ರಮೇಶ್ ಜಾರಕಿಹೊಳಿ ಮಾಡಿದ್ದ ಪ್ರತಿಜ್ಞೆಗೆ ಭಗ್ನ

Public TV
1 Min Read

ಬೆಳಗಾವಿ: ಅನರ್ಹಗೊಂಡ ಆಪರೇಷನ್ ಕಮಲದ ನಾಯಕ ರಮೇಶ್ ಜಾರಕಿಹೊಳಿ ನಾನು ಉಪಮುಖ್ಯಮಂತ್ರಿ ಆಗದೇ ಬೆಳಗಾವಿ ಜಿಲ್ಲೆಗೆ ಕಾಲಿಡಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ಬಿಜೆಪಿ ಸರ್ಕಾರದಲ್ಲಿ ನಾನು ಡಿಸಿಎಂ ಆಗೇ ಆಗುತ್ತೇನೆ. ಉಪಮುಖ್ಯಮಂತ್ರಿ ಆಗಿಯೇ ಬೆಳಗಾವಿ ಜಿಲ್ಲೆಗೆ ಕಾಲಿಡುವುದಾಗಿ ರಮೇಶ್ ಜಾರಕಿಹೊಳಿ ಆಪ್ತರ ಮುಂದೆ ಹೇಳಿ ಅತೃಪ್ತ ಶಾಸಕರ ಜೊತೆ ಮುಂಬೈ ಸೇರಿದ್ದರು. ಆದರೆ ರಮೇಶ್ ಜಾರಕಿಹೊಳಿ ಶಾಸಕತ್ವ ಇದೀಗ ಅರ್ನಹಗೊಂಡಿದೆ. ಶಾಸಕ ಸ್ಥಾನದಿಂದ ಒಮ್ಮೆ ಅರ್ನಹಗೊಂಡರೆ ಚುನಾವಣೆಯಲ್ಲಿ ಗೆದ್ದು ಬಂದ ನಂತರವಷ್ಟೇ ಸಚಿವ ಸ್ಥಾನ ಅಲಂಕರಿಸಬಹುದು. ಹೀಗಾಗಿ ರಮೇಶ್ ಜಾರಕಿಹೊಳಿ ಇದೀಗ ಏನು ಮಾಡುತ್ತಾರೆ ಅನ್ನೋದೆ ಕುತೂಹಲ ಮೂಡಿಸಿದೆ.

ಅನರ್ಹಗೊಂಡ ಶಾಸಕರಿಗೆ ಸಚಿವ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಗಳನ್ನು ಅನುಭವಿಸುವಂತಿಲ್ಲ. ಅಷ್ಟೇ ಅಲ್ಲದೆ ಡಿ.ಕೆ ಶಿವಕುಮಾರ್ ಬಳಿಯಿದ್ದ ಬೃಹತ್ ನೀರಾವರಿ ಖಾತೆ ಸಚಿವ ಸ್ಥಾನ ಸಹ ಅಲಂಕರಿಸಲು ಹಿನ್ನಡೆಯಾಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಮುಂದೇನು ಮಾಡುತ್ತಾರೆ ಅನ್ನೋದು ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಗುರುವಾರ ಸಂಜೆ ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ, ರಾಣೇಬೆನ್ನೂರು ಶಾಸಕ ಆರ್.ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮೂವರನ್ನು ಅನರ್ಹಹೊಳಿಸಿ ಅದೇಶಿಸಿದ್ದರು. ಇನ್ನುಳಿದ ರಾಜೀನಾಮೆ ನೀಡಿರುವ ಶಾಸಕರ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡುತ್ತೇನೆ. ಅನರ್ಹಗೊಂಡಿರುವ ಶಾಸಕರು 15 ವಿಧಾನಸಭೆ ಅವಧಿ ಅಂದರೆ 3 ವರ್ಷ 10 ತಿಂಗಳು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *