ಮಮತಾ ಸವಾಲು ಸ್ವೀಕಾರ – ಸಕ್ರೀಯ ರಾಜಕಾರಣಕ್ಕೆ ಇಳಿದ ಕೋಲ್ಕತ್ತಾ ಹೈಕೋರ್ಟ್‌ ಜಡ್ಜ್‌ ಗಂಗೋಪಾಧ್ಯಾಯ

Public TV
2 Min Read

ಕೋಲ್ಕತಾ: ಸಕ್ರಿಯ ರಾಜಕಾರಣಕ್ಕೆ ಬನ್ನಿ ಎಂಬ ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸವಾಲನ್ನುಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ (Abhijit Gangopadhyay) ಸ್ವೀಕರಿಸಿದ್ದು ರಾಜಕೀಯಕ್ಕೆ ಬರಲು ಜಡ್ಜ್‌ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಆಗಸ್ಟ್‌ನಲ್ಲಿ ನಿವೃತ್ತರಾಗಬೇಕಿದ್ದ ನ್ಯಾಯಾಧೀಶರು ಆಡಳಿತಾರೂಢ ಟಿಎಂಸಿ (TMC) ಮತ್ತು ಅದರ ನಾಯಕ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಪದೇ ಪದೇ ಕಟು ಪದಗಳನ್ನು ಬಳಸಿ ಟೀಕಿಸುತ್ತಿದ್ದರು. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. ಅಲ್ಲದೇ ಸರ್ಕಾರದ ವಿರುದ್ಧ ಪದೇ ಪದೇ ಚಾಟಿ ಬೀಸುತ್ತಿದ್ದರು. ಹೀಗಾಗಿ ಟಿಎಂಸಿ ವಕ್ತಾರರು ಸಕ್ರಿಯ ರಾಜಕೀಯಕ್ಕೆ ಇಳಿಯುವಂತೆ ಅವರಿಗೆ ಸವಾಲು ಹಾಕಿದ್ದರು.  ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ – ಎನ್‌ಐಎಗೆ ಕೇಸ್‌ ವರ್ಗಾವಣೆ

ನಾನು ರಾಜಕೀಯಕ್ಕೆ ಬರುತ್ತೇನೆ. ನಾನು ಯಾವ ಪಕ್ಷದಿಂದ ಆರಂಭಿಸುತ್ತೇನೆ ಎಂದು ಇಂದು ಹೇಳುತ್ತಿಲ್ಲ. ನ್ಯಾಯಾಲಯದಲ್ಲಿ ಇನ್ನೂ ಉಳಿದಿರುವ ಸಣ್ಣ ಕೆಲಸವನ್ನು ನಾನು ಮೊದಲು ಮುಗಿಸಲು ಬಯಸುತ್ತೇನೆ. ಸೋಮವಾರ ಮುಖ್ಯ ನ್ಯಾಯಮೂರ್ತಿಗೆ ಮೌಖಿಕವಾಗಿ ತಿಳಿಸುತ್ತೇನೆ ಮತ್ತು ಮಂಗಳವಾರ ಬೆಳಗ್ಗೆ ನನ್ನ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸುತ್ತೇನೆ ಅಭಿಜಿತ್ ಗಂಗೋಪಾಧ್ಯಾಯ ತಿಳಿಸಿದ್ದಾರೆ.

 

ನ್ಯಾ. ಗಂಗೋಪಾಧ್ಯಾಯ ಇನ್ನೂ ರಾಜೀನಾಮೆ ಸಲ್ಲಿಸದಿದ್ದರೂ ಪಶ್ಚಿಮ ಬಂಗಾಳದ (West Bengal) ಕೆಲವರನ್ನು ಒಳಗೊಂಡಂತೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ (BJP) ಪ್ರಕಟಿಸಿದ  ಒಂದು ದಿನದ ನಂತರ ರಾಜೀನಾಮೆ ಘೋಷಣೆ ಹೊರಬಿದ್ದಿದೆ.

ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ ಸಂದರ್ಶನದಲ್ಲಿ ಅವರು, ನಾನು ರಾಜಕೀಯಕ್ಕೆ ಬರಲು ಆಡಳಿತರೂಢ ಪಕ್ಷ ಕಾರಣ. ಇದಕ್ಕಾಗಿ ನಾನು ನಮ್ಮ ಆಡಳಿತ ಪಕ್ಷವನ್ನು ಅಭಿನಂದಿಸುತ್ತೇನೆ. ನನ್ನ ತೀರ್ಪು ಅವರಿಗೆ ಇಷ್ಟವಾಗದಿದ್ದರೆ ವಿವಿಧ ವಕ್ತಾರರನ್ನು ಬಳಸಿಕೊಂಡು ನ್ಯಾಯಾಧೀಶರು ಮತ್ತು ನ್ಯಾಯಾಂಗದ  ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದರು ಎಂದು ಹೇಳಿದರು.

ನೀವು ಯಾವ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ ಎಂಬ ಪ್ರಶ್ನೆಗೆ, ಕಾಂಗ್ರೆಸ್, ಎಡಪಕ್ಷಗಳು, ಬಿಜೆಪಿ ಮತ್ತು ಸಣ್ಣ ಪಕ್ಷಗಳು ಎಂದು ಉತ್ತರ ನೀಡಿದರು. ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದು ನಿಜ : ಉನ್ನತ ಪೊಲೀಸ್‌ ಮೂಲಗಳು

ತೃಣಮೂಲ ಸರ್ಕಾರದ ಅಡಿಯಲ್ಲಿ ಪಶ್ಚಿಮ ಬಂಗಾಳವು ಕಳ್ಳರ ಸಾಮ್ರಾಜ್ಯ ಎಂದು ನಾನು ಹೇಳಿದ್ದೇನೆ. ಆ ಪಕ್ಷಕ್ಕೆ ಸೇರುವ ಪ್ರಶ್ನೆಯೇ ಇಲ್ಲ. ಪಶ್ಚಿಮ ಬಂಗಾಳದ ಘನತೆ ಈಗ ಹಾಳಾಗುತ್ತಿದ್ದು, ಅದನ್ನು ಉಳಿಸಲು ಸಾಧ್ಯವೇ ಎನ್ನುವುದೇ ದೊಡ್ಡ ಪ್ರಶ್ನೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನ್ಯಾಯಾಲಯದ ಸಭಾಂಗಣದಿಂದ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಬಂಗಾಳಿಯಾಗಿ ನಾನು ಈ ಅನ್ಯಾಯವನ್ನು ಒಪ್ಪಲಾರೆ. ದೊರೆಗಳಾಗಿ ಹೊರಹೊಮ್ಮಿದವರು ರಾಜ್ಯಕ್ಕೆ ಪ್ರಯೋಜನವಾಗುವಂತೆ ತೋರಲಿಲ್ಲ. ಸವಾಲು ಸ್ವೀಕರಿಸಿ ಮಂಗಳವಾರ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನ್ನ ಕೈಯಲ್ಲಿ ಸಾಕಷ್ಟು ಪ್ರಕರಣಗಳಿರುವುದರಿಂದ ಸೋಮವಾರ ನಾನು ನ್ಯಾಯಾಲಯಕ್ಕೆ ಹಾಜರಾಗುತ್ತೇನೆ ಎಂದು ತಿಳಿಸಿದರು.

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಮೇ 2018 ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದರು. 2020 ರಲ್ಲಿ ಅವರು ಕೋಲ್ಕತ್ತಾ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಬಡ್ತಿ ಪಡೆದರು.

 

Share This Article