ಮಂಗಳೂರು: ಯಕ್ಷಗಾನ ಹಿರಿಯ ಭಾಗವತ ಗಾನ ಕೋಗಿಲೆ ದಿನೇಶ್ ಅಮ್ಮಣ್ಣಾಯ(65) ಬೆಳ್ತಂಗಡಿಯ ಅರಸಿನಮಕ್ಕಿಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ
ತೆಂಕುತಿಟ್ಟು ಯಕ್ಷಗಾನ (Yakshagana) ಪರಂಪರೆಯ ಹಿರಿಯ ಭಾಗವತರಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯ (Dinesh Ammannaya) ‘ರಸರಾಗ ಚಕ್ರವರ್ತಿ’ ಎಂಬ ಬಿರುದು ಹೊಂದಿದ್ದರು.
ದಾಮೋದರ ಮಂಡೆಚ್ಚರ ಗರಡಿಯಲ್ಲಿ ಆರಂಭದಲ್ಲಿ ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಯಕ್ಷಗಾನ ಲೋಕಕ್ಕೆ ಕಾಲಿಟ್ಟ ಇವರು ನಂತರ ಭಾಗವತಿಕೆಯತ್ತ ಆಸಕ್ತಿ ಬೆಳೆಸಿ ಪ್ರಖ್ಯಾತ ಭಾಗವತರಾಗಿ ಹೊರಹೊಮ್ಮಿದರು.
ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರಿಗೆ ಸಲ್ಲುತ್ತದೆ. ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು.
ಎಡನೀರು ಮಠದ ಪರಮಶಿಷ್ಯರಾದ ಅಮ್ಮಣ್ಣಾಯರು ತಮ್ಮ ಜೀವನ ಅತೀ ಹೆಚ್ಚು ಯಕ್ಷಗಾನ ಭಾಗವತಿಕೆಯನ್ನು ಎಡನೀರು ಮಠದ ಮೇಳ ಹಾಗೂ ಎಡನೀರು ಕ್ಷೇತ್ರದಲ್ಲೇ ಮಾಡಿರುವುದು ವಿಶೇಷ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.