ವರ್ಷಕ್ಕೊಮ್ಮೆ ವೇಷ ಬದಲಿಸೋ ರವಿ ಕಟಪಾಡಿ- ವೇಷ ಹಾಕಿ 35 ಲಕ್ಷ ಸಹಾಯ

Public TV
2 Min Read

– ವಿದೇಶ ಸೇರಿದ್ರೂ ನೋವಿಗೆ ಮಿಡಿದ ಉಡುಪಿ ಯುವಕನ ಕಥೆ

ಉಡುಪಿ: ಸಮಾಜ ಸೇವೆ ಮಾಡಬೇಕಾದರೆ ಸಿಕ್ಕಾಪಟ್ಟೆ ದುಡ್ಡು ಬೇಕಾಗಿಲ್ಲ. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸಿದ್ದರೆ ಸಾಕು. ಇದಕ್ಕೆ ಸಾಕ್ಷಿ ಎಂಬಂತೆ ಉಡುಪಿಯ ರವಿ ಅವರು ದುಡಿಯುವುದಕ್ಕೆ ದೇಶ ಬಿಟ್ಟು ವಿದೇಶ ಸೇರಿದ್ದರು. ಮಸ್ಕತ್‍ಗೆ ಹೋಗಿ ಇನ್ನೂ ಒಂದು ವರ್ಷ ಆಗಿಲ್ಲ. ಮತ್ತೆ ಊರಿಗೆ ಬಂದು ವೇಷ ಹಾಕಿ ಧನ ಸಂಗ್ರಹ ಮಾಡಿದ್ದಾರೆ.

ಕೂಲಿ ಕಾರ್ಮಿಕರಾಗಿರೋ ರವಿ ಕಟಪಾಡಿಯವರ ಊರು ಉಡುಪಿ. ಸದ್ಯ ಮಸ್ಕತ್‍ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಸಾರ ತೂಗಿಸುವಷ್ಟು ಸಂಬಳ ದುಡಿಯುತ್ತಿದ್ದರೂ ಸಮಾಜ ಸೇವೆ ಮಾಡುವ ಮನಸ್ಸು ಇವರಿಗಿದೆ. ವಿದೇಶ ಸೇರಿ ವರ್ಷ ಆಗುವುದರೊಳಗೆ ಊರಿಗೆ ಬಂದಿದ್ದರು. ಪ್ರತಿ ವರ್ಷ ವಿಭಿನ್ನ ಗೆಟಪ್‍ಗೆ ಹೆಸರಾಗಿರುವ ರವಿ ಅವರು, ಈ ಬಾರಿಯ ಕೃಷ್ಣಜನ್ಮಾಷ್ಟಮಿಗೆ ವ್ಯಾಂಪೈರ್ ವೇಷ ಧರಿಸಿ ಜನರ ಮುಂದೆ ಪ್ರತ್ಯಕ್ಷವಾಗಿದ್ದರು.

ವ್ಯಾಂಪೈರ್ ವೇಷ ಧರಿಸಬೇಕೆಂದು ನಿರ್ಧರಿಸಿದ್ದೆವು. ಸುಮಾರು 5 ಮಕ್ಕಳಿಗೆ ಸಹಾಯ ಮಾಡಬೇಕೆಂದುಕೊಂಡಿದ್ದೆವು. ನಾವು ವೇಷವನ್ನು 9 ವರ್ಷದಿಂದ ಹಾಕುತ್ತಿದ್ದೇವೆ. ಆದರೆ 5 ವರ್ಷದಿಂದ ಹಣ ಸಂಗ್ರಹಿಸಿ 38 ಲಕ್ಷದವರೆಗೂ ಅನಾರೋಗ್ಯ ಪೀಡಿತ ಮಕ್ಕಳಿಗೆ ಹಣ ಕೊಟ್ಟಿದ್ದೇವೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಸಮಾಜ ಸೇವಕ ರವಿ ಕಟಪಾಡಿ ಹೇಳಿದರು.

ಹಾಲಿವುಡ್‍ನ ಇಮ್ಯಾಜಿನರಿ ಕ್ಯಾರೆಕ್ಟರ್  ಗಳಂದರೆ ರವಿಗೆ ಇಷ್ಟ. ಭಯ ಹುಟ್ಟಿಸುವ ವೇಷ ಹಾಕಿ ರವಿ ಕಟಪಾಡಿ ತಂಡ ಉಡುಪಿ ಮತ್ತು ಕಾಪು ತಾಲೂಕಿನಲ್ಲೆಲ್ಲಾ ಓಡಾಡುತ್ತದೆ. ಸುಮಾರು ನೂರು ಹುಡುಗರು ತಿಂಗಳ ಪರಿಶ್ರಮ ಹಾಕಿ ಧನ ಸಂಗ್ರಹ ಮಾಡಿದ್ದಾರೆ. ವರ್ಷಕ್ಕೆ ಐದಾರು ಮಂದಿಗೆ ಸಹಾಯ ಮಾಡಿದ್ದಾರೆ. ಈಗಾಗಲೇ ವೇಷ ಹಾಕಿ 35 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಫಲಾನುಭವಿಗಳ ಸಹಾಯಕ್ಕೆ ಕೊಟ್ಟಿದ್ದಾರೆ ಎಂದು ರವಿ ಗೆಳೆಯರ ಬಳಗದ ಸದಸ್ಯ ಮಹೇಶ್ ಶೆಣೈ ತಿಳಿಸಿದರು.

ರವಿ ವೇಷ ಹಾಕಲು ಭಾರತಕ್ಕೆ ಹೋಗುತ್ತಿರುವುದು ಗೊತ್ತಾಗಿ ಮಸ್ಕತ್‍ನ ಗೆಳೆಯರು ಸುಮಾರು ಒಂದೂವರೆ ಲಕ್ಷ ರೂಪಾಯಿಯನ್ನು ರವಿಯ ಕೈಗಿತ್ತಿದ್ದರು. ಊರಿಗೆಲ್ಲಾ ಲಕ್ಷಾಂತರ ರೂಪಾಯಿ ಸಹಾಯ ಮಾಡಿದ್ದಾರೆ. ಎರಡು ದಿನ ಅನ್ನಾಹಾರ ಬಿಟ್ಟು ವೇಷ ತೊಟ್ಟು ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸುವ ರವಿ ಕಟಪಾಡಿಗೆ ಕೆಲಸದ ಅವಶ್ಯಕತೆ ಇದೆ. ಕೆಲಸ ಸಿಕ್ಕಿಲ್ಲಾಂದರೆ, ಯಾರೂ ಕೆಲಸ ಕೊಟ್ಟಿಲ್ಲಾಂದರೆ ಮತ್ತೆ ಮಸ್ಕತ್‍ಗೆ ಹೋಗುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *