ಬಿಜೆಪಿ ವಿರುದ್ಧ ಬಂಡಾಯ ಏಳುವ ಪ್ರಶ್ನೆಯೇ ಇಲ್ಲ: ರಮೇಶ್ ಕತ್ತಿ

Public TV
1 Min Read

ಬೆಳಗಾವಿ: ಚಿಕ್ಕೋಡಿ ಲೋಕಸಭೆ ಚುನಾವಣೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಬಂಡಾಯ ಏಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಕತ್ತಿ ಅವರು, ಲೋಕಸಭಾ ಚುನಾವಣೆಗೆ ಎಲ್ಲೆಲ್ಲಿ ಯಾವ ರೀತಿ ಪ್ರಚಾರ ಮಾಡಬೇಕು ಎಂದು ಮಾರ್ಗದರ್ಶನ ನೀಡಲು ಸಭೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಇಲ್ಲಿಗೆ ಸಂಧಾನ ಮಾಡಲು ಬಂದಿಲ್ಲ. ಪಕ್ಷದ ಅಭ್ಯರ್ಥಿ ಗೆಲುವಿನ ಬಗ್ಗೆ ಸಿದ್ಧತೆ ಮಾಡಲು ಬಂದಿದ್ದಾರೆ ಎಂದು ತಿಳಿಸಿದರು.

ದಿನಾಂಕ ನಾಲ್ಕರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಸಂದರ್ಭದಲ್ಲಿ ಪಕ್ಷ ಏನಾದರೂ ಬದಲಾವಣೆ ಮಾಡಬಹುದು ಅಥವಾ ಅದಕ್ಕೆ ಪರಿಹಾರ ಕೊಡಬಹುದು. ಸಹೋದರ ಉಮೇಶ್ ಕತ್ತಿ ಯುಗಾದಿಗೆ ರಾಜಕೀಯದಲ್ಲಿ ಬದಲಾವಣೆಯಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧ ಎಂದು ರಮೇಶ್ ಕತ್ತಿ ಹೇಳಿದರು.

ಈಗಾಗಲೇ ನಾವು ಹೈಕಮಾಂಡಿಗೆ ಮನವಿ ಮಾಡಿದ್ದೇವೆ. ಅವರು ಮರು ಪರಿಶೀಲನೆ ಮಾಡುತ್ತಿದ್ದು, ಯಾರು ಸೂಕ್ತ ಎಂದು ಅಧ್ಯಯನ ಮಾಡಿ ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ. ನಾನು ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್ ಕೈ ತಪ್ಪಿದ್ದರಿಂದ ನಿರಾಸೆಯಾಗಿಲ್ಲ. ಕಾರ್ಯಕರ್ತರ ನೋವು ಸ್ವಾಭಾವಿಕವಾಗಿದ್ದು, ಇದನ್ನು ಬಿಜೆಪಿ ಪಕ್ಷ ಸರಿಪಡಿಸಲಿದೆ. ಪ್ರಧಾನಿ ನರೇಂದ್ರ ಮೋದಿ ನಮ್ಮ ನಾಯಕರು. ಹೀಗಾಗಿ ಬಿಜೆಪಿ ವಿರುದ್ಧ ಬಂಡಾಯ ಏಳುವ ಪ್ರಶ್ನೆಯೇ ಇಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *