ರಣ್‍ವೀರ್ ಸಿಂಗ್ ಮನೆಯಲ್ಲಿ ಅರಿಶಿಣ ಶಾಸ್ತ್ರ

Public TV
1 Min Read

ಮುಂಬೈ: ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್‍ವೀರ್ ಸಿಂಗ್ ಮದುವೆಗಾಗಿ ಇಡೀ ಬಾಲಿವುಡ್ ಕಾಯುತ್ತಿದೆ. ಎರಡು ದಿನಗಳ ಹಿಂದೆ ದೀಪಿಕಾ ಮನೆಯಲ್ಲಿ ಮದುವೆ ಶಾಸ್ತ್ರದಲ್ಲಿ ತೊಡಗಿದ್ದ ಫೋಟೋಗಳು ವೈರಲ್ ಆಗಿದ್ದವು. ಇಂದು ರಣ್‍ವೀರ್ ಸಿಂಗ್ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆದಿದೆ.

ರಣ್‍ವೀರ್ ಅವರ ಮುಂಬೈ ನಿವಾಸದಲ್ಲಿ ಅರಿಶಿಣ ಶಾಸ್ತ್ರ ನಡೆದಿದೆ. ಮುಂಬೈನ ಬಾಂದ್ರಾ ನಿವಾಸ ಸಂಪೂರ್ಣ ಹೂಗಳಿಂದ ಅಲಂಕೃತವಾಗಿದ್ದು, ಮನೆಯ ಬಾಲ್ಕನಿಯಲ್ಲಿ ರಣ್‍ವೀರ್ ಸಿಂಗ್ ಕಾಸ್ಟಿಂಗ್ ಡೈರೆಕ್ಟರ್ ಶೇನು ಶರ್ಮಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವಾಗ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದಾರೆ. ಕುಟುಂಬದ ಆಪ್ತರು ಮತ್ತು ರಣ್‍ವೀರ್ ಕಾಲೇಜಿನ ಗೆಳೆಯರು ಮಾತ್ರ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ.

ರಣ್‍ವೀರ್ ಶ್ವೇತ ವರ್ಣದ ಕುರ್ತಾ ಪೈಜಾಮ್ ಧರಿಸಿ ಎರಡು ಕೆನ್ನೆಗೆ ಅರಿಶಿಣ ಹಚ್ಚಿರೋದನ್ನು ಫೋಟೋಗಳಲ್ಲಿ ನೋಡಬಹುದು. ಇಷ್ಟು ದಿನ ರೋಹಿತ್ ಶೆಟ್ಟಿ ನಿರ್ದೇಶನದ ಸಿಂ ಬಾ ಸಿನಿಮಾದ ಶೂಟಿಂಗ್ ನಲ್ಲಿ ರಣ್‍ವೀರ್ ಬ್ಯೂಸಿ ಅಗಿದ್ದರು. ಶೂಟಿಂಗ್ ನಿಂದ ಬಂದ ಕೂಡಲೇ ಮನೆಯಲ್ಲಿ ಮದುವೆ ವಾತಾವರಣ ಮನೆ ಮಾಡಿದೆ. ಈಗಾಗಲೇ ದೀಪಿಕಾ ಬೆಂಗಳೂರಿಗೆ ಆಗಮಿಸಿದ್ದಾರೆ. ಕುಟುಂಬಸ್ಥರ ಜೊತೆಯಲ್ಲಿ ಮದುವೆ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿಗೆ ಬರುವ ಮುನ್ನವೇ ದೀಪಿಕಾ ಚಿನ್ನಾಭರಣ ಖರೀದಿಸಿದ್ದು, 20 ಲಕ್ಷ ರೂ. ಬೆಲೆ ಬಾಳುವ ಮಂಗಳಸೂತ್ರ ಖರೀದಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಮಂಗಳ ಸೂತ್ರದ ಜೊತೆಗೆ ಎರಡು ನೆಕ್ಲೇಸ್ ಮತ್ತು ಭಾವಿ ಪತಿಗಾಗಿ 200 ಗ್ರಾಂ.ನ ಚಿನ್ನದ ಚೈನ್ ಸಹ ಖರೀದಿ ಮಾಡಿದ್ದಾರೆ. ಮಂಗಳ ಸೂತ್ರದಲ್ಲಿ ಸ್ಪೆಷಲ್ ಡೈಮೆಂಡ್ ಸಹ ಹಾಕಲಾಗಿದೆಯಂತೆ. ಮುಂಬೈನ ಪ್ರಸಿದ್ಧ ಚಿನ್ನಾಭರಣ ಮಳಿಗೆಯಲ್ಲಿ ದೀಪಿಕಾ 1 ಕೋಟಿ ರೂ. ಶಾಪಿಂಗ್ ಮಾಡಿದ್ದಾರಂತೆ. ದೀಪಿಕಾ ಚಿನ್ನದ ಮಳಿಗೆಗೆ ಬರುವ ಮುನ್ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೀಪಿಕಾರಿಗಾಗಿಯೇ ಮಳಿಗೆಯನ್ನು ಅರ್ಧ ಗಂಟೆ ಬಂದ್ ಮಾಡಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *