ದರೋಡೆ ಮಾಡಿ ತಪ್ಪನ್ನ ಕ್ಷಮಿಸುವಂತೆ ದೇವರ ಮೊರೆ ಹೋದ್ರು – ದೇವಾಲಯದಲ್ಲೇ ಪೊಲೀಸರಿಗೆ ಸೆರೆಯಾದ್ರು

Public TV
1 Min Read

ಬೆಂಗಳೂರು: ದರೋಡೆ ಮಾಡಿ ತಪ್ಪನ್ನು ಕ್ಷಮಿಸುವಂತೆ ದೇವರ ಮೊರೆ ಹೋಗುತ್ತಿದ್ದ ಖತರ್ನಾಕ್ ದರೋಡೆಕೋರರನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ನಗರದ ಹೊರವಲಯ ನೆಲಮಂಗಲ ಪಟ್ಟಣ ಪೊಲೀಸರು ಕುಖ್ಯಾತ ದರೋಡೆಕೋರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಶೋಕಿಗಾಗಿ ದರೋಡೆ ಮಾಡುವ ವೃತ್ತಿಯನ್ನು ಆರಂಭಿಸಿದ್ದರು. ದರೋಡೆ ಮಾಡಿದ ಬಳಿಕ ಮಾಡಿದ ತಪ್ಪನ್ನ ಕ್ಷಮಿಸುವಂತೆ ದೇವರ ಮೊರೆ ಹೋಗುತ್ತಿದ್ದರು. ಆದರೆ ದೇವರ ಮೊರೆ ಹೋದಾಗಲೇ ಗ್ರಹಚಾರ ಕೈಕೊಟ್ಟು ಪೊಲೀಸರ ಅತಿಥಿಗಳಾಗಿದ್ದಾರೆ.

ಕಳೆದ ಒಂದು ವಾರದ ಹಿಂದೆ ನೆಲಮಂಗಲ ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಫೈನಾನ್ಸಿಷಯರ್ ಮೇಲೆ ಹಲ್ಲೆ ಮಾಡಿ, ಚಿನ್ನಾಭರಣಗಳೊಂದಿಗೆ ಐದು ಮಂದಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೆನ್ನತ್ತಿದ ಪೊಲೀಸರು ಸಿಸಿಟಿವಿ ದೃಶ್ಯ ಆಧಾರಿಸಿ ವಿನೋದ್, ವಿಜಯ್, ಶಿವರಾಜ್, ಅನಿಲ್ ಹಾಗೂ ಒಬ್ಬ ಅಪ್ರಾಪ್ತ ಆರೋಪಿ ಸೇರಿದಂತೆ ಐದು ಜನರನ್ನು ಬಂಧಿಸಿದ್ದಾರೆ.

ಬಂಧಿತರು ನಗರದ ಕಮಲನಗರ ಹಾಗೂ ಕಾಮಾಕ್ಷಿಪಾಳ್ಯದ ನಿವಾಸಿಗಳಾಗಿದ್ದು, ಶೋಕಿಗಾಗಿ ದರೋಡೆ ಮಾಡಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 2 ಬೈಕ್, 3 ಲಕ್ಷ 50 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಾಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಬೆಂಗಳೂರು ಗ್ರಾಮಾಂತರ ಎಸ್.ಪಿ ಭೀಮಶಂಕರ್ ಎಸ್ ಗುಳೇದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *