ಕೊಡಗು ನಿರಾಶ್ರಿತರ ಪಕ್ಕದಲ್ಲಿ ಕುಳಿತು ಕಷ್ಟ ಆಲಿಸಿದ ಚಂದನ್ ಶೆಟ್ಟಿ

Public TV
1 Min Read

ಬೆಂಗಳೂರು: ಮಳೆಯ ರುದ್ರನರ್ತನಕ್ಕೆ ತತ್ತರಿಸಿ ಹೋಗಿರುವ ಕೊಡಗು ಸಂತ್ರಸ್ತರಿಗೆ ಜನರು ಸೇರಿದಂತೆ ಸ್ಯಾಂಡಲ್ ವುಡ್ ತಾರೆಯರು ಕೂಡ ಸಹಾಯ ಹಸ್ತವನ್ನು ನೀಡಿದ್ದಾರೆ.

ಬಿಗ್ ಬಾಸ್ 5ನೇ ಆವೃತ್ತಿಯ ವಿನ್ನರ್ ಚಂದನ್ ಶೆಟ್ಟಿ ಅವರು ಕೂಡ ಕೊಡಗಿನ ಜನತೆಗೆ ಸಹಾಯ ಹಸ್ತ ನೀಡಿದ್ದಾರೆ. ಈಗಾಗಲೇ ಚಂದನ್ ಅವರು ಕೈಲಾದಷ್ಟು ಆಹಾರ ಸಾಮಾಗ್ರಿಗಳನ್ನು ಜನತೆಗೆ ತಲುಪಿಸಿದ್ದಾರೆ. ಅಷ್ಟೇ ಅಲ್ಲದೇ ಸ್ವತಃ ಅವರೇ ನಿರಾಶ್ರಿತರ ಬಳಿ ಹೋಗಿ ಅವರ ಕಷ್ಟಗಳನ್ನು ಆಲಿಸಿದ್ದಾರೆ.

ಚಂದನ್ ಶೆಟ್ಟಿ ಅವರು ಸೋಮರಪೇಟೆಯ ಒಕ್ಕಲಿಗ ಸಮಾಜ ಭವನಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಜನರ ಜೊತೆ ಮಾತನಾಡಿದ್ದಾರೆ. ಈ ವೇಳೆ ಮಾಧ್ಯಮದವರ ಬಳಿ ಮಾತನಾಡಿದ ಚಂದನ್, ಒಕ್ಕಲಿಗರ ಸಮಾಜ ಭವನದಲ್ಲಿ ಸಾಕಷ್ಟು ನಿರಾಶ್ರಿತರಿಗೆ ಇರೋದಕ್ಕೆ ಅವಕಾಶ ನೀಡಲಾಗಿದೆ. ಸುಮಾರು ಕಡೆಗಳಿಂದ ದಾಸ್ತಾನು ಪದಾರ್ಥಗಳು, ತಿಂಡಿ, ತಿನಿಸುಗಳು, ಹೊದಿಕೆ, ಔಷಧಿ ಮತ್ತು ಅಗತ್ಯ ವಸ್ತುಗಳು ಬಂದಿವೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಊಟ-ತಿಂಡಿಗೆ ಯಾವುದೇ ಕೊರತೆ ಇಲ್ಲ. ಆದರೆ ಇಲ್ಲಿ ಸಮಸ್ಯೆ ಏನಾಗಿದೆ ಎಂದರೆ ಸಾಕಷ್ಟು ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಮಳೆ ನಿಂತ ಮೇಲೆ ನಾವು ಎಲ್ಲಿಗೆ ಹೋಗುವುದು, ಎಲ್ಲಿ ಇರುವುದು, ನಮ್ಮ ಜೀವನ ಹೇಗೆ ಎಂಬ ಪ್ರಶ್ನೆ ನಿರಾಶ್ರಿತರಲ್ಲಿ ಮೂಡಿದೆ. ಆದ್ದರಿಂದ ನಾನು ಸರ್ಕಾರಕ್ಕೆ ಮತ್ತು ಸಾರ್ವಜನಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾರಿಗಾದರೂ ದೇಣಿಗೆ ನೀಡಬೇಕೆಂದು ಬಯಸುವವರು ಹಣ ಸಹಾಯ ಮಾಡಿ ಮನೆ ಕಟ್ಟಿಸಿಕೊಡಿ. ನಾನು ಸಹ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈಗಾಗಲೇ ನಟ ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್ ಮತ್ತು ನಟಿ ಹರ್ಷಿಕಾ ಪೂಣಚ್ಚ ಅನೇಕರು ಕೊಡಗು ಜನರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಅದೇ ರೀತಿ ಅಭಿಮಾನಿಗಳು ಕೂಡ ಅವರ ಕೈಲಾದಷ್ಟು ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *