ಧೂಮಪಾನ ಬಿಡುವಂತೆ ಕುಂಭಮೇಳದಲ್ಲಿ ಸಾಧುಗಳ ಕಾಲು ಮುಟ್ಟಿ ಬೇಡಿಕೊಂಡ ಬಾಬಾ ರಾಮ್‍ದೇವ್

Public TV
1 Min Read

ಲಕ್ನೋ: ಪ್ರಯಾಗ್ ಕುಂಭ ಮೇಳದಲ್ಲಿ ಸೇರಿರುವ ಅನೇಕ ಸಾಧು ಹಾಗೂ ಭಕ್ತರ ಬಳಿಗೆ ಹೋಗಿ ಧೂಮಪಾನ ಬಿಡುವಂತೆ ಯೋಗ ಗುರು ಬಾಬಾ ರಾಮ್‍ದೇವ್ ಮನವಿ ಮಾಡಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ.

ಶ್ರೀರಾಮ ಹಾಗೂ ಕೃಷ್ಣ ತಂಬಾಕು ಸೇವನೆ ಮಾಡುತ್ತಿರಲಿಲ್ಲ. ಅವರನ್ನು ಪೂಜಿಸುವ ನಾವು ತಂಬಾಕು ಸೇವನೆ ಹಾಗೂ ಧೂಮಪಾನ ಮಾಡುವುದು ಎಷ್ಟು ಸರಿ? ನಾವೆಲ್ಲರೂ ಧೂಮಪಾನ ಬಿಟ್ಟುಬಿಡೋಣ ಎಂದು ಬಾಬಾ ರಾಮ್‍ದೇವ್ ಸಾಧುಗಳಿಗೆ ಮನವರಿಕೆ ಮಾಡುತ್ತಿದ್ದಾರೆ.

ಸಾಧುಗಳಾದ ನಾವು ಮನೆ, ಕುಟುಂಬ ಸೇರಿದಂತೆ ಎಲ್ಲವನ್ನೂ ಬಿಟ್ಟಿದ್ದೇವೆ. ಇದಕ್ಕಿಂತ ಮಿಗಿಲಾಗಿ ನಮ್ಮ ತಂದೆ ಹಾಗೂ ತಾಯಿಯನ್ನು ಬಿಟ್ಟು ಬಂದಿದ್ದೇವೆ. ಆದರೆ ನಮ್ಮಿಂದ ಯಾಕೆ ಧೂಮಪಾನ ಬೀಡಲು ಆಗುತ್ತಿಲ್ಲ ಎಂದು ಪ್ರಶ್ನಿಸಿ, ಸಾಧುಗಳ ಕಾಲು ಮುಟ್ಟಿ ಧೂಮಪಾನ ಮಾಡದಂತೆ ಬಾಬಾ ರಾಮ್‍ದೇವ್ ಮನವಿ ಮಾಡಿಕೊಂಡಿದ್ದಾರೆ.

https://twitter.com/yogrishiramdev/status/1090858740046315520

ಬಾಬಾ ರಾಮ್‍ದೇವ್ ಅವರು ಅನೇಕ ಸಾಧುಗಳ ಬಳಿ ಇದ್ದ ಚಿಲ್ಮಿ (ತಂಬಾಕು ಸೇವನೆ ಕೊಳವೆ) ಪಡೆದಿದ್ದಾರೆ. ಈ ಮೂಲಕ ಅವುಗಳನ್ನು ತಮ್ಮ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಡುತ್ತೇನೆ. ನೀವು ತಂಬಾಕು ಸೇವನೆಯನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.

ಧೂಮಪಾನ ಹಾಗೂ ತಂಬಾಕು ಸೇವನೆಯನ್ನು ಬಿಡುವಂತೆ ಯುವಕರಿಗೆ ಸಲಹೆ ನೀಡುತ್ತಿರುವೆ. ಹೀಗಾಗಿ ಮಹಾತ್ಮರಿಗೂ ಈ ಕುರಿತು ಮನವರಿಕೆ ಮಾಡಿಕೊಡುತ್ತಿರುವೆ ಎಂದು ಬಾಬಾ ರಾಮ್‍ದೇವ್ ತಿಳಿಸಿದ್ದಾರೆ.

ಒಟ್ಟು 55 ದಿನಗಳ ಕಾಲ ನಡೆಯುವ ಕುಂಭ ಮೇಳವು ಮಾರ್ಚ್ 4ರಂದು ಮುಕ್ತಾಯವಾಗಲಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಜನರು ಸೇರುವ ಮೇಳ ಇದಾಗಿದೆ. ಸಾಧು, ಸಂತರು ಹಾಗೂ ಭಕ್ತರು ಸೇರಿದಂತೆ ಸುಮಾರು 13 ಕೋಟಿ ಜನರು ಪ್ರಯಾಗ್ ಕುಂಭ ಮೇಳದಲ್ಲಿ ಸೇರುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *