ಹುಬ್ಬಳ್ಳಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ರು ನಟ ಯಶ್

Public TV
1 Min Read

ಬೆಂಗಳೂರು: ನಟಸಾರ್ವಭೌಮ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ ನಟ ಯಶ್ ಹುಬ್ಬಳ್ಳಿ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿರುವ ಯಶ್, ಅನಿವಾರ್ಯ ಕಾರಣಗಳಿಂದ ಇಂದು ವಿಮಾನ ಕೈತಪ್ಪಿದ್ದು, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ನನ್ನ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಹುಬ್ಬಳ್ಳಿ ಭಾಗದ ಅಭಿಮಾನಿಗಳ ಕ್ಷಮೆ ಕೋರುತ್ತೇನೆ. ಪವರ್ ಸ್ಟಾರ್ ಅಪ್ಪು ರವರು, ಸಹೃದಯಿ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ರವರು, ನಿರ್ದೇಶಕರಾದ ಸಹೋದರ ಪವನ್ ಒಡೆಯರ್, ಛಾಯಾಗ್ರಾಹಕರಾದ ವೈದಿ ಸೇರಿದಂತೆ ನಟಸಾರ್ವಭೌಮ ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಅಪ್ಪು ರವರ ಮೇಲಿನ ನಿಮ್ಮ ಪ್ರೀತಿ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲಿ ಎಂದು ಹಾರೈಸಿದ್ದಾರೆ.

ಗಂಡು ಮೆಟ್ಟಿದ ನಾಡು ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಕ್ರೀಡಾಂಗಣದಲ್ಲಿ ತುಂಬಿ ತುಳುಕಿರುವ ಜನ ಸಾಗರದ ನಡುವೆ ಪುನೀತ್ ರಾಜಕುಮಾರ್, ನಟಿ ರಜಿತಾ ರಾಮ್, ಚಿತ್ರದ ಮತ್ತೊಬ್ಬ ನಾಯಕಿ ಅನುಪಮಾ ಪರಮೇಶ್ವರ ಸೇರಿದಂತೆ ಖ್ಯಾತ ಗಾಯಕ ವಿಜಯ ಪ್ರಕಾಶ್, ಜಯಂತಿ ಕಾಯ್ಕಿಣಿ, ಯೋಗರಾಜ್ ಭಟ್, ಸಾಧು ಕೋಕಿಲಾ, ರವಿಶಂಕರ್, ಕಾಮಿಡಿ ನಟ ಚಿಕ್ಕಣ್ಣ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *