ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ಕಲಬುರಗಿಯಲ್ಲೇ ಬೀಡುಬಿಟ್ಟಿರೋ NIA

Public TV
1 Min Read

ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕಫೆ ಬ್ಲಾಸ್ಟ್ (Rameshwaram Cafe Blast) ಪ್ರಕರಣದ ತನಿಖೆ ಚುರುಕುಗೊಂಡಿದೆ. ಘಟನೆ ನಡೆದು 10 ದಿನಗಳು ಕಳೆದರೂ ಆರೋಪಿಯ ಸುಳಿವು ಸಿಕ್ಕಿಲ್ಲ.

ರಾಮೇಶ್ವರಂ ಕಫೆ ಬ್ಲಾಸ್ಟ್ ಬಳಿಕ ಕಲಬುರಗಿಗೆ ಬಂದಿರುವ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕಿದ್ದರಿಂದ ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಅಧಿಕಾರಿಗಳು ಕಲಬುರಗಿಯಲ್ಲಿ ಬೀಡು ಬಿಟ್ಟಿದ್ದಾರೆ. ಶನಿವಾರದಿಂದಲೂ ಎನ್‍ಐಎ ತಂಡ ಕಲಬುರಗಿಯಲ್ಲಿ ಬಾಂಬರ್ ನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

ಕಲಬುರಗಿಯ ರಾಮ ಮಂದಿರ ಸರ್ಕಲ್ ಬಳಿ ಬಾಂಬರ್ ಬಸ್ಸಿನಿಂದ ಇಳಿದಿರುವ ಬಗ್ಗೆ ತಂಡ ಮಾಹಿತಿ ಪಡೆದಿದೆ. ಹೀಗಾಗಿ ರಾಮ ಮಂದಿರ ಸರ್ಕಲ್ ನಿಂದ ಬಾಂಬರ್ ಎಲ್ಲಿ ಹೋಗಿದ್ದಾನೆ ಅನ್ನೋ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಕಲಬುರಗಿಯ ರೋಜಾ ಪ್ರದೇಶದಲ್ಲೇ ನಿನ್ನೆ ಅಧಿಕಾರಿಗಳು ಅರ್ಧ ದಿನ ಕಳೆದಿದ್ದಾರೆ. ರೋಜಾ ಪ್ರದೇಶದ ಹಲವು ಏರಿಯಾಗಳಲ್ಲಿ ಪಿಎಫ್‍ಐ, ಎಸ್‍ಡಿಪಿಐ ಜೊತೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ತಲಾಶ್ ನಡೆಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ – ಕಲಬುರಗಿಗೆ ಆಗಮಿಸಿದ ಎನ್‌ಐಎ ತಂಡ

ಈ ಹಿಂದೆ ಎನ್‍ಐಎ ಅಧಿಕಾರಿಗಳಿಂದ ಪಿಎಫ್‍ಐ, ಎಸ್‍ಡಿಪಿಐ ಕಾರ್ಯಕರ್ತರ ಬಂಧನವಾಗಿತ್ತು. ಹೀಗಾಗಿ ಕಲಬುರಗಿಯ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ (SDPI) ಸದಸ್ಯರ ಮೇಲೆ ನಿಗಾ ಇಟ್ಟಿದ್ದಾರೆ. ಪಿಎಫ್‍ಐ ಸದಸ್ಯರ ಜೊತೆ ಸಂಪರ್ಕಕ್ಕೆ ಬಂದಿರುವ ಶಂಕೆಯ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಂದು ಕೂಡ ಕಲಬುರಗಿಯಲ್ಲೇ ಅಧಿಕಾರಿಗಳು ತನಿಖೆ ಮುಂದುವರಿಸಲಿದ್ದಾರೆ.

ಮತ್ತೆ ಫೋಟೋ ಬಿಡುಗಡೆ: ಬಾಂಬರ್‌ ಫೋಟೋಗಳನ್ನು ಶನಿವಾರ ಎನ್‌ಐಎ ಮತ್ತೆ ಬಿಡುಗಡೆ ಮಾಡಿದೆ. ರಾಮೇಶ್ವರಂ ಕಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತರನ್ನು ಗುರುತಿಸುವಲ್ಲಿ ಎನ್‌ಐಎಯು ನಾಗರಿಕರ ಸಹಕಾರವನ್ನು ಕೋರುತ್ತದೆ. ಆರೋಪಿಯ ಸುಳಿವು ಸಿಕ್ಕಲ್ಲಿ 08029510900, 8904241100 ಗೆ ಕರೆ ಮಾಡಿ ಅಥವಾ ಯಾವುದೇ ಮಾಹಿತಿಯೊಂದಿಗೆ info.blr.nia@gov.in ಗೆ ಇಮೇಲ್ ಮಾಡಿ. ನಿಮ್ಮ ಗುರುತು ಗೌಪ್ಯವಾಗಿ ಉಳಿಯುತ್ತದೆ ಎಂದು NIA ತನ್ನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

Share This Article