10ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿ ದಾಳಿ- ಬಾಲಕ ಗಂಭೀರ

Public TV
1 Min Read

ರಾಮನಗರ: ಬೀದಿ ನಾಯಿಯೊಂದು 10ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ನಡೆದಿದೆ.

ಮಾಗಡಿ ಪಟ್ಟಣದ ಮಾಗಡಿ- ಗುಡೇಮಾರನಹಳ್ಳಿ ರಸ್ತೆಯಲ್ಲಿನ ಗಾಂಧಿ ಸರ್ಕಲ್ ನಲ್ಲಿ ಬೀದಿ ನಾಯಿ ದಾಳಿ ನಡೆಸಿದ್ದು ಸಿಕ್ಕ ಸಿಕ್ಕವರ ಮೇಲೆಲ್ಲ ದಾಳಿ ನಡೆಸಿದೆ. ಬೀದಿ ನಾಯಿಯ ದಾಳಿಗೆ ಸಿಕ್ಕಿ ಬೈಚಾಪುರ ಗ್ರಾಮದ ನಂಜಪ್ಪ, ನಂದ ಕಿಶೋರ್ ಹಾಗೂ ಕೇಶವ, ಗುಡ್ದಳ್ಳಿ ಗ್ರಾಮದ ರಾಜಶೇಖರ್ ಸೇರಿದಂತೆ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದ್ದು ಸಿಕ್ಕ ಸಿಕ್ಕವರ ಮುಖ, ಕೈ ಕಾಲು, ಮುಖ, ಹೊಟ್ಟೆ, ಬೆನ್ನು ಮೊದಲಾದ ಭಾಗಗಳನ್ನು ಕಚ್ಚಿ ಗಾಯಗೊಳಿಸಿದೆ.

ಗಾಂಧಿ ಸರ್ಕಲ್ ನಲ್ಲಿ ಜನರ ಮೇಲೆ ಎರಗಿ ದಾಳಿ ನಡೆಸಿ ಹಲವರಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿ ನಂತರ ಸಮೀಪದಲ್ಲಿಯೇ ಇರುವ ಸರ್ಕಾರಿ ಪಿಯು ಕಾಲೇಜಿಗೆ ನುಗ್ಗಿದೆ. ಈ ವೇಳೆ ಬೀದಿ ನಾಯಿಗೆ ಎದುರಾಗಿ ಸಿಕ್ಕ ವಿದ್ಯಾರ್ಥಿನಿ ಭೂಮಿಕಾಳ ಮೇಲೆ ದಾಳಿ ನಡೆಸಿದ್ದು, ಆಕೆಯ ಕೈ, ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯಗೊಳಿಸಿದ್ದು ಬೈಚಾಪುರದ ಐದು ವರ್ಷದ ಬಾಲಕ ನಂದ ಕಿಶೋರ್ ಗೆ ಗಂಭೀರ ಗಾಯಗಳಾಗಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ಪದೇ ಪದೇ ನಾಯಿ ದಾಳಿಗಳು ನಡೆಯುತ್ತಿದ್ದರೂ, ಯಾವುದೇ ಕ್ರಮಗಳನ್ನು ಮಾತ್ರ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *