ಬೆಂಗಳೂರು: ಕೆಲವರು ಸಚಿವರು, ಶಾಸಕರ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮೌಖಿಕ ದೂರು ನೀಡಿದ್ದಾರೆ.
ಹಲವು ಸಚಿವರು, ಶಾಸಕರ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ. ಶಾಸಕರ ದೂರವಾಣಿ ಕರೆಗಳನ್ನೂ ಸ್ವೀಕರಿಸುವುದಿಲ್ಲ. ಕೆಲವು ಸಚಿವರು ತಮ್ಮಿಂದಲೇ ಈ ಸರ್ಕಾರ ಬಂದಿದೆ ಎಂದುಕೊಂಡಿದ್ದಾರೆ. ದುರಹಂಕಾರದ ವರ್ತನೆ ಪ್ರದರ್ಶಿಸುತ್ತಿದ್ದಾರೆ. ಮನವಿ ಪತ್ರಗಳನ್ನು ನೀಡಿದರೆ, ಆಪ್ತ ಸಹಾಯಕರಿಂದ ಸಹಿ ಮಾಡಿಸಿ ಅಧಿಕಾರಿಗಳಿಗೆ ನೀಡುತ್ತಾರೆ. ಸಚಿವರ ಆಪ್ತ ಕಾರ್ಯದರ್ಶಿಗಳೂ ದೂರವಾಣಿ ಕರೆ ಸ್ವೀಕರಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕ ರೇಣುಕಾಚಾರ್ಯ
ಸಚಿವರಿಗೆ ಬುದ್ಧಿವಾದ ಹೇಳಬೇಕು. ಪಕ್ಷದ ಶಾಸಕರಿಗೆ ಸ್ಪಂದಿಸುವಂತೆ ತಾಕೀತು ಮಾಡಬೇಕು. ಪಕ್ಷದ ಶಾಸಕರಾದ ನಮಗೇ ಸುಳ್ಳು ಹೇಳುತ್ತಾರೆ. ಈ ವರ್ತನೆಯನ್ನು ತಿದ್ದಿಕೊಳ್ಳುವಂತೆ ಸಚಿವರಿಗೆ ನಿರ್ದೇಶನ ನೀಡಬೇಕು ಎಂದು ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಉಳಿದವರೆಲ್ಲರ ಬದಲಾವಣೆ ಆಗಲಿದೆ. ನೋಡಿದ ಮುಖಗಳನ್ನೇ ಜನ ಎಷ್ಟು ಬಾರಿ ನೋಡುತ್ತಾರೆ ಎಂದು ಕೆಲ ದಿನಗಳ ಹಿಂದಷ್ಟೇ ಸಚಿವರ ವಿರುದ್ಧ ರೇಣುಕಾಚಾರ್ಯ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ಬೆನ್ನಿಗೆ ಚೂರಿ ಹಾಕಿದ್ರು ಸಿದ್ದರಾಮಯ್ಯ: ಶ್ರೀರಾಮುಲು ಟೀಕೆ