ಸೇತುಸಮುದ್ರಂ ಯೋಜನೆಗಾಗಿ ರಾಮಸೇತುವೆಗೆ ಯಾವುದೇ ಹಾನಿ ಮಾಡಲ್ಲ- ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿಕೆ

Public TV
1 Min Read

ನವದೆಹಲಿ: ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯ ನಿರ್ಮಾಣಕ್ಕಾಗಿ ರಾಮ ಸೇತುವೆಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶುಕ್ರವಾರದಂದು ಸುಪ್ರೀಂ ಕೋರ್ಟ್‍ಗೆ ಹೇಳಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಿರೋ ಕೇಂದ್ರ ಸರ್ಕಾರ, ರಾಷ್ಟ್ರದ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ರಾಮಸೇತುವೆಯನ್ನ ಮುಟ್ಟುವುದಿಲ್ಲ ಎಂದು ತಿಳಿಸಿದೆ.

ಮುಖ್ಯನ್ಯಾಯಾಧೀಶರಾದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಕೇಂದ್ರ ಹಡಗು ಸಚಿವಾಲಯ ಅಫಿಡವಿಟ್ ಸಲ್ಲಿಸಿದ್ದು, ಕೇಂದ್ರದ ನಿಲುವನ್ನ ಪರಿಗಣಿಸಿ, ಸೇತುಸಮುದ್ರಂ ಯೋಜನೆಯ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಈಗ ವಿಲೇವಾರಿ ಮಾಡಬಹುದು ಎಂದು ಹೇಳಿದೆ.

ಸೇತುಸಮುದ್ರಂ ಯೋಜನೆಗಾಗಿ ಮೊದಲು ಹೇಳಲಾಗಿದ್ದ ಮಾರ್ಗಕ್ಕೆ ಪರ್ಯಾಯವನ್ನ ಕಂಡುಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ರಾಷ್ಟ್ರದ ಹಿತದೃಷ್ಟಿಯಿಂದ ರಾಮಸೇತುವೆಗೆ ಯಾವುದೇ ಹಾನಿ ಮಾಡದಂತೆ ಯೋಜನೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗುತ್ತದೆ ಎಂದು ಅಫಿಡವಿಟ್‍ನಲ್ಲಿ ತಿಳಿಸಿದೆ.

ಕೇಂದ್ರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, ಹಿಂದಿನ ಮಾರ್ಗಗಳಿಗೆ ಅನುಗುಣವಾಗಿ ಕೇಂದ್ರ ತನ್ನ ಪ್ರತಿಕ್ರಿಯೆ ನೀಡಿದೆ. ಈಗ ಅರ್ಜಿಯನ್ನ ವಿಲೇವಾರಿ ಮಾಡಬಹುದು ಎಂದು ಕೋರ್ಟ್ ಗೆ ತಿಳಿಸಿದರು.

ಸೇತುಸಮುದ್ರಂ ಯೋಜನೆಯ ವಿರುದ್ಧ ಅರ್ಜಿ ಸಲ್ಲಿಸಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ಯೋಜನೆಗಾಗಿ ರಾಮಸೇತುಗೆ ಹಾನಿ ಮಾಡದಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು.

ಈ ಹಿಂದೆ ಕೇಂದ್ರ ಹಡಗು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾತನಾಡಿ, ಕಾಲುವೆ ಯೋಜನೆ ನಿರ್ಮಾಣಕ್ಕಾಗಿ ಯಾವುದೇ ಕಾರಣಕ್ಕೂ ರಾಮಸೇತುವೆಯನ್ನ ಒಡೆದು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಜನರ ಭಾವನೆಗಳನ್ನ ನಾವು ಗೌರವಿಸುತ್ತೇವೆ. ಯಾವುದೇ ಕಾರಣಕ್ಕೂ ರಾಮಸೇತುವೆಯನ್ನ ಒಡೆಯುವುದಿಲ್ಲ ಎಂದು ಎಕಾನಾಮಿಕ್ ಎಡಿಟರ್ಸ್ ಕಾನ್ಫರೆನ್ಸ್ ನಲ್ಲಿ ಗಡ್ಕರಿ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *