ರಾಯಚೂರು: ನಗರದಲ್ಲಿ ರಸ್ತೆಗಳೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ 50 ರೂ. ಆಟೋಗೆ 100 ರೂ. ಕೊಡುವ ಪರಿಸ್ಥಿಸಿ ನಿರ್ಮಾಣವಾಗಿದೆ.
ನಗರದಲ್ಲಿ ನಡೆಯುತ್ತಿರುವ ಯುಜಿಡಿ ಹಾಗೂ 24 ಗಂಟೆ ನೀರು ಸರಬರಾಜು ಕಾಮಗಾರಿಯಿಂದ ಎಲ್ಲಾ ರಸ್ತೆಗಳನ್ನ ಒಟ್ಟಿಗೆ ಅಗೆಯಲಾಗಿದೆ. ಹೀಗಾಗಿ ಓಡಾಡಲು ರಸ್ತೆಗಳೆಲ್ಲದಂತಾಗಿದೆ. ನಗರದಲ್ಲಿ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ. ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿ ಬರುವವರೆಗೂ ಪೋಷಕರಿಗೆ ನೆಮ್ಮದಿಯೇ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಆಟೋ ಚಾಲಕರು ಪೋಷಕರಿಂದ ಹೆಚ್ಚು ಹಣವನ್ನ ಪಡೆಯಲು ಮುಂದಾಗಿದ್ದಾರೆ.
ಹದೆಗೆಟ್ಟ ರಸ್ತೆಯಲ್ಲಿ ಹೆಚ್ಚು ಪೆಟ್ರೋಲ್ ಹೋಗುತ್ತೆ ಎಂದು ಆಟೋ ಚಾಲಕರು ತಿಂಗಳ ಬಾಡಿಗೆಯನ್ನೂ ಏಕಾಏಕಿ ದುಬಾರಿ ಮಾಡಿದ್ದಾರೆ. ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿರುವ ರಸ್ತೆ ಹಾಗೂ ಕುಡಿಯುವ ನೀರಿನ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದೇ ಈ ಎಕ್ಕ ಯಡವಟ್ಟುಗಳಿಗೆ ಕಾರಣವಾಗಿದೆ. ನಗರದ ಸ್ಟೇಷನ್ ರಸ್ತೆ, ಭಂಗಿಕುಂಟಾ, ಗೋಶಾಲಾ ರಸ್ತೆ, ವಾಸವಿನಗರ, ಸರಪ್ ಬಜಾರ್, ತೀನ್ ಕಂದಿಲ್ ಎಲ್ಲೇ ಹೋದ್ರೂ ವಾಪಸ್ ಬರಲು ಸಹ ರಸ್ತೆಯಿಲ್ಲ.
ರಾಯಚೂರು ಜಿಲ್ಲಾಡಳಿತ ಹಾಗೂ ನಗರಸಭೆ ಸಾರ್ವಜನಿಕರ ತಾಳ್ಮೆ ಪರೀಕ್ಷೆಗೆ ಮುಂದಾಗಿವೆ. ರಸ್ತೆ ಕಾಮಗಾರಿಗಳು ನಿಗದಿತ ಸಮಯದಲ್ಲಿ ಮುಗಿಯದೇ ಅಪಘಾತಗಳಿಗೆ ಆಹ್ವಾನವನ್ನ ನೀಡುತ್ತಿವೆ. ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ತ್ವರಿತಗತಿಯಲ್ಲಿ ಕಾಮಗಾರಿಗಳನ್ನ ಮುಗಿಸಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಅನುಕೂಲ ಮಾಡಬೇಕಿದೆ.