ಇಡೀ ರಾಜ್ಯಕ್ಕೆ ವಿಸ್ತರಿಸಿದ ವ್ಯಾಪಾರ ಧರ್ಮಯುದ್ಧ – ಬೆಂಗ್ಳೂರಿನ ದೇವಸ್ಥಾನದ ಅಂಗಡಿಗಳು ಬಂದ್

Public TV
3 Min Read

– ಶಿವಮೊಗ್ಗ ಜಾತ್ರೆ ಅಂಗಡಿ ಮುಂದೆ ಭಗವಾಧ್ವಜ
– ಮಾರಿಗುಡಿ ಜಾತ್ರೆಯಲ್ಲಿ ಹಿಂದೂಗಳಿಂದ್ಲೇ ವ್ಯಾಪಾರ
– ನಿಷೇಧ ರಾಜಕೀಯಕ್ಕೆ ಬಪ್ಪನಾಡು ದೇಗುಲ ಬೇಸರ

ಬೆಂಗಳೂರು: ಹಿಜಬ್ ವಿವಾದದ ಕಿಡಿ ಈಗ ರೂಪಾಂತರಗೊಂಡಿದೆ. ಶಾಲಾ-ಕಾಲೇಜುಗಳಲ್ಲಿ ಅಷ್ಟೇ ಇದ್ದ ವಿವಾದ ಈಗ ಹೊಸ ತಿರುವು ಪಡೆದಿದ್ದು, ಧರ್ಮ ಧರ್ಮಗಳ ನಡುವೆ ದೊಡ್ಡ ಕಂದಕವೇ ನಿರ್ಮಾಣಗೊಳ್ತಿದೆ. ನಿನ್ನೆವರೆಗೂ ಕರಾವಳಿಗೆ ಮಾತ್ರ ಸೀಮಿತವಾಗಿದ್ದ ವ್ಯಾಪಾರ ಧರ್ಮಯುದ್ಧ, ಈಗ ಕೋವಿಡ್ ವೈರಸ್‍ಗಿಂತಲೂ ವೇಗವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳತೊಡಗಿದೆ.

ಬೆಂಗಳೂರಿನಲ್ಲಿಯೂ ಹಿಂದೂ ಸಂಘಟನೆಗಳು ಬಹಿಷ್ಕಾರ ಚಳವಳಿ ಶುರು ಮಾಡಿದ್ದಾರೆ. ಹಲವು ಹಿಂದೂ ದೇಗುಲಗಳಿಗೆ ಸೇರಿದ ಅಂಗಡಿಗಳಿಂದ ಮುಸ್ಲಿಮರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಶುರುವಾಗಿವೆ. ಉಪ್ಪಾರಪೇಟೆಯ ಆಂಜನೇಯಸ್ವಾಮಿ ದೇಗುಲದ ಮುಂದಿರುವ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ 8 ಮುಸ್ಲಿಮರ ಅಂಗಡಿಗಳನ್ನು ಹಿಂದೂ ಕಾರ್ಯಕರ್ತರು ಬಂದ್ ಮಾಡಿಸಿದ್ದಾರೆ. ತಹಶೀಲ್ದಾರ್ ಸೂಕ್ತ ಕ್ರಮದ ಭರವಸೆ ನೀಡಿದ ನಂತ್ರ ಪ್ರತಿಭಟನೆ ಕೈಬಿಟ್ಟಿದ್ದಾರೆ. ಬನಶಂಕರಿ ಸೇರಿ ಮುಜರಾಯಿ ವ್ಯಾಪ್ತಿಯ ಎಲ್ಲಾ ದೇಗುಲಗಳ ಜಾತ್ರೆಗಳಲ್ಲಿ, ದೇಗುಲಕ್ಕೆ ಸಂಬಂಧಿಸಿದ ಕಟ್ಟಡಗಳಲ್ಲಿ ವ್ಯಾಪಾರ ಮಾಡಲು ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂದು ಹಿಂದೂಪರ ಮುಖಂಡರು ಒತ್ತಾಯಿಸಿದ್ದಾರೆ.

ಇತ್ತ ಕೊಲ್ಲೂರು ದೇವಳದ ಬಳಿಯೂ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿಷೇಧ ಹೇರಬೇಕು ಎಂದು ಹಿಂದೂ ಮುಖಂಡರು ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ನಾಡಿದ್ದು ಕೊಲ್ಲೂರು ಮೂಕಾಂಬಿಕಾ ವಾರ್ಷಿಕ ಜಾತ್ರೆ ಇದ್ದು, ಪಂಚಾಯ್ತಿ ನಡೆ ಕುತೂಹಲ ಮೂಡಿಸಿದೆ. ಅತ್ತ ಚಿಕ್ಕಮಗಳೂರಿನ ಕಿಗ್ಗ ಋಷ್ಯಶೃಂಗ ಜಾತ್ರೆಯಲ್ಲಿ ಅನ್ಯಧರ್ಮೀಯರ ಅಂಗಡಿಗಳಿಗೆ ಅವಕಾಶ ನೀಡಬಾರದು ಎಂಬ ಒತ್ತಾಯ ಕೇಳಿಬಂದಿದೆ.

ಕಾಪು ಮಾರಿಗುಡಿ ಅಂದ್ರೆ ಸೌಹಾರ್ದತೆಗೆ ಮತ್ತೊಂದು ಹೆಸರು. ಕ್ರೈಸ್ತರು ಬೆಳೆದ ಶಂಕರಪುರ ಮಲ್ಲಿಗೆಯನ್ನು ಮುಸ್ಲಿಮರು ಖರೀದಿಸಿ ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದರು. ಮಾರಿಗುಡಿಗೆ ಹರಕೆ ಅರ್ಪಿಸುವ ಕೋಳಿ, ಕುರಿಗಳನ್ನು ಸಹ ಮುಸ್ಲಿಮರೇ ಹೆಚ್ಚಾಗಿ ಮಾರಾಟ ಮಾಡುತ್ತಿದ್ದರು. ಆದರೆ ಕಳೆದ ವರ್ಷ ಗಂಗೊಳ್ಳಿಯಲ್ಲಿ ಹಿಂದೂ ಮೀನುಗಾರರಿಗೆ, ಮುಸ್ಲಿಮರು ನಾಲ್ಕು ದಿನ ಬಹಿಷ್ಕಾರ ಹಾಕಿದ್ಮೇಲೆ ನಿಧಾನಕ್ಕೆ ಅದರ ಕಾವು ಎಲ್ಲೆಡೆ ತಟ್ಟತೊಡಗಿತ್ತು.

ಹಿಜಬ್ ತೀರ್ಪನ್ನು ಖಂಡಿಸಿ ಮುಸ್ಲಿಮರು ಇತ್ತೀಚಿಗೆ ಬಂದ್ ನಡೆಸಿದ್ದು, ಕರಾವಳಿಯ ಹಿಂದೂ ಸಂಘಟನೆಗಳನ್ನು ಬಡಿದೆಬ್ಬಿಸಿತ್ತು. ಅದರ ಪರಿಣಾಮವೇ ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ. ಮುಸ್ಲಿಮರು ಮಾಡ್ತಿದ್ದ ವ್ಯಾಪಾರವನ್ನು ಈಗ ಹಿಂದೂಗಳೇ ಮಾಡಿಕೊಳ್ತಿದ್ದಾರೆ. ಹಿಂದೂ ಸಂಘಟನೆಗಳ ನೆರವಿನಿಂದ ಎರಡೇ ದಿನದಲ್ಲಿ ಕೋಳಿ, ಕುರಿಗಳ ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸೇನಾ ಸಮವಸ್ತ್ರದಲ್ಲಿರೋವಾಗ ತಿಲಕವಿಡಲು ಭಾರತೀಯ ಅಧಿಕಾರಿಗೆ ಅಮೆರಿಕ ಅನುಮತಿ

ಅತ್ತ ಶಿವಮೊಗ್ಗದ ಮಾರಿಕಾಂಬ ಜಾತ್ರೆಯಲ್ಲೂ ಬರೀ ಹಿಂದೂಗಳಿಗೆ ಅಂಗಡಿ ಹಾಕಲು ಅವಕಾಶ ನೀಡಲಾಗಿದೆ. ಪ್ರತಿಯೊಂದು ಸ್ಟಾಲ್ ಮುಂದೆಯೂ ಭಗವಾ ಧ್ವಜ ಹಾರುತ್ತಿದೆ. ಇನ್ನು, ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಸರಿಯಲ್ಲ ಸಿದ್ದರಾಮಯ್ಯ ವಿರುದ್ಧ ಭಜರಂಗ ದಳ ಮತ್ತೊಮ್ಮೆ ಕಿಡಿಕಾರಿದೆ. ಅವರದ್ದು ಪಕ್ಷಪಾತದ ರಾಜಕಾರಣ ಎಂದು ಜರೆದಿದೆ. ಮುಂದಿನ ದಿನಗಳಲ್ಲಿ ಹಲಾಲ್ ವಿವಾದ ಕೆದಕುವ ಸುಳಿವನ್ನು ನೀಡಿದೆ.

ಮಂಗಳೂರಿನ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಬಹಿಷ್ಕಾರ ಹಾಕುವ ಬ್ಯಾನರ್ ಹಾಕಲಾಗಿದೆ. ಸಮಸ್ತ ಹಿಂದೂ ಬಾಂಧವರು ಎಂಬ ಹೆಸರಿನಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಇದರಿಂದ ಮುಸ್ಲಿಮರು ವ್ಯಾಪಾರದಿಂದ ಹಿಂದೆ ಸರಿದಿದ್ದಾರೆ. ಆದರೆ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ ಹೇರಿರೋದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. ಇಲ್ಲಿ ಬ್ಯಾನರ್ ಹಾಕಲು ಅವಕಾಶವಿಲ್ಲ. ಆದರೆ ಯಾರು ಹಾಕಿದ್ರೋ ಗೊತ್ತಿಲ್ಲ. ಮುಸ್ಲಿಮ್ ವ್ಯಾಪಾರಿಗಳು ಬಂದ್ರೂ ಅವರನ್ನ ವಾಪಸ್ ಕಳಿಸಲ್ಲ ಎಂದು ದೇಗುಲದ ಮುಖ್ಯಸ್ಥ ಮನೋಹರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರ್‌ ಫೈಲ್ಸ್‌ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ IAS ಅಧಿಕಾರಿ ನಿಯಾಜ್‌ ಖಾನ್‌ಗೆ ನೋಟಿಸ್‌: MP ಗೃಹ ಸಚಿವ

ಮಾಜಿ ಮೊಕ್ತೇಸರ ಹರಿಕೃಷ್ಣ ಪುನರೂರು ಮಾತನಾಡಿ, ಮುಸ್ಲಿಮರು ಮತಾಂತರಕ್ಕೆ ಮುಂದಾದಲ್ಲಿ ಪ್ರಶ್ನೆ ಮಾಡಬಹುದು.. ಆದ್ರೇ ಅವರು ಬದುಕೋದಕ್ಕೆ ಅಡ್ಡಗಾಲು ಹಾಕೋದು ಸರಿಯಲ್ಲ ಎಂದಿದ್ದಾರೆ. ಈ ಕ್ಷೇತ್ರವನ್ನು ಬಪ್ಪ ಬ್ಯಾರಿ ಎಂಬ ಮುಸ್ಲಿಂ ಜೀರ್ಣೋದ್ಧಾರ ಮಾಡಿದ್ದ ಇತಿಹಾಸವನ್ನು ನೆನಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *