ಉಪಾಹಾರ ಕೂಟದಲ್ಲೇ ಸಚಿವರ ರಾಜೀನಾಮೆ?

Public TV
1 Min Read

ಬೆಂಗಳೂರು: ಮೈತ್ರಿ ಸರ್ಕಾರದ ಉಳಿವಿಗಾಗಿ ಹೈಕಮಾಂಡ್ ಬಂಡಾಯ ಶಾಸಕರ ಮನವೊಲಿಕೆಗೆ ಹಿರಿಯ ಸಚಿವರ ರಾಜೀನಾಮೆಗೆ ಸೂಚನೆ ನೀಡಿತ್ತು. ಇದೀಗ ಉಪಾಹಾರ ಕೂಟದಲ್ಲೇ ಸಚಿವರು ರಾಜೀನಾಮೆ ಕೊಡುವ ಸಾಧ್ಯತೆ ಇದೆ.

ಉಪಮುಖ್ಯಮಂತ್ರಿ ಪರಮೇಶ್ವರ್ ನಿವಾಸದಲ್ಲಿ ಸಂಪುಟದಲ್ಲಿರುವ ಕಾಂಗ್ರೆಸ್ ಸಚಿವರಿಗೆ ಉಪಹಾರ ಕೂಟವನ್ನು ಆಯೋಜಿಸಲಾಗಿದೆ. ಉಪಹಾರ ಕೂಟಕ್ಕೆ ಬರುವ ಸಚಿವರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರ ಪಡೆಯಲಿದ್ದಾರೆ. ಹೀಗಾಗಿ ಈಗಾಗಲೇ ರಾಜೀನಾಮೆ ಪತ್ರದೊಂದಿಗೆ ಬರುವಂತೆ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಂದು ಉಪಹಾರಕ್ಕೆ ಬರುವ ಸಚಿವರ ಪಟ್ಟಿಯನ್ನು ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಅದರಂತೆಯೇ ಯಾರೆಲ್ಲಾ ರಾಜೀನಾಮೆ ಕೊಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಅದರಂತೆ ಹಿರಿಯ ಸಚಿವರು ಉಪಹಾರ ಕೂಟಕ್ಕೆ ಬರುವಾಗಲೇ ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಅವರು ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ.

ಸಚಿವರು ರಾಜೀನಾಮೆ ಕೊಡುತ್ತಿರುವುದರಿಂದ ಇದಕ್ಕೂ ಸ್ಪೀಕರ್ ಗೂ ಸಂಬಂಧ ಇರುವುದಿಲ್ಲ. ಮೊದಲಿಗೆ ಸಿದ್ದರಾಮಯ್ಯ ರಾಜೀನಾಮೆ ಪಡೆದುಕೊಂಡು ನಂತರ ಅದನ್ನು ಸಿಎಂಗೆ ಹಸ್ತಾಂತರಿಸಲಾಗುತ್ತದೆ.

ಬಂಡಾಯ ಶಾಸಕರ ಮನವೊಲಿಕೆಗೆ ಕಾಂಗ್ರೆಸ್ ಹೈಕಮಾಂಡ್ ಕೈ ಪಕ್ಷದ ಹಿರಿಯ ಶಾಸಕರಾದ ಯು.ಟಿ.ಖಾದರ್, ಕೃಷ್ಣ ಬೈರೇಗೌಡ, ಕೆಜೆ ಜಾರ್ಜ್, ದೇಶಪಾಂಡೆ, ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ನೀಡುವಂತೆ ಸೂಚನೆ ನೀಡಿತ್ತು. ಹಿರಿಯ ಸಚಿವರಿಂದ ರಾಜೀನಾಮೆ ಪಡೆದು ಈ ಸ್ಥಾನಗಳನ್ನು ಅತೃಪ್ತರಿಗೆ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ.

Share This Article
Leave a Comment

Leave a Reply

Your email address will not be published. Required fields are marked *