ಬೊಂಬೆನಾಡಿನಲ್ಲಿ ಅದ್ಧೂರಿಯಾಗಿ ನಡೆಯಿತು ಮಂಗಗಳ ತಿಥಿ

Public TV
1 Min Read

ರಾಮನಗರ: ನವೆಂಬರ್ 4ರಂದು ಪೇಟೆಯ ಬಳಿ ಮನೆಯ ಮೇಲಿದ್ದ ವಿದ್ಯುತ್ ತಂತಿಯನ್ನ ಸ್ಪರ್ಶಿಸಿ ಆರು ಕೋತಿಗಳು ಸಾವನ್ನಪ್ಪಿದ್ದವು. ಅಂದು ಮೃತಪಟ್ಟಿದ್ದ ಕೋತಿಗಳ ತಿಥಿ ಕಾರ್ಯವನ್ನು ಮನುಷ್ಯರ ತಿಥಿಗಿಂತ ಅದ್ಧೂರಿಯಾಗಿ ಗ್ರಾಮದ ಜನರು ಮಾಡಿದ್ದಾರೆ.

ಸಾಮೂಹಿಕವಾಗಿ ಅಂತ್ಯ ಸಂಸ್ಕಾರವಾಗಿದ್ದ ಮಂಗಗಳಿಗಾಗಿ ಸ್ಥಳೀಯರೊಬ್ಬರು ಕೇಶ ಮುಂಡನ ಮಾಡಿಸಿಕೊಂಡು ತಿಥಿ ಕಾರ್ಯವನ್ನು ನೆರವೇರಿಸಿದ್ದಾರೆ. ಸಮಾಧಿ ಮೇಲೆ ನಾನಾ ಬಗೆಯ ತಿಂಡಿ ತಿನಿಸುಗಳನ್ನು ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ಜನರಿಗೆ ಪಲಾವ್, ಮೊಸರು ಅನ್ನವನ್ನು ಬಡಿಸಿ ಶ್ರಧ್ಧಾಭಕ್ತಿಯಿಂದ ಕಾರ್ಯವನ್ನು ನೆರವೇರಿಸಿದ್ದಾರೆ.

ಕಳೆದ 4 ನೇ ತಾರೀಕು ಮಂಗಳವಾರ ಪೇಟೆಯ ಬಳಿ ಮನೆಯ ಮೇಲಿದ್ದ ವಿದ್ಯುತ್ ತಂತಿಯನ್ನ ಸ್ಪರ್ಶಿಸಿ ನಾಲ್ಕು ಕೋತಿಗಳು ನರಳಾಡುತ್ತಿದ್ದವು. ಈ ವೇಳೆ ಮತ್ತೆರೆಡು ಕೋತಿಗಳು ಪ್ರಾಣಾಪಾಯದಲ್ಲಿದ್ದ ಕೋತಿಗಳ ರಕ್ಷಿಸಲು ಹೋಗಿ 6 ಕೋತಿಗಳು ಸಹ ಸಾವನ್ನಪ್ಪಿದ್ದವು. ನಾವು ಎಲ್ಲಾ ಕೋತಿಗಳ ಅಂತ್ಯ ಸಂಸ್ಕಾರವನ್ನ ನೆರವೇರಿಸಿದ್ದೆವು. ಇಂದು ಕೋತಿಗಳಿಗೆ ಇಷ್ಟವಾಗಿದ್ದ ಪಧಾರ್ಥಗಳನ್ನು ಎಡೆಯಿಟ್ಟು, ತಿಥಿ ಕಾರ್ಯದಲ್ಲಿ ಪಾಲ್ಗೊಂಡಿದ್ದವರಿಗೆ ಅನ್ನದಾನ ಮಾಡಿದ್ದೇವೆ ಎಂದು ಸ್ಥಳೀಯ ಅಶೋಕ್ ಹೇಳಿದ್ದಾರೆ.

ಮಂಗಗಳ ಸಾವು ಕಂಡು ಮರುಗಿದ ಗ್ರಾಮಸ್ಥರು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಿದ್ದರು. ಮನುಷ್ಯರ ತಿಥಿಯಂತೆ ಪುರೋಹಿತರ ಮೂಲಕ ಪ್ರಾರ್ಥನೆ ಸಲ್ಲಿಸಿ ಮಂಗಗಳಿಗೆ ಇಷ್ಟವಾದ ರಸಾಯನ, ಪಂಚಾಮೃತ, ಕಡಲೇಕಾಯಿ, ಕಡ್ಲೆಪುರಿ, ಬಗೆ ಬಗೆಯ ಹಣ್ಣುಗಳು, ವಿವಿಧ ಸ್ವೀಟ್‍ಗಳು, ಅಲ್ಲದೆ ರೈಸ್‍ಬಾತ್, ಮೊಸರನ್ನ ಇನ್ನು ಅನೇಕ ತಿಂಡಿಗಳನ್ನು ಸಮಾಧಿಯ ಮೇಲೆ ನೈವೇದ್ಯವಾಗಿಟ್ಟು ತಿಥಿ ಮಾಡಿದ್ದೇವೆ. ಇನ್ನೂ ಮಂಗಗಳಿಗಾಗಿ ಮಿಡಿದ ಸೋಮು ಎಂಬವರು ಕೇಶಮುಂಡನ ಸಹ ಮಾಡಿಸಿಕೊಂಡಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದರು.

ಇಂದು ಯಾರೋ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದರೆ. ಆತನ ಅಂತ್ಯಸಂಸ್ಕಾರ ನೆರವೇರಿಸೋಕೆ ಜನ ಮುಂದಾಗೋದಿಲ್ಲ. ಅಂತಹದರಲ್ಲಿ ಮೂಕಪ್ರಾಣಿಗಳಾದ ಮಂಗಗಳ ಸಾವಿಗೆ ಮಿಡಿದ ಜನ ಅಂತ್ಯಸಂಸ್ಕಾರ ನಡೆಸಿ ತಿಥಿಯನ್ನು ಕೂಡಾ ಮಾಡಿದ್ದಾರೆ. ಅಲ್ಲದೇ ಸಮಾಧಿ ಸ್ಥಳದಲ್ಲಿ ದೇಗುಲವೊಂದನ್ನು ನಿರ್ಮಿಸೋಕು ಸಹ ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *