ಬಳ್ಳಾರಿ: ಶಾಸಕ ಶ್ರೀರಾಮುಲು, ಮಾಜಿ ಸಚಿವ ಜನಾರ್ದನ ರೆಡ್ಡಿ ಇದೀಗ ತಮ್ಮ ರಾಜಕೀಯ ಗುರುವಿಗೆ ಗುರುದಕ್ಷಿಣೆ ಕೊಡಲು ಮುಂದಾಗಿದ್ದಾರೆ. ತಮ್ಮ ರಾಜಕೀಯ ಗುರು ಎಂದೇ ಬಣ್ಣಿಸುವ ಮಾಜಿ ಸಂಸದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎನ್ ವೈ ಹನುಮಂತಪ್ಪರ ಪುತ್ರನಿಗೆ ಬಳ್ಳಾರಿ ಲೋಕಸಭೆಯ ಉಪಚುನಾವಣೆಯಲ್ಲಿ ಎಂಪಿ ಟಿಕೆಟ್ ಕೊಡಿಸಲು ರೆಡ್ಡಿ-ರಾಮುಲು ಇದೀಗ ಸಜ್ಜಾಗಿದ್ದಾರೆ.
ಮೊನ್ನೆ ಮೊನ್ನೆಯಷ್ಟೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣರನ್ನ ಬಿಜೆಪಿಗೆ ಕರೆತಂದು ಗೆಲ್ಲಿಸುವಲ್ಲಿ ಯಶ್ವಸಿಯಾದ ರೆಡ್ಡಿ-ರಾಮುಲು ಇದೀಗ ತಮ್ಮ ರಾಜಕೀಯ ಗುರು ಎನ್ ವೈ ಹನುಮಂತಪ್ಪರ ಪುತ್ರನನ್ನ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಲು ಮುಂದಾಗಿದ್ದಾರೆ.
ನ್ಯಾಯವಾದಿ ಹಾಗೂ ಉದ್ಯಮಿಯಾಗಿರುವ ಎನ್ ವೈ ಹನುಮಂತಪ್ಪರ ಪುತ್ರ ಸುಜಯ್ಕುಮಾರರನ್ನ ಲೋಕಸಭಾ ಉಪಚುನಾವಣೆಯ ಕಣಕ್ಕೆ ಇಳಿಸಲು ಮಾತುಕತೆ ನಡೆಸುತ್ತಿದ್ದಾರೆ. ಶಾಸಕ ಶ್ರೀರಾಮುಲುರ ಸೋದರಳಿಯ ಕಂಪ್ಲಿಯ ಮಾಜಿ ಶಾಸಕ ಸುರೇಶ್ಬಾಬು ಉಪಚುನಾವಣೆಯ ಕಣಕ್ಕೆ ಇಳಿಯಲು ಹಿಂದೇಟು ಹಾಕುತ್ತಿರುವುದರಿಂದ ತಮ್ಮ ರಾಜಕೀಯ ಗುರು ಎನ್ ವೈ ಹನುಮಂತಪ್ಪರ ಪುತ್ರ ಸುಜಯ್ಕುಮಾರನ್ನ ಲೋಕಸಭಾ ಉಪಚುನಾವಣೆಯ ಕಣಕ್ಕೆ ಸ್ಪರ್ಧಿಸುವಂತೆ ರೆಡ್ಡಿ- ರಾಮುಲು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ರಾತ್ರಿ ಈಗಾಗಲೇ ಶಾಸಕ ಗೋಪಾಲಕೃಷ್ಣ ಜೊತೆ ಶಾಸಕ ಶ್ರೀರಾಮುಲು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಳ್ಳಾರಿಯಲ್ಲಿ ತಮ್ಮದೆಯಾದ ಹಿಡಿತ ಸಾಧಿಸಿರುವ ಎನ್ ವೈ ಕುಟುಂಬವನ್ನು ಕಣಕ್ಕೆ ಇಳಿಸಿದರೆ ತಮ್ಮ ವರ್ಚಸ್ಸನ್ನು ಸಹ ಬಳಿಸಿದರೆ ಸುಲಭವಾಗಿ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸುವುದು ಸರಳವಾಗುತ್ತದೆ ಎನ್ನುವ ವಿಶ್ವಾಸವನ್ನು ಶಾಸಕ ಶ್ರೀರಾಮುಲು ಹೊಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv