ಜಮೀನಿಗಾಗಿ ಕಿತ್ತಾಟ – ತೋಟದ ಮನೆಗೆ ಬೆಂಕಿ

Public TV
1 Min Read

ರಾಮನಗರ: ಜಮೀನಿನ ವ್ಯಾಜ್ಯದ ವಿಚಾರವಾಗಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ತೋಟದ ಮನೆಗೆ ಬೆಂಕಿ ಹಚ್ಚಿ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ನಡೆದಿದೆ.

ಕನ್ನಮಂಗಲ ಗ್ರಾಮದ ಕಮಲಮ್ಮ ಅವರಿಗೆ ಸೇರಿದ ಮನೆಯನ್ನ ತಡ ರಾತ್ರಿ 6 ರಿಂದ 7 ಜನ ದುಷ್ಕರ್ಮಿಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಒಡೆದು ಮನೆಗೆ ಬೆಂಕಿ ಹಚ್ಚಿ ಮನೆ ಮುಂದೆ ಹಾಕಿದ್ದ ಹಂಚಿನ ಚಾವಣಿಯನ್ನು ಕೂಡ ಧ್ವಂಸ ಮಾಡಿ ಪರಾರಿಯಾಗಿದ್ದಾರೆ.

ಇದು ಮೇಲ್ನೋಟಕ್ಕೆ ದಾಯಾದಿಗಳ ಕಲಹ ಎಂದು ತಿಳಿದು ಬಂದಿದೆ. ಕಮಲಮ್ಮನ ಮಗ ಮಹೇಶ್ ಹಾಗೂ ಅವರ ಸೋದರ ಸಂಬಂಧಿ ಶಿವರಾಜ್ ಎಂಬುವವರ ನಡುವೆ ತಡರಾತ್ರಿ ಗಲಾಟೆ ನಡೆದಿತ್ತು. ಕಳೆದ ಮೂರು ದಿನಗಳ ಹಿಂದೆ ಮಹೇಶ್ ಸೋದರ ಸಂಬಂಧಿ ಶಿವರಾಜ್ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಎರಡು ಕುಟುಂಬದವರು ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಆದರೆ ತಡರಾತ್ರಿ ಹೊಸದಾಗಿ ಕಟ್ಟಿಸಿದ್ದ ತೋಟದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಗಲಾಟೆಯ ಸೇಡಿಗಾಗಿ ಶಿವರಾಜ್ ಕಡೆಯವರು ಮಹೇಶನ ಮನೆಯನ್ನ ಧ್ವಂಸ ಮಾಡಿದ್ದಾರೆ ಎಂದು ತಾಯಿ ಕಮಲಮ್ಮ ಆರೋಪಿಸುತ್ತಿದ್ದಾರೆ.

ಈ ಸಂಬಂಧ ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚನ್ನಪಟ್ಟಣ ಎಎಸ್ಪಿ ರಾಮರಾಜನ್ ಹಾಗೂ ಚನ್ನಪಟ್ಟಣ ವೃತ್ತ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಂತರ ಶಿವರಾಜ್ ಕಣ್ಮರೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *