`ಕುಮಾರಸ್ವಾಮಿ’ ತಂಟೆಗೆ ಬಂದ್ರೆ ಅಧಿಕಾರ ಕಳ್ಕೋತೀರಿ- ಸಿಎಂಗೆ ರಂಭಾಪುರಿ ಶ್ರೀಗಳ ಎಚ್ಚರಿಕೆ

Public TV
1 Min Read

ಬಳ್ಳಾರಿ: ಸಿಎಂ ಸಿದ್ದರಾಮಯ್ಯನವರೇ ನೀವು ಕುಮಾರಸ್ವಾಮಿ ತಂಟೆಗೆ ಹೋಗಬೇಡಿ. ಕುಮಾರಸ್ವಾಮಿಯನ್ನ ಮುಟ್ಟಿದ್ರೆ ನಿಮಗೆ ಧಕ್ಕೆ ಕಟ್ಟಿಟ್ಟ ಬುತ್ತಿ. ನೀವು ದುಡ್ಡು ಮಾಡೋಕೆ ಬೇರೆ ದಾರಿ ನೋಡಿಕೊಳ್ಳಿ. ಆದ್ರೆ ಕುಮಾರಸ್ವಾಮಿ ತಂಟೆಗೆ ಹೋಗಬೇಡಿ. ಹೀಗಂತ ಸಿಎಂ ಸಿದ್ದರಾಮಯ್ಯನವರಿಗೆ ಪಂಚಪೀಠದ ಜಗದ್ಗುರು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

ಅಷ್ಟಕ್ಕೂ ಪಂಚಪೀಠದ ಜಗದ್ಗುರುಗಳು ಯಾವ ಕುಮಾರಸ್ವಾಮಿ ವಿಚಾರಕ್ಕೆ ಹೀಗೆ ಸಿಎಂಗೆ ಎಚ್ಚರಿಕೆ ನೀಡಿದ್ರು ಅನ್ನೋ ಆಶ್ಚರ್ಯ ನಿಮಗೆ ಕಾಡುತ್ತಲ್ಲ? ಇದು ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಚಾರವಲ್ಲ. ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಸಂಡೂರಿನ ಕುಮಾರಸ್ವಾಮಿ ದೇವಾಲಯದ ತಂಟೆಗೆ ಬರಬೇಡಿ ಅಂತಾ ರಂಭಾಪುರಿ ಪೀಠದ ಪೀಠಾಧ್ಯಕ್ಷರಾದ ಶ್ರೀಮದ್ದ ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಎಚ್ಚರಿಕೆ ನೀಡಿದ್ದಾರೆ. ಸಂಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯನವರಿಗೆ ಈ ರೀತಿ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

12 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಸಂಡೂರಿನ ಐತಿಹಾಸಿಕ ಕುಮಾರಸ್ವಾಮಿ ದೇವಾಲಯದ ಸುತ್ತ ಸಿಎಂ ಸಿದ್ದರಾಮಯ್ಯ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ್ದಾರೆ. ಇದು ಸರಿಯಲ್ಲ, ಹಿಂದೆ ಸುಗ್ಗಲಮ್ಮ ದೇವಾಲಯವನ್ನು ಕೆಡವಿ ಗಣಿಗಾರಿಕೆ ಮಾಡಿದಕ್ಕೆ ಮಾಜಿ ಸಚಿವ ಜನಾರ್ದನರೆಡ್ಡಿ ಅನುಭವಿಸಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ದೇವಾಲಯದ ತಂಟೆಗೆ ಸಿಎಂ ಸಿದ್ದರಾಮಯ್ಯ ಬರಬಾರದು. ಕುಮಾರಸ್ವಾಮಿ ದೇವಾಲಯದ ಉಳಿವಿಗಾಗಿ ನಡೆಯೋ ಹೋರಾಟಕ್ಕೆ ನಮ್ಮ ಬೆಂಬಲವಿದೆ ಅನ್ನೋ ಮೂಲಕ ರಂಭಾಪುರಿ ಶ್ರೀಗಳು ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *