– ಬೈಬಲ್ ಹಾಗೂ ಕುರಾನ್ ಗ್ರಂಥಗಳೇ ಶ್ರೇಷ್ಠ
– ಗೀತೆಯಲ್ಲಿ ಶ್ರೀ ದೇವಿಯನ್ನು ಪೂಜೆ ಮಾಡಿ ಎಂದು ಬರೆದಿದ್ಯಾ?
ತುಮಕೂರು: ಶಿವಮೊಗ್ಗದ ಬಳಿಕ ಕಲ್ಪತರು ನಾಡು ತುಮಕೂರಿಗೂ ನಕಲಿ ಭಗವದ್ಗೀತೆ(Bhagavad Gita) ಪುಸ್ತಕದ ಜಾಲ ಕಾಲಿಟ್ಟಿದೆ. ಈ ಮೂಲಕ ಮತಾಂತರ ಜಾಲವೊಂದು ಸದ್ದಿಲ್ಲದೇ ಕೆಲಸ ಮಾಡುತ್ತಿದೆಯೋ ಎಂಬ ಅನುಮಾನ ವ್ಯಕ್ತವಾಗಿದೆ.
ಹೌದು. ಇಲ್ಲಸಲ್ಲದ ಆಸೆಗಳನ್ನು ಹೇಳಿ ಮತಾಂತರ(Religious Conversion) ಮಾಡುವುದು ಹಳೆಯ ಸುದ್ದಿ. ಆದರೆ ಈಗ ನಕಲಿ ಭಗವದ್ಗೀತೆಯನ್ನು ಮುದ್ರಿಸಿ ಅದನ್ನುಹಿಡಿದು ಮತಾಂತರ ಮಾಡಲು ಹೊರಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಹೊರರಾಜ್ಯದಿಂದ ಬಂದು ಜನಸಂದಣಿ ಇರುವ ಪ್ರದೇಶ, ಹಿಂದೂ ದೇವಾಲಯಗಳ ಬಳಿ ಹಾಗೂ ಹಳ್ಳಿ ಹಳ್ಳಿಗಳಿಗೆ ತೆರಳಿ ಭಗವದ್ಗೀತೆ ಹೋಲುವ ಪುಸ್ತಕವನ್ನ ಮಾರಾಟ ಮಾಡಲಾಗುತ್ತಿದೆ. ʼಗೀತೆ ನಿನ್ನ ಜ್ಞಾನ ಅಮೃತʼ ಎಂಬ ಹೆಸರಿನಲ್ಲಿರುವ ಪುಸ್ತಕವನ್ನು ಮುದ್ರಿಸಿ 100 ರೂ. ಬೆಲೆಯಿರುವ ಪುಸ್ತಕವನ್ನು ಜನಸಾಮಾನ್ಯರಿಗೆ 10 ರಿಂದ 30 ರೂ.ಗೆ ಹಾಗೂ ಕೆಲವು ಕಡೆ ಉಚಿತವಾಗಿ ಕೊಡಲಾಗುತ್ತಿದೆ ಎಂದು ಭಜರಂಗ ದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ತಿಳಿಸಿದ್ದಾರೆ.
ನಕಲಿ ಪುಸ್ತಕದ ಮುಖಪುಟದ ಮೇಲೆ ಶ್ರೀಕೃಷ್ಣನ ಚಿತ್ರವನ್ನೂ ಮುದ್ರಿಸಲಾಗಿದೆ. ಕಡಿಮೆ ದರಕ್ಕೆ ಧರ್ಮ ಗ್ರಂಥದ ಪುಸ್ತಕ ಸಿಕ್ಕಿದೆ ಎಂದು ಖರೀದಿಸಿ ಮನೆಗೆ ತೆಗೆದುಕೊಂಡು ಹೋದವರಿಗೆ ಶಾಕ್ ಆಗಿದೆ.
ಪುಸ್ತಕದಲ್ಲಿ ಏನಿದೆ?
ಹಿಂದೂ ಧರ್ಮ(Hindu Religion) ಸರಿಯಿಲ್ಲ, ಹಿಂದೂ ದೇವರುಗಳು, ಆಚರಣೆಗಳು ಸರಿಯಿಲ್ಲ ಎಂದು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೇ ಬೈಬಲ್(Bible) ಹಾಗೂ ಕುರಾನ್(Quran) ಗ್ರಂಥಗಳೇ ಶ್ರೇಷ್ಠ ಅಂತಲೂ ಹೇಳಲಾಗಿದೆ.
ಗೀತಾ ಜ್ಞಾನದಲ್ಲಿ ತಾನು ಏನು ಹೇಳಿದ್ದೇನೆ ಎಂಬುದರ ಬಗ್ಗೆ ಶ್ರೀಕೃಷ್ಣನಿಗೆ ಗೊತ್ತೇ ಇರಲಿಲ್ಲ. ಗೀತೆಯ ಜ್ಞಾನವನ್ನು ಶ್ರೀ ಕೃಷ್ಣನು ಹೇಳಿಲ್ಲ. ಬದಲಾಗಿ ಅವನ ಶರೀರದಲ್ಲಿ ಪ್ರೇತಗಳಂತೆ ಪ್ರವೇಶಿಸಿದ ಕಾಲಾನು ಹೇಳಿದ್ದಾನೆ ಎಂದು ಅವಹೇಳನ ಮಾಡಲಾಗಿದೆ.
ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೂ ಸಾವಿದೆ. ಗೀತೆಯಲ್ಲಿ ಶ್ರೀ ದೇವಿಯನ್ನು ಪೂಜೆ ಮಾಡಿ ಎಂದು ಎಲ್ಲಾದರೂ ಬರೆದಿದೆಯೇ? ವೇದಗಳಲ್ಲಿಯೂ ಸಹಾ ದುರ್ಗೆಯನ್ನು, ಶ್ರೀ ದೇವಿಯನ್ನು ಪೂಜೆ ಮಾಡಿ ಎಂದು ಬರೆದಿಲ್ಲ. ಹಾಗಾದರೆ ಮಹರ್ಷಿಗಳು ವೇದಗಳನ್ನು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ? ಇದನ್ನೂ ಓದಿ: ಮುಸ್ಲಿಮರಿಗೂ ಮೀಸಲಾತಿ ಹೆಚ್ಚಿಸಿ – ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ
ಸತ್ಯಯುಗದ ಮಹರ್ಷಿಗಳು ಪೂರ್ಣ ವಿದ್ವಾಂಸರೇ? ‘ಓಂ ‘ ಎಂಬ ನಾಮಜಪವೂ ಎಲ್ಲದಕ್ಕಿಂತ ಉತ್ತಮ ಜಪ ಹಾಗೂ ಬ್ರಹ್ಮ ಪೂಜೆಯು ಸರ್ವಶ್ರೇಷ್ಠ ಎನ್ನುವುದು ಅವರ ಸ್ವಂತ ನಿರ್ಧಾರವಾಗಿತ್ತು. ಹಾಗಾಗಿ ಪ್ರಿಯ ಓದುಗರೇ! ಯಾರು ಬ್ರಹ್ಮನ ಪೂಜೆಯನ್ನು ಇಷ್ಟ ದೈವವೆಂದು ತಿಳಿದು ಮಾಡುತ್ತಾರೋ ಅವರು ಅಜ್ಞಾನಿಗಳು, ಬ್ರಹ್ಮ ಸಾಧನೆಯಿಂದ ಉತ್ತಮವಲ್ಲದ ಮೋಕ್ಷವು ಅವರಿಗೆ ಪ್ರಾಪ್ತವಾಗುತ್ತದೆ ಎಂದು ಭಗವದ್ಗೀತೆಯ ಸಾರವನ್ನೇ ತಿರುಚಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂಪರ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ತುಮಕೂರಿನ ಕೋರಾ ಪೊಲೀಸ್ ಠಾಣೆ ಮತ್ತು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಹಿಂದೂಪರ ಕಾರ್ಯಕರ್ತರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೂ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.
ಈ ಪುಸ್ತಕಗಳನ್ನ ಬ್ಯಾನ್ ಮಾಡಬೇಕು, ಈ ಪುಸ್ತಕಗಳನ್ನ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಬಿಟ್ಟಿರುವ ವೆಬ್ ಸೈಟ್ ಅನ್ನು ನಿಷೇಧ ಮಾಡಬೇಕು. ಇದರ ಹಿಂದೆ ಕೆಲಸ ಮಾಡುತ್ತಿರುವವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.