ ಜೊತೆ ಚರ್ಚಿಸಿದ್ದು, ಕನ್ನಡದ ನಟನ ಹತ್ಯೆಗೆ ಸ್ಲಂ ಭರತ ಸಿದ್ಧತೆ ನಡೆಸಿರುವುದು ಪೊಲೀಸರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸ್ಲಂ ಭರತನ ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿ ಸ್ಲಂ ಭರತ ಇದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *