ರಾಮನವಮಿ | ಅಯೋಧ್ಯೆ ಬಾಲರಾಮನ ಹಣೆಯ ಮೇಲೆ ಮೂಡಿದ ʻಸೂರ್ಯ ತಿಲಕʼ

1 Min Read

ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ರಾಮನವಮಿ (Ram Navami) ಸಂಭ್ರಮ ಮನೆ ಮಾಡಿದೆ. ಈ ಶುಭ ಸಂದರ್ಭದಲ್ಲಿ ಬಾಲರಾಮನ ಹಣೆಯ ಮೇಲೆ ಸೂರ್ಯ ತಿಲಕ ಮೂಡಿದೆ.

ಸೂರ್ಯ ರಶ್ಮಿಯು (Surya Tilak) ನೇರವಾಗಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬಿದ್ದ ದಿವ್ಯ ದೃಶ್ಯ ಕಂಡುಬಂದಿದೆ. ನಿಖರವಾಗಿ ಮಧ್ಯಾಹ್ನ 12 ಗಂಟೆಗೆ ಬಾಲ ರಾಮನ ಮೂರ್ತಿಯ ಹಣೆಯ ಮೇಲೆ ಬಿದ್ದ ಸೂರ್ಯನ ಕಿರಣ, ದಿವ್ಯ ತಿಲಕ ರೂಪಿಸಿತು. ಈ ತಿಲಕವು ಮೂರ್ತಿಯ ಮೇಲೆ ಸುಮಾರು 3 ರಿಂದ 4 ನಿಮಿಷಗಳ ಕಾಲ ಕಂಡುಬಂದಿತು. ಈ ವಿಸ್ಮಯವನ್ನು ಶ್ರೀರಾಮನ ಭಕ್ತರು ಕಣ್ತುಂಬಿಕೊಂಡರು. ಈ ಸೂರ್ಯ ರಶ್ಮಿಯು ದೇವರ ಹಣೆಯನ್ನು ಬೆಳಗಿಸಿ, ಆಚರಣೆಗಳಿಗೆ ಆಧ್ಯಾತ್ಮಿಕ ಹೊಳಪನ್ನು ನೀಡಿತು.

2 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ
ಇನ್ನೂ ರಾಮನವಮಿ ಸಂಭ್ರಮದ ಹಿನ್ನೆಲೆ ದೇಶಾದ ವಿವಿಧೆಡೆಯಿಂದ ಶ್ರೀರಾಮನ ಭಕ್ತರು ಅಯೋಧ್ಯೆಗೆ ಬರಲಾರಂಭಿಸಿದ್ದಾರೆ. ತಡರಾತ್ರಿ 2 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದಾರೆ. ಇಂದು ಸಹ ರಾತ್ರಿ 10 ಗಂಟೆವರೆಗೆ ಬಾಲ ರಾಮನ ದರ್ಶನಕ್ಕೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ..

ದೇಶಾದ್ಯಂತ ರಾಮನವಮಿಯನ್ನ ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಇದು ವಿಷ್ಣುವಿನ 7ನೇ ಅವತಾರವಾದ ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವದ ದಿನ. ಜನರು ದೇವಾಲಯಗಳಿಗೆ ತೆರಳಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲಲ್ಲಿ ಭಜನೆಗಳು, ಮೆರವಣಿಗೆಗಳು ಮತ್ತು ಜಪಗಳು ನಡೆಯುತ್ತಿವೆ. ದೃಕ್ ಪಂಚಾಂಗದ ಪ್ರಕಾರ, ಭಗವಾನ್ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ್ದ.

Share This Article