ಲೋಕಸಭಾ ಚುನಾವಣೆ ಬಳಿಕ ‘ಸ್ಯಾಂಡಲ್‍ವುಡ್’ಗೆ ಕ್ವೀನ್ ರೀ ಎಂಟ್ರಿ!

Public TV
1 Min Read

ಬೆಂಗಳೂರು: ಸಕ್ರಿಯ ರಾಜಕಾರಣದಲ್ಲಿ ತೊಡಗಿದ ನಂತರ ಸಿನಿಮಾದಿಂದ ದೂರವೇ ಉಳಿದಿರುವ ರಮ್ಯಾ ಮತ್ತೆ ಚಿತ್ರರಂಗದ ಕಡೆ ಮನಸು ಮಾಡಿದ್ದಾರೆ.

ಪ್ರಸ್ತುತ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ರಕ್ಷಿತ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಸ್ಯಾಂಡಲ್‍ವುಡ್‍ಗೆ ರೀ ಎಂಟ್ರಿಯಾಗುವ ಕುರಿತು ಮಾತನಾಡಿದ್ದಾರೆ.

ಜೂನ್ 6ರಂದು ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಟೀಸರ್ ನೋಡಿದ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿ ಟ್ವಿಟ್ಟರ್‍ನಲ್ಲಿ ಬರೆದುಕೊಂಡು ರಕ್ಷಿತ್‍ಗೆ ಟ್ಯಾಗ್ ಮಾಡಿದ್ದರು.

ನಾನು ನಿಮ್ಮ ವಿಭಿನ್ನ ಸಿನಿಮಾಗಳನ್ನು ಇಷ್ಟಪಡುತ್ತೇನೆ. ನಿಮ್ಮ ಸಿನಿಮಾ ಪ್ರತಿಬಾರಿಯೂ ಹೊಸತನದಿಂದ ಕೂಡಿರುತ್ತದೆ. ಕನ್ನಡ ಸಿನಿಮಾಗಳಿಗೆ ನೀವು ಸರಿಯಾದ ವ್ಯಕ್ತಿ. ಹೊಸ ಹೊಸ ಸಿನಿಮಾಗಳನ್ನು ಕನ್ನಡ ಜನತೆಗೆ ನೀಡುವ ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ನಿಮ್ಮ ಸಿನಿಮಾಗೆ ಶುಭವಾಗಲಿ ಅಂತಾ ತಿಳಿಸಿದ್ದರು.

ರಮ್ಯಾ ಟ್ವೀಟ್‍ಗೆ ಪ್ರತಿಕ್ರಿಯಿಸಿದ ರಕ್ಷಿತ್ ಶೆಟ್ಟಿ, ನಮ್ಮ ಚಿತ್ರತಂಡಕ್ಕೆ ಶುಭ ಕೋರಿದ್ದಕ್ಕೆ ಧನ್ಯವಾದಗಳು. ನೀವು ಯಾವಾಗಲೂ ಸ್ಯಾಂಡಲ್‍ವುಡ್‍ನ ಕ್ವೀನ್. ಮತ್ತೆ ನಿಮ್ಮನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಇಷ್ಟಪಡುತ್ತೇವೆ ಅಂತಾ ಉತ್ತರಿಸಿದ್ದರು. ಈ ಪ್ರಶ್ನೆಗೆ ‘2019’ ಎಂದಷ್ಟೇ ಬರೆದು ರಮ್ಯಾ ಟ್ವೀಟ್ ಮಾಡಿದ್ದಾರೆ. ರಮ್ಯಾ ಅವರ ಈ ಪ್ರತಿಕ್ರಿಯೆಗೆ 2019ರ ನಂತರ ಸ್ಯಾಂಡಲ್‍ವುಡ್‍ಗೆ ಮತ್ತೆ ಎಂಟ್ರಿಯಾಗುತ್ತಾರಾ ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡು ರಮ್ಯಾ ಅಭಿಮಾನಿಗಳು ಈಗ ಚರ್ಚೆ ಮಾಡುತ್ತಿದ್ದಾರೆ.

2013ರ ಲೋಕಸಭಾ ಉಪಚಚುನಾವಣೆಯಲ್ಲಿ ಮಂಡ್ಯದಿಂದ ಗೆದ್ದಿದ್ದ ರಮ್ಯಾ 2014ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈಗ ರಾಜಕಾರಣದಲ್ಲಿ ಪವರ್ ಫುಲ್ ನಾಯಕಿಯಾಗಿ ಗುರುತಿಸಿಕೊಳ್ಳುತ್ತಿರುವ ರಮ್ಯಾ ಕೊನೆಯದಾಗಿ ‘ನಾಗರಹಾವು’ ಸಿನಿಮಾದಲ್ಲಿ ನಟಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೇ ಹೆಚ್ಚು ಸುದ್ದಿಯಲ್ಲಿರುವ ರಮ್ಯಾ ಈಗ ಅಲ್ಲಿಯೇ ಚಂದನವನಕ್ಕೆ ರೀ ಎಂಟ್ರಿ ನೀಡುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

https://twitter.com/rakshitshetty/status/1005074851902603265

Share This Article
Leave a Comment

Leave a Reply

Your email address will not be published. Required fields are marked *