ಕಾಡಿನಲ್ಲೇ ತನ್ನ ಆಯಸ್ಸು ಕಳೆದ 90ರ ವೃದ್ಧನಿಗೆ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ

Public TV
2 Min Read

– ವೃದ್ಧನನ್ನು ಭೇಟಿಯಾಗಿದ್ದ ಪುನೀತ್ ರಾಜ್ ಕುಮಾರ್

ಕಾರವಾರ: ಕರ್ನಾಟಕ ಸರ್ಕಾರ 66 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ದಟ್ಟ ಅಡವಿಯಲ್ಲಿ ವಾಸಮಾಡುವ 90 ವರ್ಷದ ವೃದ್ಧರೊಬ್ಬರಿಗೆ ಪ್ರಶಸ್ತಿ ಘೋಷಿಸಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಉ.ಕನ್ನಡ ಜಿಲ್ಲೆಯ ಅತೀ ಹಿಂದುಳಿದ ಪ್ರದೇಶವಾದ ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯಿತಿಯ ಕಾರ್ಟೋಳಿ ಗ್ರಾಮದವರಾದ ಮಾದೇವ ವೇಳಿಪ ಜನಪದ ಕಲಾವಿದರು. ಜೊತೆಗೆ ನಾಟಿ ವೈದ್ಯರು ಸಹ. ಅತೀ ಹಿಂದುಳಿದ ಕುಣಜಿ ಬುಡಕಟ್ಟು ಸಮುದಾಯದ ಇವರು ಹುಟ್ಟಿದಾಗಿನಿಂದ ಕಾಡಿನೊಂದಿಗೆ ಬೆರೆತು ಅಲ್ಲಿನ ಪ್ರತಿ ಸಸ್ಯಗಳ ಬಗ್ಗೆ ಮಾಹಿತಿಯನ್ನು ತನ್ನ ಪುಸ್ತಕದಲ್ಲಿ ಅಚ್ಚಾಗಿಸಿಕೊಂಡವರು. ಇದನ್ನೂ ಓದಿ: ಯುವರತ್ನನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಅಮೂಲ್

ಹಸಿರಿನೊಂದಿಗೆ ಜೀವನ ಕಟ್ಟಿಕೊಂಡ ಇವರು ಇಲ್ಲಿನ ಪರಿಸರ ಉಳಿಸಲು ತನ್ನದೇ ಆದ ಕಾಣಿಕೆ ನೀಡಿದ್ದಾರೆ. ಸ್ಥಳೀಯ ಜನರಿಗೆ ಕಾಡಿನ ಬಗ್ಗೆ ಮಹತ್ವ ಸಾರಲು ಜನಪದ ಹಾಡುಗಳನ್ನು ಕಟ್ಟಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಇಲ್ಲಿನ ಸಸ್ಯಗಳು, ಕಾಡಿನಲ್ಲಿ ಇರುವ ಉಂಬಳ, ಪಕ್ಷಿ, ಪ್ರಾಣಿಗಳ ಸಂರಕ್ಷಣೆಗೆ ಪಣತೊಟ್ಟ ಇವರು ಊರಿನಲ್ಲಿ ಜಾಗೃತಿ ಮೂಡಿಸುತ್ತಾ ತನ್ನ ಇಡೀ ಜೀವನವನ್ನು ಇಲ್ಲಿ ಕಳೆದಿದ್ದಾರೆ.

ತನ್ನೂರಿನಲ್ಲಿ ಸಿಗುವ ಅಪರೂಪದ ಹತ್ತಕ್ಕೂ ಹೆಚ್ಚು ಅಪರೂಪದ ಗೆಡ್ಡೆ, ಗೆಣಸುಗಳನ್ನು ಸಂರಕ್ಷಿಸಿ ಬೆಳಸಿ ಇದರ ಮಹತ್ವವನ್ನು ದೇಶ ವಿದೇಶಕ್ಕೆ ತಲುಪಿಸುವಲ್ಲಿ ಇವರ ಕಾಣಿಕೆ ಇದೆ. ಎಂದೂ ಕೂಡ ಪ್ರಚಾರವನ್ನು ಬಯಸದೇ ತನ್ನ ಜೀವಮಾನದ 90 ವರ್ಷಗಳನ್ನು ಕಾಡಿನೊಂದಿಗೆ ಬೆರೆತು ಕಳೆದಿದ್ದಾರೆ. ಈ ಇಳೆ ವಯಸ್ಸಿನಲ್ಲಿಯೂ ಇವರ ಪರಿಸರ ಕಾಳಜಿಯನ್ನು ನೋಡಿ ಈ ಹಿಂದೆ ಖುದ್ದು ದಿವಂಗತ ಪುನೀತ್ ರಾಜ್ ಕುಮಾರ್ ಸಹ ಇವರನ್ನು ಭೇಟಿ ಮಾಡಿ ಹೋಗಿದ್ದರು.

ಮಾದೇವ ಅವರ ಜನಪದ ಸೇವೆಗಾಗಿ ನಾಲ್ಕು ವರ್ಷದ ಹಿಂದೆ ಜನಪದ ಪ್ರಶಸ್ತಿ ಸಹ ಲಭಿಸಿತ್ತು. ಇವರಿಗೆ 3 ಗಂಡು ಮತ್ತು 4 ಹೆಣ್ಣು ಮಕ್ಕಳು, ಪತ್ನಿ ಪಾರ್ವತಿ ವೇಳಿಪ 10 ವರ್ಷದ ಹಿಂದೆ ತೀರಿಕೊಂಡಿದ್ದಾರೆ. ಇದನ್ನೂ ಓದಿ: ರೈಲಿಗೆ ಬೆಂಕಿ, ಗುಂಡಿನ ದಾಳಿ – 8 ಜನರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ

ಪ್ರಶಸ್ತಿ ಸನ್ಮಾನಗಳಿಗೆ ಇಂದಿನ ದಿನದಲ್ಲಿ ಲಾಬಿ ಮಾಡುವಾಗ, ಯಾವುದೇ ಲಾಬಿ ಇಲ್ಲದೇ ತಳಮಟ್ಟದಲ್ಲಿ ಸಾಧನೆಮಾಡಿದ ಜನರನ್ನು ಗುರುತಿಸಿರುವುದು ನಿಜವಾಗಿಯೂ ಶ್ಲಾಘನೀಯ.

ಈ ಬಾರಿ ಸೇವಾ ಸಿಂಧು ಮೂಲಕ ಸಾರ್ವಜನಿಕರು ಮಾಡಿದ ಶಿಫಾರಸನ್ನು ಪರಿಗಣಿಸಿ ಹಾಗೂ ಎಲೆ ಮರದ ಕಾಯಿಯಂತೆ ಸೇವೆ ಸಲ್ಲಿಸಿದ ಮಹನೀಯರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ

Share This Article
Leave a Comment

Leave a Reply

Your email address will not be published. Required fields are marked *