– ಆರೋಪಿಗಳು ಜೈಲು ಆವರಣದಲ್ಲಿ ಸಿಗರೇಟ್, ಮದ್ಯ ಸೇವಿಸಿದ್ರೆ ರಾಜ್ಯ ಸರ್ಕಾರಕ್ಕೆ ಸಮನ್ಸ್ ಗ್ಯಾರಂಟಿ
– ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ ನೀಡಕೂಡದು ಅಂತ ಎಚ್ಚರಿಕೆ
ಬೆಂಗಳೂರು: ದರ್ಶನ್, ಪವಿತ್ರಾ ಸೇರಿ ಆರೋಪಿಗಳ ಬೇಲ್ ರದ್ದು ಮಾಡಿರುವ ಸುಪ್ರೀಂ ಕೋರ್ಟ್ (Supreme Court), ಈ ಹಿಂದೆ ಕರ್ನಾಟಕ ಹೈಕೋರ್ಟ್ (Karnataka Highcourt) ಆದೇಶದ ಹುಳುಕುಗಳನ್ನು ಎತ್ತಿ ತೋರಿದೆ. ಜಾಮೀನು ನೀಡಲು ಹೈಕೋರ್ಟ್ ಆದೇಶದಲ್ಲಿ ಸಕಾರಣಗಳನ್ನು ನೀಡಿಲ್ಲ. ಯಾಂತ್ರಿಕವಾಗಿ ತನ್ನ ಅಧಿಕಾರ ಬಳಕೆ ಮಾಡಿದೆ. ವಿಚಾರಣಾ ಹಂತದಲ್ಲಿರುವ ಪ್ರಕರಣದ ಸಾಕ್ಷ್ಯಗಳನ್ನು ಬಹುಮುಖ್ಯವಾಗಿ ಪರಿಗಣಿಸಿದೆ ಅಂತ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಸುಪ್ರೀಂ ಆಕ್ಷೇಪಣೆಗಳೇನು? (ಆದೇಶ ಓದಿದ ನ್ಯಾ. ಮಹದೇವನ್)
* ಹೈಕೋರ್ಟ್ ಆದೇಶವು ವಿಕ್ಷಿಪ್ತ ದೋಷಗಳಿಂದ ಕೂಡಿದೆ.
* ಹೈಕೋರ್ಟ್ ಆದೇಶವು ಗಂಭೀರ ವೈರುಧ್ಯಗಳಿಂದ ಕೂಡಿದೆ.
* ಜಾಮೀನು ನೀಡಲು ಹೈಕೋರ್ಟ್ ಆದೇಶದಲ್ಲಿ ವಿಶೇಷ ಅಥವಾ ಸಕಾರಣಗಳನ್ನು ನೀಡಲಾಗಿಲ್ಲ.
* ನ್ಯಾಯಾಲಯವು ಯಾಂತ್ರಿಕವಾಗಿ ತನ್ನ ಅಧಿಕಾರ ಬಳಕೆ ಮಾಡಿದೆ.
* ಕಾನೂನಾತ್ಮಕವಾಗಿ ಬಹುಮುಖ್ಯವಾದ ವಾಸ್ತವಾಂಶಗಳನ್ನ ಕೈಬಿಟ್ಟಿದೆ.
* ವಿಚಾರಣಾ ಹಂತದಲ್ಲಿರುವ ಪ್ರಕರಣದ ಸಾಕ್ಷ್ಯಗಳನ್ನು ಬಹುಮುಖ್ಯವಾಗಿ ಪರಿಗಣಿಸಿದೆ.
* ಸಾಕ್ಷಿಗಳ ಪ್ರಾಮಾಣಿಕತೆ, ನಂಬಲರ್ಹತೆಯನ್ನು ನಿರ್ಧರಿಸಬೇಕಿರುವುದು ವಿಚಾರಣಾ ನ್ಯಾಯಾಲಯ ಮಾತ್ರ.
* ಇಂಥ ಗಂಭೀರವಾದ ಪ್ರಕರಣದ ಸ್ವರೂಪ ಮತ್ತು ಆರೋಪಿಗಳ ಪಾತ್ರವನ್ನು ಪರಿಗಣಿಸಬೇಕು.
* ಪರಿಗಣಿಸದೇ ವಿಚಾರಣೆಯಲ್ಲಿ ಮಧ್ಯಪ್ರವೇಶಿಸುವುದು ಅನಗತ್ಯವಾಗಿ ವ್ಯಾಪ್ತಿ ಮೀರಿದ ಚಟುವಟಿಕೆ.
* ಸಕ್ಷಮ ಪ್ರಾಧಿಕಾರಿಗಳು ತಕ್ಷಣ ಆರೋಪಿಗಳನ್ನ ವಶಕ್ಕೆ ಪಡೆಯಬೇಕು.
* ತುರ್ತಾಗಿ ವಿಚಾರಣೆ ನಡೆಸಿ, ಮೆರಿಟ್ ಮೇಲೆ ಪ್ರಕರಣವನ್ನ ವಿಚಾರಣಾ ನ್ಯಾಯಾಲಯ ನಿರ್ಧರಿಸಬೇಕು.
* ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಜಾಮೀನಿಗೆ ಸೀಮಿತವಾಗಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ (Karnataka Government) ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರಿದ್ದ ಪೀಠ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದೆ. ಆರೋಪಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಿರೋದಾಗಿ ಹೇಳಿದೆ. ಅಲ್ಲದೇ, ಫೈವ್ ಸ್ಟಾರ್ ಟ್ರೀಟ್ಮೆಂಟ್ಗೂ ವಾರ್ನಿಂಗ್ ಕೊಟ್ಟಿದೆ. ಮಹಾದೇವನ್ ಆದೇಶದ ಬಳಿಕ ಅದಕ್ಕೆ ಪೂರಕವಾಗಿ ನ್ಯಾ. ಪಾರ್ದಿವಾಲಾ… ನನ್ನ ಗೌರವಾನ್ವಿತ ಸಹೋದರ, ನ್ಯಾಯಮೂರ್ತಿ ಆರ್ ಮಹಾದೇವನ್ ಪ್ರೌಢಿಮೆಯಿಂದ ಕೂಡಿರುವ ತೀರ್ಪು ನೀಡಿದ್ದು, ಇದು ಅಮೋಘವಾದದ್ದಾಗಿದೆ ಅಂತ ಇದಕ್ಕೆ ಹೆಚ್ಚುವರಿ ಆದೇಶ ಸೇರ್ಪಡೆ ಮಾಡಿದ್ದಾರೆ.
ನ್ಯಾ. ಪಾರ್ದಿವಾಲಾ ಪ್ರಸ್ತಾಪಿಸಿದ ಅಂಶಗಳೇನು…?
* ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು/ಅವಳು ಕಾನೂನಿಗಿಂತ ಮೇಲಲ್ಲ.
* ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ.
* ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಹಂತದಲ್ಲಿ ಯಾವುದೇ ಬೆಲೆ ತೆತ್ತಾದರೂ ಕಾನೂನಾತ್ಮಕ ಆಡಳಿತವನ್ನು ಎತ್ತಿಹಿಡಿಯಬೇಕು.
* ಎಲ್ಲಾ ಸಮಯದಲ್ಲೂ ಕಾನೂನಾತ್ಮಕ ಆಡಳಿತವನ್ನ ಕಾಪಾಡಿಕೊಳ್ಳುವುದು ಇಂದಿನ ಅಗತ್ಯ.
* ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಿದ್ದು ನಮಗೆ ತಿಳಿದಿದೆ.
* ಈ ಸಂಬಂಧ ಜೈಲು ಮೇಲ್ವಿಚಾರಕರು ಸೇರಿ ಎಲ್ಲರ ಅಮಾನತು ಕೂಡ ಗೊತ್ತಾಗಿದೆ.
* ಇದು ಮತ್ತೆ ಪುನರಾವರ್ತನೆ ಆಗಬಾರದು.
* ಆರೋಪಿಗಳು ಜೈಲು ಆವರಣದಲ್ಲಿ ಸಿಗರೇಟು, ಮದ್ಯಸೇವನೆ ಮಾಡಿದರೆ ರಾಜ್ಯ ಸರ್ಕಾರಕ್ಕೆ ಸಮನ್ಸ್ ಕೊಡ್ತೇವೆ
ಇದಕ್ಕೆ ರಾಜ್ಯ ಸರ್ಕಾರಿ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರು ಪೂರಕ ತೀರ್ಪಿನಲ್ಲಿ ನೀವು ಪ್ರಸ್ತಾಪಿಸಿರುವ ವಿಚಾರಗಳು ದೇಶಾದ್ಯಂತ ಪರಿಣಾಮ ಬೀರಲಿದ್ದು, ಈ ತೀರ್ಪನ್ನ ದೇಶದ ಎಲ್ಲಾ ಜೈಲುಗಳಿಗೆ ಕಳುಹಿಸಿಕೊಡಬೇಕಿದೆ. ಗಂಭೀರ ವಿಚಾರ ಇದಾಗಿದೆ ಅಂದ್ರು. ಅದಕ್ಕೆ ಪೀಠವು ಜೈಲು ಆತಿಥ್ಯದ ಫೋಟೊ, ವಿಡಿಯೋಗಳನ್ನ ನಾವು ನೋಡಿದ್ರೆ ನಿಮಗೆ ಮೊದಲು ಸಮನ್ಸ್ ನೀಡಲಾಗುತ್ತದೆ ಅಂದರು. ಈ ಸಂಬಂಧ ಅಡ್ವೊಕೇಟ್ ಜನರಲ್ ಜೊತೆ ಮಾತನಾಡಿ, ಸಂಬಂಧಿತ ಪ್ರಾಧಿಕಾರಗಳಿಗೆ ಸೂಚನೆ ರವಾನಿಸಲಾಗುವುದು ಅಂತ ಲೂಥ್ರಾ ಪೀಠಕ್ಕೆ ಹೇಳಿದರು.