ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ – ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಬಾಂಬ್‌

Public TV
3 Min Read

– ಮುಂದೆ ಬಿಹಾರಕ್ಕೂ ಬರಬಹುದು, ಬಿಜೆಪಿ ಸೋಲುವಲ್ಲೆಲ್ಲಾ ಮ್ಯಾಚ್ ಫಿಕ್ಸಿಂಗ್ ನಡೆಯಬಹುದು; ಆರೋಪ

ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ (Maharashtra Assembly Elections) ನಡೆದ ಮ್ಯಾಚ್ ಫಿಕ್ಸಿಂಗ್ ಈಗ ಬಿಹಾರದಲ್ಲಿ ನಡೆಯಬಹುದು. ಹಾಗೂ ಬಿಜೆಪಿ ಸೋಲುವಲ್ಲೆಲ್ಲಾ ಮ್ಯಾಚ್ ಫಿಕ್ಸಿಂಗ್ ನಡೆಯಬಹುದು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ಶನಿವಾರ (ಇಂದು) ಮತ್ತೆ ಎನ್‌ಡಿಎ ನೇತೃತ್ವದ ಬಿಜೆಪಿ (BJP) ಚುನಾವಣಾ ಅಕ್ರಮಗಳಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ (Match Fixing) ನಡೆದಿದೆ. ಇದು ಬಿಹಾರಕ್ಕೂ ಬರಬಹುದು. ಈ ರೀತಿ ಮ್ಯಾಚ್ ಫಿಕ್ಸಿಂಗ್ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬುಡಮೇಲು ಮಾಡಲು ಮ್ಯಾಚ್ ಫಿಕ್ಸಿಂಗ್ ಮಾದರಿಯನ್ನು ಬಳಸಿದೆ ಎಂದು ಆರೋಪಿಸಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ ʻಮ್ಯಾಚ್ ಫಿಕ್ಸಿಂಗ್ ಮಹಾರಾಷ್ಟ್ರʼ ಶೀರ್ಷಿಕೆಯಲ್ಲಿ ಪ್ರಕಟವಾದ ಲೇಖನವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಹೇಗೆ ನಡೆಯಿತು? ಎಂಬುದನ್ನು ಹಂತ-ಹಂತವಾಗಿ ವಿವರಿಸಿದ್ದಾರೆ.

ಅವುಗಳೆಂದರೆ….
ಹಂತ 1: ಚುನಾವಣಾ ಆಯೋಗ ನೇಮಿಸುವ ಸಮಿತಿಯನ್ನು ರಿಗ್ಗಿಂಗ್ ಮಾಡುವುದು.
ಹಂತ 2: ಮತದಾರರ ಪಟ್ಟಿಗೆ ನಕಲಿ ಹೆಸರುಗಳನ್ನು ಸೇರಿಸುವುದು.
ಹಂತ 3: ಮತದಾನದ ಶೇಕಡಾವಾರು (ವೋಟ್‌ ಶೇರಿಂಗ್‌) ಪ್ರಮಾಣವನ್ನ ಹೆಚ್ಚಿಸುವುದು
ಹಂತ 4: ಬಿಜೆಪಿ ಗೆಲ್ಲಲು ಅಗತ್ಯವಿರುವ ಕಡೆಗಳಲ್ಲಿ ನಕಲಿ ಮತದಾನ ಮಾಡಿಸುವುದು.
ಹಂತ 5: ಸಾಕ್ಷ್ಯಗಳನ್ನು ಮುಚ್ಚಿಡುವ ಕೆಲಸಗಳನ್ನು ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

ಬಿಜೆಪಿ ತಿರುಗೇಟು:
ಇನ್ನೂ ರಾಹುಲ್‌ ಗಾಂಧಿ ಅವರ ಹೇಳಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೀಡಾಗುತ್ತಿದ್ದಂತೆ ಬಿಜೆಪಿ ನಾಯಕರು ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ. ಇದು ದಾರಿತಪ್ಪಿಸುವ ಹೇಳಿಕೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕರೆದಿದ್ದಾರೆ.

ರಾಹುಲ್‌ ಗಾಂಧಿ ಅವರು ಪದೇ ಪದೇ ಮತದಾರರಲ್ಲಿ ಅನುಮಾನ ಹಾಗೂ ವಿಭಜನೆತ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ ಅನ್ನೋದು ಅವರಿಗೆ ಅರ್ಥವಾಗುತ್ತಿಲ್ಲ ಅನ್ನೋದು ಚೆನ್ನಾಗಿ ಗೊತ್ತಾಗ್ತಿದೆ. ತೆಲಂಗಾಣ, ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದಾಗ ಅಲ್ಲಿ ಅದೇ ವ್ಯವಸ್ಥೆಯನ್ನು ನ್ಯಾಯಯುತ ಎಂದು ಪ್ರಶಂಸಿಸಿದರು. ಹರಿಯಾಣದಿಂಧ ಮಹಾರಾಷ್ಟ್ರದ ವರೆಗೆ ಸೋತ ಚುನಾವಣೆಗಳಲೆಲ್ಲಾ ಪಿತೂರಿ ಅಂತ ಗೊಣಗುತ್ತಾ ಬಂದರು. ಮತದಾರರ ಮನಸ್ಸಿನಲ್ಲಿ ಭಿನ್ನಾಭಿಪ್ರಾಯದ ಬೀಜಗಳನ್ನು ಬಿತ್ತುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಲೇ ಇರುತ್ತಾರೆ ಎಂದು ಎಕ್ಸ್‌ನಲ್ಲಿ ಕಿಡಿ ಕಾರಿದ್ದಾರೆ.

ಮಹಾರಾಷ್ಟ್ರ ಫಲಿತಾಂಶ ಏನಾಗಿತ್ತು?
ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡ ಮಹಾಯುತಿ ಮೈತ್ರಿಕೂಟವು 288 ವಿಧಾನಸಭಾ ಸ್ಥಾನಗಳಲ್ಲಿ 235 ಸ್ಥಾನಗಳನ್ನು ಗೆದ್ದಿದೆ. ಇದರಲ್ಲಿ ಬಿಜೆಪಿ 132 ಸ್ಥಾನಗಳನ್ನು ಗಳಿಸಿದ್ದು, ರಾಜ್ಯದ ಇತಿಹಾಸದಲ್ಲಿ ಇದು ಅತ್ಯುತ್ತಮ ಪ್ರದರ್ಶನವಾಗಿದೆ.

Share This Article