ಕಮೆಂಟ್ರಿ ಹೇಳುತ್ತಿದ್ದೀರೋ ಅಥವಾ ಹಿಂದಿ ಹೇರಿಕೆ ಮಾಡುತ್ತಿದ್ದೀರೋ – ವೀಕ್ಷಕ ವಿವರಣೆಗಾರರ ವಿರುದ್ಧ ಕನ್ನಡಿಗರ ಕಿಡಿ

Public TV
1 Min Read

ಬೆಂಗಳೂರು: “ಹಿಂದಿ ನಮ್ಮ ಮಾತೃಭಾಷೆಯಾಗಿದ್ದು, ಭಾರತದಲ್ಲಿರುವ ಪ್ರತಿಯೊಬ್ಬರೂ ಹಿಂದಿ ಕಲಿಯಬೇಕು” ಎಂದು ರಣಜಿ ಪಂದ್ಯದ ಕ್ರಿಕೆಟ್ ವೇಳೆ ವೀಕ್ಷಕ ವಿವರಣೆಗಾರರು ಹೇಳಿದ್ದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ ಕ್ರಿಕೆಟ್ ಟೂರ್ನಿಯ `ಬಿ’ ಗುಂಪಿನ 9ನೇ ಪಂದ್ಯ ನಡೆಯುತ್ತಿದೆ. ಈ ವೇಳೆ ವೀಕ್ಷಕ ವಿವರಣೆಗಾರರು, ಭಾರತೀಯರು ಹಿಂದಿ ಕಲಿಯಬೇಕು. ಹಿಂದಿ ನಮ್ಮ ಮಾತೃಭಾಷೆ ಎಂದಿದ್ದಾರೆ. ಇದಕ್ಕೆ ಇನ್ನೊಬ್ಬ ವೀಕ್ಷಣೆಗಾರರು ಒಪ್ಪಿಗೆ ಸೂಚಿ, ಕೆಲ ಕ್ರಿಕೆಟಿಗರು ಹಿಂದಿಯಲ್ಲಿ ಮಾತನಾಡಬೇಕೇ ಎಂದು ಕೋಪದಿಂದ ಕೇಳುತ್ತಾರೆ. ಆದರೆ ಭಾರತದಲ್ಲಿ ನೆಲೆಸಿದ್ದಾರೆ ಎಂದಾದ ಮೇಲೆ ಹಿಂದಿಯಲ್ಲಿ ಮಾತನಾಡಲೇಬೇಕು ಎಂದು ಧ್ವನಿಗೂಡಿಸಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀವು ಕಮೆಂಟ್ರಿ ಹೇಳುತ್ತಿದ್ದೀರೋ ಅಥವಾ ಹಿಂದಿ ಹೇರಿಕೆ ಮಾಡುತ್ತಿದ್ದೀರೋ ಎಂದು ಜನ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಾವು ನೀಡಿದ ವಿವರಣೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಅಮರನಾಥ್ ಮತ್ತು ಜೋಷಿ ಕ್ಷಮೆ ಕೇಳಿದ್ದಾರೆ. ಭಾರತ ಹಲವು ಭಾಷೆಗಳ ಭೂಮಿಯಾಗಿದ್ದು, ಯಾವ ಭಾಷೆಯನ್ನು ಮಾತನಾಡಬೇಕು ಎನ್ನುವುದು ಅವರ ಆಯ್ಕೆಗೆ ಬಿಟ್ಟ ವಿಚಾರ. ಯಾರನ್ನು ನೋಯಿಸುವ ಉದ್ದೇಶ ನಮ್ಮದಲ್ಲ ಎಂದು ಅಮರನಾಥ್ ಬಳಿಕ ಲೈವ್ ನಲ್ಲಿ ಹೇಳಿ ವಿಷಯವನ್ನು ತಣ್ಣಗೆ ಮಾಡಿದ್ದಾರೆ.

ಹಿಂದಿ ರಾಷ್ಟ್ರಭಾಷೆ ಆಗಿದ್ದು ಯಾವಾಗ ಎಂದು ಪ್ರಶ್ನಿಸುತ್ತಿರುವ ಜನ, ಯಾಕೆ ಈ ರೀತಿಯ ವೀಕ್ಷಣೆ ವಿವರಣೆಗಾರರನ್ನು ನೇಮಕ ಮಾಡುತ್ತೀರಿ ಎಂದು ಪ್ರಶ್ನಿಸಿ ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *