ಕೊಲೆ ಕೇಸ್ ಸಾಕ್ಷ್ಯಿಧಾರನ ಜೊತೆ ಪ್ರಭಾವ ಬೀರುತ್ತಿದ್ದಾರಾ ದರ್ಶನ್?

Public TV
3 Min Read

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಪ್ರಮುಖ ಸಾಕ್ಷಿಯಾಗಿರುವ ಚಿಕ್ಕಣ್ಣ (Chikkanna) ಮೇಲೆ ನಟ ದರ್ಶನ್‌ (Darshan) ಸಿನಿಮಾ ವೀಕ್ಷಣೆ ಮಾಡಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಚಿಕ್ಕಣ್ಣ ಮೇಲೆ ದರ್ಶನ್‌ ಪ್ರಭಾವ ಬೀರುತ್ತಿದ್ದಾರಾ ಎಂಬ ಪ್ರಶ್ನೆಯೂ ಎದ್ದಿದೆ.

ಬೆನ್ನು ನೋವಿನ ಕಾರಣ ನೀಡಿ ಕೋರ್ಟ್‌ ವಿಚಾರಣೆಗೆ ಗೈರಾಗಿದ್ದ ದರ್ಶನ್‌ (Darshan) ಅವರು ಗೆಳೆಯ ಧನ್ವೀರ್‌ (Dhanveer Gowda) ಅಭಿನಯದ ವಾಮನ (Vaamana) ಸಿನಿಮಾವನ್ನು ವೀಕ್ಷಿಸಿದ್ದಾರೆ. ಬುಧವಾರ ರಾತ್ರಿ ಜಿಟಿ ಮಾಲ್‌ನಲ್ಲಿ ವಾಮನ ಚಿತ್ರದ ವಿಶೇಷ ಶೋ ಆಯೋಜಿಸಲಾಗಿತ್ತು. ಈ ಶೋ ವೀಕ್ಷಿಸಲು ದರ್ಶನ್‌ ರಾತ್ರಿ 8 ಗಂಟೆಯ ವೇಳೆಗೆ ಮಾಲ್‌ಗೆ ಆಗಮಿಸಿದ್ದರು.

ಬೆನ್ನು ನೋವನ್ನು ಲೆಕ್ಕಿಸದೇ ಆಪ್ತನ ಸಿನಿಮಾವನ್ನು ದರ್ಶನ್‌ ಸುಮಾರು ಮೂರು ಗಂಟೆಗಳ ಕಾಲ ಕುಳಿತು ವೀಕ್ಷಿಸಿದ್ದಾರೆ. ಸಿನಿಮಾ ಮಾಡುವ ಸಂದರ್ಭದಲ್ಲಿ ಚಿಕ್ಕಣ್ಣ ಸಹ ಜೊತೆಯಲ್ಲೇ ಕುಳಿತು ವಾಮನ ವೀಕ್ಷಿಸಿದ್ದಾರೆ.

ಚಿಕ್ಕಣ್ಣ ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ದರ್ಶನ್‌ ಅವರನ್ನು ಭೇಟಿಯಾಗಿದ್ದರು. ಭೇಟಿಯಾದ ನಂತರ ಬಸವೇಶ್ವರ ನಗರದಲ್ಲಿರುವ ಎಸಿಪಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿದ್ದರು. ಇದನ್ನೂ ಓದಿ: ನಾನ್ಯಾಕೆ 2ನೇ ಮದುವೆಯಾಗಿಲ್ಲ: ಸೀಕ್ರೆಟ್ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ

ವಿಚಾರಣೆಯ ಬಳಿಕ ಮಾತನಾಡಿದ್ದ ಚಿಕ್ಕಣ್ಣ, ನಾನು ಒಬ್ಬ ಸಾಕ್ಷಿದಾರನಾಗಿದ್ದುಕೊಂಡು ಹೋಗಿ ದರ್ಶನ್‌ರನ್ನು ಮಾತನಾಡಿಸಬಾರದು ಎನ್ನುವುದು ತಿಳಿದಿರಲಿಲ್ಲ. ಹಾಗಾಗಿ ನಾನು ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದಕ್ಕೆ ನನಗೆ ನೋಟಿಸ್‌ ನೀಡಲಾಗಿತ್ತು. ವಿಚಾರಣೆಯ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಸಾಕ್ಷಿದಾರ ಆರೋಪಿ ಬಳಿ ಹೋಗಬಾರದು ಎನ್ನುವುದು ನನಗೆ ತಿಳಿದಿರಲಿಲ್ಲ. ಗೊತ್ತಿದ್ದರೆ ಹೋಗಿ ದರ್ಶನ್‌ರನ್ನು ಜೈಲಿನಲ್ಲಿ ಭೇಟಿ ಆಗುತ್ತಿರಲಿಲ್ಲ ಎಂದು ತಿಳಿಸಿದ್ದರು.

ದರ್ಶನ್‌ (Darshan) ಮತ್ತು ಗ್ಯಾಂಗ್‌ ಸದಸ್ಯರ ವಿರುದ್ಧ ಪ್ರಮುಖ ಸಾಕ್ಷಿಯಾಗಿರುವ ಚಿಕ್ಕಣ್ಣ ಸೆಕ್ಷನ್ ಸಿಆರ್‌ಪಿಸಿ 164ರ ಅಡಿಯಲ್ಲಿ ಜಡ್ಜ್ ಎದುರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದ ನಂತರ ದರ್ಶನ್‌ ಅವರನ್ನು ಭೇಟಿ ಮಾಡಿದ್ದರು. ಸಾಧಾರಣವಾಗಿ ತನಿಖಾ ಹಂತದಲ್ಲಿರುವಾಗಲೇ ಸಾಕ್ಷಿಯಾದ ವ್ಯಕ್ತಿ ಜೈಲಿನಲ್ಲಿ (Jail) ಆರೋಪಿಯನ್ನು ಭೇಟಿ ಮಾಡುವುದಿಲ್ಲ. ಆದರೆ ತನಿಖಾ ಹಂತದಲ್ಲಿರುವಾಗಲೇ ಚಿಕ್ಕಣ್ಣ ದರ್ಶನ್‌ ಅವರನ್ನು ಭೇಟಿ ಮಾಡಿದ್ದಕ್ಕೆ ನೋಟಿಸ್‌ ನೀಡಲಾಗಿತ್ತು.

ಚಿಕ್ಕಣ್ಣ ಪ್ರಮುಖ ಸಾಕ್ಷಿ ಹೇಗೆ?
ಯಾವುದೇ ಪ್ರಕರಣದಲ್ಲಿ ಪೊಲೀಸರು ಠಾಣೆಗೆ ಕರೆಸಿ ಸಾಕ್ಷಿಗಳನ್ನು ವಿಚಾರಣೆ ನಡೆಸುತ್ತಾರೆ. ಆದರೆ ಪ್ರಕರಣ ಒಂದರಲ್ಲಿ ಆ ವ್ಯಕ್ತಿಯ ಹೇಳಿಕೆ ಪ್ರಮುಖ ಸಾಕ್ಷಿ ಆಗಲಿದೆ ಎಂದಾದರೆ ಮಾತ್ರ ಆ ವ್ಯಕ್ತಿಯನ್ನು ಜಡ್ಜ್‌ ಮುಂದೆ ಹಾಜರು ಪಡಿಸಿ ಹೇಳಿಕೆ ನೀಡಲಾಗುತ್ತದೆ. ಇದನ್ನೂ ಓದಿ: ಕೋರ್ಟ್‌ಗೆ ಗೈರು, ಸಿನಿಮಾ ವೀಕ್ಷಣೆಗೆ ದರ್ಶನ್‌ ಹಾಜರ್

ನಟ ಚಿಕ್ಕಣ್ಣ ಅವರ ಹೇಳಿಕೆಯನ್ನು ಸಿಆರ್‌ಪಿಸಿ (CrPC) 164ರ ಅಡಿಯಲ್ಲಿ ನ್ಯಾಯಾಧೀಶರ ಎದುರು ಪೊಲೀಸರು ದಾಖಲಿಸಿದ್ದರು. ಚಿಕ್ಕಣ್ಣ ಅವರ ಹೇಳಿಕೆಯನ್ನು ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಲೆಂದೇ ಪೊಲೀಸರು ಜಡ್ಜ್‌ ಮುಂದೆ ಹೇಳಿಕೆ ದಾಖಲು ಮಾಡಿದ್ದಾರೆ ಎನ್ನಲಾಗುತ್ತಿದೆ.

ರೇಣುಕಾಸ್ವಾಮಿ ಕೊಲೆ ನಡೆದ ದಿನ ದರ್ಶನ್ ಅವರ ಜೊತೆ ಚಿಕ್ಕಣ್ಣ ಸ್ಟೋನಿ ಬ್ರೂಕ್‌ನಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಚಿಕ್ಕಣ್ಣ ಠಾಣೆಗೆ ಬಂದು ಪೊಲೀಸರು ಕೇಳಿದ ವಿವರಗಳನ್ನು ನೀಡಿದ್ದರೂ ಮುಂದೆ ಚಿಕ್ಕಣ್ಣ ಏನಾದರೂ ತಮ್ಮ ಹೇಳಿಕೆಯನ್ನು ಬದಲಿಸಿದರೆ ವಿಚಾರಣೆಗೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಅವರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆಯೇ ಪಡೆದುಕೊಳ್ಳಲಾಗಿದೆ. ಈ ಕಾರಣಕ್ಕೆ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಏನು ಹೇಳಿಕೆ ನೀಡಿದ್ದಾರೋ ಅದೇ ಹೇಳಿಕೆಯನ್ನು ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ ನಂತರ ಕೋರ್ಟ್‌ನಲ್ಲಿ ನಡೆಯುವ ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ಹೇಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿದು ನಾನು ಹಿಂದೆ ಆ ರೀತಿಯ ಹೇಳಿಕೆ ನೀಡಿದ್ದೆ ಎಂಬ ಹೇಳಿಕೆಯನ್ನು ನೀಡಲು ಸಾಧ್ಯವಾಗುವುದಿಲ್ಲ.

Share This Article