ನಿತ್ಯಾನಂದನಿಗೆ ಬಿಗ್ ರಿಲೀಫ್, ಕೋರ್ಟ್ ವಿಚಾರಣೆಗೆ ಖುದ್ದು ಹಾಜರಾಗುವ ಅವಶ್ಯಕತೆಯಿಲ್ಲ

Public TV
1 Min Read

ರಾಮನಗರ: ದೇಶ ಬಿಟ್ಟು ಪರಾರಿಯಾಗಿರುವ ಅತ್ಯಾಚಾರ ಪ್ರಕರಣದ ಆರೋಪಿ, ಸ್ವಯಂ ಘೋಷಿತ ದೇವ ಮಾನವ ಬಿಡದಿಯ ನಿತ್ಯಾನಂದ ಧ್ಯಾನಪೀಠದ ನಿತ್ಯಾನಂದನಿಗೆ ರಾಮನಗರ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. ಈ ಮೂಲಕ ನಿತ್ಯಾನಂದ ವಿಚಾರಣೆಗೆ ಹಾಜರಾಗುವ ಅವಶ್ಯಕತೆಯಿಲ್ಲ, ಗೈರಿನಲ್ಲೇ ವಿಚಾರಣೆ ನಡೆಸುವಂತೆ ಆದೇಶಿಸಿದೆ.

ನಿತ್ಯಾನಂದನ ವಿರುದ್ಧದ ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣದ ಹಿನ್ನೆಲೆಯಲ್ಲಿ ಸೋಮವಾರ ರಾಮನಗರದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಿತು. ಈ ವೇಳೆ ನಿತ್ಯಾನಂದನ ಪರ ವಕೀಲರಾದ ಸಿ.ವಿ ನಾಗೇಶ್ ಹಾಗೂ ಪ್ರಮೀಳಾ ನೇಸರ್ಗಿ ವಾದ ಮಂಡಿಸಿದ್ದಲ್ಲದೇ ಹೈಕೋರ್ಟಿನಿಂದ ತಂದಿರುವ ಆದೇಶದ ಲಕೋಟೆಯನ್ನು ನ್ಯಾಯಾಧೀಶರಿಗೆ ನೀಡಿದರು.

ನ್ಯಾಯಾಲಯದ ವಿಚಾರಣೆಗೆ ನಿತ್ಯಾನಂದ ಖುದ್ದು ಹಾಜರಾಗುವ ಅವಶ್ಯಕತೆ ಇಲ್ಲ. ನಿತ್ಯಾನಂದನ ಗೈರು ಹಾಜರಿಯಲ್ಲಿಯೇ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟಿನ ಆದೇಶದಲ್ಲಿ ತಿಳಿಸಲಾಗಿದೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿಚಾರಣೆಗೆ ವಿನಾಯಿತಿ ನೀಡಿದ ರಾಮನಗರದ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಆದೇಶ ನೀಡಿದರು. ಈ ಮೂಲಕ ಸದ್ಯಕ್ಕೆ ನಿತ್ಯಾನಂದನಿಗೆ ಕೋರ್ಟ್ ಗೆ ಹಾಜರಾಗುವ ವಿನಾಯಿತಿ ಸಿಕ್ಕಿದೆ.

ಇನ್ನೂ ವಿಚಾರಣೆಗೆ ಗೈರಾದರೂ ವಿಚಾರಣೆ ಮುಂದುವರಿಸುವಂತೆ ಆದೇಶ ನೀಡುವುದರ ಜೊತೆಗೆ ನಾಳೆಗೆ (ಡಿಸೆಂಬರ್ 10ಕ್ಕೆ) ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *