ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು

Public TV
3 Min Read

– ಹಣವನ್ನು ದೋಚಿ ಮನೆಯಲ್ಲೇ ಮದ್ಯ ಕುಡಿದಿದ್ದ ಕಳ್ಳರು

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಮನೆಯಿಂದ 2 ಕೋಟಿ ಹಣವನ್ನು ಕದ್ದಿದ್ದ ಕಳ್ಳರನ್ನು ಮದ್ಯ ಬಾಟಲಿಯಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕುಮಾರಸ್ವಾಮಿ ಲೇಔಟ್‍ನ ನಿವಾಸಿ ವಾಸ್ತು ಶಿಲ್ಪಿ ಸಂದೀಪ್ ಲಾಲ್ ಮನೆಯಲ್ಲೇ 2 ಕೋಟಿ ರೂ. ದೋಚಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಶಿವಕುಮಾರ್, ಪಿಎಸ್‍ಐ ನಾಗೇಶ್ ನೇತೃತ್ವದ ತಂಡ, ಘಟನಾ ಸ್ಥಳದಲ್ಲಿ ಸಿಕ್ಕಿದ ಬೆರಳಚ್ಚು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಕಳ್ಳರನ್ನು ಪತ್ತೆ ಮಾಡಲಾಗಿದೆ. ಇದನ್ನೂ ಓದಿ:  2 ಲಕ್ಷ ದೋಚಲು ಬಂದು 2 ಕೋಟಿ ಕಳ್ಳತನ – ಓನರ್ ಮನೆಗೆ ಐಟಿ, ಇಡಿ, ಎಂಟ್ರಿ ಸಾಧ್ಯತೆ

ಪೊಲೀಸರಿಗೆ ಕಳ್ಳತನ ಮಾಡಿರುವುದಾಗಿ ದೂರು ಬಂದ ನಂತರ ಅವರು ತನಿಖೆ ಪ್ರಾರಂಭಿಸಿದ್ದಾರೆ. ಈ ವೇಳೆ ಪೊಲೀಸರಿಗೆ, ಆರೋಪಿಗಳು ಕುಡಿದು ಎಸೆದ ಮದ್ಯದ ಬಾಟಲಿ ಸೇರಿದಂತೆ ಮನೆಯಲ್ಲಿ ಬೆರಳಚ್ಚು ಮುದ್ರೆ ಸಂಗ್ರಹಿಸಿದ್ದರು. ನಂತರ ಆ ಬೆರಳಚ್ಚು ಮಾದರಿಗಳನ್ನು ಹಳೇ ಕಳ್ಳರ ಬೆರಳಚ್ಚಿಗೆ ಹೋಲಿಸಿದಾಗ ಸುನೀಲ್ ಎಂಬಾತನ ಬೆರಳಚ್ಚಿಗೆ ಹೋಲಿಕೆಯಾಗುತ್ತಿತ್ತು. ಈ ಸುಳಿವಿನ ಜಾಲವನ್ನು ಹುಡುಕಿಕೊಂಡು ಪೊಲೀಸರು ಕಾರ್ಯಾಚರಣೆ ಮಾಡಲು ಪ್ರಾರಂಭ ಮಾಡಿದ್ದಾರೆ. ಆಗ ಆರೋಪಿಗಳು ಪತ್ತೆಯಾಗಿದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಸುಬ್ರಹ್ಮಣ್ಯಪುರದ ಇಟ್ಟಮಡುವಿನ ಸುನೀಲ್ ಕುಮಾರ್ ಅಲಿಯಾಸ್ ತೊರೆ ಹಾಗೂ ಮಾಗಡಿ ರಸ್ತೆಯ ಕಬ್ಬೆಹಳ್ಳಿಯ ದಿಲೀಪ್ ಬಂಧಿತರು. ಆರೋಪಿಗಳಿಂದ 1.76 ಕೋಟಿ ರೂ. ಮತ್ತು 12 ಲಕ್ಷ ಮೌಲ್ಯದ 192 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಹೊಂಚು ಹಾಕಿ ಕೃತ್ಯ
ಸಂದೀಪ್ ಪೋಷಕರು ಕೊರೊನಾ ಹಿನ್ನೆಲೆ ಮಗನಿಂದ ದೂರವಿದ್ದು ಇಸ್ರೋ ಲೇಔಟ್‍ನಲ್ಲಿ ನೆಲೆಸಿದ್ದರು. ಸಂದೀಪ್ ಕೆಲಸಕ್ಕಾಗಿ ಆಗಾಗ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದರು. ಮಾ.27ರಂದು ಸಂದೀಪ್ ಕೆಲಸ ನಿಮಿತ್ತ ಚೆನ್ನೈಗೆ ಹೋಗಿದ್ದರು. ಸಂದೀಪ್ ತಂದೆ ಮೋಹನ್ ಅವರು ಮಗನ ನಿವಾಸದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಇದ್ದು, ರಾತ್ರಿ ಮನೆಗೆ ಬೀಗ ಹಾಕಿಕೊಂಡು ಅಲ್ಲಿಂದ ತಮ್ಮ ಮನೆಗೆ ಹೋಗುತ್ತಿದ್ದರು. ಮಾ.28ರಂದು ಮೋಹನ್ ಮಗನ ಮನೆಗೆ ಬಂದು ಹೋದ ಮೇಲೆ ಸುನೀಲ್ ಮತ್ತು ದಿಲೀಪ್ ಮನೆಗೆ ಕನ್ನ ಹಾಕಿದ್ದಾರೆ.

ಬಿಂದಾಸ್ ಖರ್ಚು:
ದಿಲೀಪ್ ಬಿಂದಾಸ್ ಆಗಿ ಹಣ ಖರ್ಚು ಮಾಡ್ತಿದ್ರೆ, ಸುನೀಲ್ ಹಣವನ್ನು ದಿನ ನೋಡುವ ವಿಚಿತ್ರ ಆಸೆ ಇತ್ತು. ದಿಲೀಪ್ ಕದ್ದ ಹಣದಲ್ಲಿ ಪೋಷಕರಿಗೆ ಚಿನ್ನಾಭರಣ ಕೊಡಿಸಿ ಗೋವಾ, ಪಬ್ಬು ಬಾರು ಎಂದು ಬಿಂದಾಸ್ ಆಗಿ ಖರ್ಚು ಮಾಡ್ತಿದ್ದ. ಆದ್ರೆ ಸುನೀಲ್ ಸಾಲ ಸೋಲ ತೀರಿಸಿಕೊಂಡು ಹಣವನ್ನು ಹುಷಾರಾಗಿ ಮನೆಯಲ್ಲೇ ಇಟ್ಕೊಂಡಿದ್ದ. ಯಾವುದೇ ದುಂದುವೆಚ್ಚ ಮಾಡದೇ ಜೋಪಾನವಾಗಿ ನೋಡ್ಕೋತಿದ್ದ.

ಸುನೀಲ್‍ಗೆ ದಿನಕ್ಕೆ ಕನಿಷ್ಠ ಐದಾರು ಬಾರಿ ಬಚ್ಚಿಟ್ಟಿದ್ದ ಹಣ ನೋಡದೇ ಇದ್ರೆ ನೆಮ್ಮದಿ ಇರುತ್ತಿರಲಿಲ್ಲ. ಪೊಲೀಸರು ಹುಡುಕಾಟದ ವೇಳೆ ಸುನೀಲ್ ಬಗ್ಗೆ ಮಾಹಿತಿ ಪಡೆದು ಮನೆಯ ಮೇಲೆ ದಾಳಿ ಮಾಡಿದಾಗಲೇ ಹಣದ ಸಮೇತ ಸಿಕ್ಕಿಬಿದ್ದಿದ್ದ. ಆದ್ರೆ ದಿಲೀಪ್ ಮಾತ್ರ ಗೋವಾ, ಸೇರಿದಂತೆ ಆ ಊರು, ಈ ಊರು, ಪುಣ್ಯಕ್ಷೇತ್ರಗಳು ಅಂತಾ ತಿರುಗಾಡ್ತಿದ್ದ. ಸಿಡಿಆರ್ ಅಧಾರದ ಮೇಲೆ ದಿಲೀಪ್ ಬೆನ್ನು ಬಿದ್ದ ಪೊಲೀಸರು, ಕೊನೆಗೂ ಬೆಂಗಳೂರಿನಲ್ಲೇ ದಿಲೀಪ್‍ನನ್ನು ಬಂಧಿಸಿದ್ದಾರೆ.

ಕೃತ್ಯ ಎಸಗಿದ್ದು ಯಾಕೆ?
ಸುನೀಲ್ ಮಂಡ್ಯ ಮೂಲದವನಾಗಿದ್ದು, ವೃತ್ತಿಪರ ಮನೆಗಳ್ಳನಾಗಿದ್ದನು. ಇವನ ಮೇಲೆ ನಗರದಲ್ಲಿ ವಿವಿಧ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿದೆ. ಗಾಂಜಾ ಮಾರಾಟ ಪ್ರಕರಣದಲ್ಲಿ ದಿಲೀಪ್ ಜೈಲು ಸೇರಿದ್ದ. ಈ ವೇಳೆ ಜೈಲಿನಲ್ಲಿ ಸುನೀಲ್ ಪರಿಚಯವಾಗಿದೆ. ಈ ಗೆಳತನದ ಮೇಲೆಯೇ ಜೈಲಿನಿಂದ ಹೊರ ಬಂದಿದ್ದಾರೆ. ಇದನ್ನೂ ಓದಿ: ಸಾಲಕ್ಕಾಗಿ ಕಟ್ಟಡವನ್ನೇ ಅಡವಿಟ್ಟ ಬಿಎಂಟಿಸಿ – ಯಾವ ಬ್ಯಾಂಕ್‍ನಿಂದ ಎಷ್ಟು ಕೋಟಿ ಸಾಲ?

ಜಾಮೀನು ಪಡೆದು ಹೊರ ಬಂದ ಆರೋಪಿಗಳು ವಕೀಲರಿಗೆ ಶುಲ್ಕ ಕೊಡಬೇಕಾಗಿದ್ದರಿಂದ ಸಾಲ ಮಾಡಿದ್ದಾರೆ. ಆ ಸಾಲವನ್ನು ತೀರಿಸಲು ಸಾಧ್ಯವಾಗದೇ ಇದ್ದಾಗ ಇಬ್ಬರು ಸೇರಿ ಒಟ್ಟಿಗೆ ಕಳ್ಳತನ ಮಾಡಲು ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *