ಸಂತ್ರಸ್ತೆಗೆ ಅತ್ಯಾಚಾರ ಸನ್ನಿವೇಶ ವಿವರಿಸುವಂತೆ ಒತ್ತಾಯಿಸಿದ್ದ ಆರ್ ಜೆಡಿ ಮುಖಂಡರ ವಿರುದ್ಧ ಎಫ್‍ಐಆರ್!

Public TV
2 Min Read

ಪಾಟ್ನಾ: ಅತ್ಯಾಚಾರದ ಸನ್ನಿವೇಶ ವಿವರಿಸುವಂತೆ ಸಂತ್ರಸ್ತ ಬಾಲಕಿಗೆ ಒತ್ತಾಯಿಸಿದ ಆರೋಪದಡಿ ಆರ್ ಜೆಡಿ ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್ ಮೆಹ್ತಾ ಹಾಗೂ ಶಾಸಕ ಸುರೇಂದ್ರ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದೆ.

ಶುಕ್ರವಾರ ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಿದ್ದರು, ಈ ವೇಳೆ ಪೊಲೀಸರನ್ನು ತಡೆದ ಆರ್ ಜೆಡಿ ಪಕ್ಷದ ಸತ್ಯಶೋಧನಾ ತಂಡದ ಸದಸ್ಯರು, ಅತ್ಯಾಚಾರದ ಘಟನೆ ಹಾಗೂ ಅನುಭವವನ್ನು ವಿವರಿಸುವಂತೆ ಸಂತ್ರಸ್ತ ಬಾಲಕಿಗೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ತಂಡದ ಕೆಲವು ಸದಸ್ಯರು ಅತ್ಯಾಚಾರ ಸಂತ್ರಸ್ತೆಯ ಮಾಹಿತಿಯನ್ನು ಬಹಿರಂಗ ಪಡೆಸಲು ಯತ್ನಿಸಿದ್ದರು ಎಂದು ಮಗಧ ವಲಯದ ಉಪ ಪೊಲೀಸ್ ಮಹಾನಿರೀಕ್ಷಕ ವಿನಯ್‍ಕುಮಾರ್ ಹೇಳಿದ್ದಾರೆ. ಇದನ್ನು ಓದಿ: ಕಣ್ಣ ಮುಂದೆಯೇ ಪತ್ನಿ, ಮಗಳ ಮೇಲೆ ಗ್ಯಾಂಗ್ ರೇಪ್ – ಕಾಪಾಡದ ಸ್ಥಿತಿಯಲ್ಲಿ ವ್ಯಕ್ತಿ

ಏನಿದು ಘಟನೆ?
ಜೂನ್ 14ರಂದು ಕೃತ್ಯ ನಡೆದಿದ್ದು, ಬಿಹಾರದ ಗಯಾ ಜಿಲ್ಲೆಯ ಹಳ್ಳಿಯೊಂದರ ಸಮೀಪದ ವ್ಯಕ್ತಿಯೊಬ್ಬ ರಾತ್ರಿ ತನ್ನ ಹೆಂಡತಿ ಹಾಗೂ 15 ವರ್ಷದ ಮಗಳೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ. ಈ ವೇಳೆ ಶಸ್ತ್ರ ಸಜ್ಜಿತರಾಗಿ ಬಂದ ಯುವಕರ ಗುಂಪೊಂದು ಅವರನ್ನು ತಡೆದಿದ್ದು, ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿ, ಆತನ ಹೆಂಡತಿ ಹಾಗೂ 15 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದರು.

ಆರ್‍ಜೆಡಿ ಪಕ್ಷದ ಸತ್ಯಶೋಧನಾ ತಂಡ ವರ್ತನೆ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಲೋಕ್ ಕುಮಾರ್ ಮೆಹ್ತಾ ಅವರು, ಪ್ರಕರಣವನ್ನು ಮತ್ತೊಂದು ಕಡೆಗೆ ತಿರುಗಿಸಲು ಹಾಗೂ ಜನರ ಗಮನ ಬೇರೆಡೆ ಸೆಳೆದು ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ತಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ನಾವು ಅತ್ಯಾಚಾರ ಸನ್ನಿವೇಶ ವಿವರಿಸುವಂತೆ ಒತ್ತಾಯಿಸಿಲ್ಲ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದೇವು. ಆದರೆ ಬಾಲಕಿಯು ಮಾಧ್ಯಮದವರನ್ನು ನೋಡುತ್ತಲೇ ಕೋಪಗೊಂಡಳು. ಅಲ್ಲದೇ ಅತ್ಯಾಚಾರವಾದ 24 ಗಂಟೆಯೊಳಗೆ ಸಂತ್ರಸ್ತೆಯನ್ನು ವ್ಯದ್ಯಕೀಯ ತಪಾಸಣೆ ಮಾಡಿಸಬೇಕು. ಆದರೆ 38 ಗಂಟೆಗಳಾದ ಬಳಿಕ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯತ್ತಿದ್ದದ್ದು ಏಕೆ ಎಂದು ಮೆಹ್ತಾ ಪ್ರಶ್ನಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಗಯಾ ಜಿಲ್ಲೆಯ ಸೋನೆಡಿಯಾ ಹಳ್ಳಿಯ ಶಿವಂ ಶರ್ಮಾ ಮತ್ತು ಗೌರವ್ ಶರ್ಮಾ ಆಗಿದ್ದು, ಮತ್ತೊಬ್ಬ ಆರೋಪಿ ಪಾಸ್ವಾನ್ ನನ್ನು ಬಂಧಿಸಲಾಗಿದೆ. ಈತ ಸೋನೆಡಿಯಾ ಸಮೀಪ ಇರುವ ಮಂಗಳೂರು ಗ್ರಾಮದ ನಿವಾಸಿಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *