ರಾಜ್ಯಸಭೆ ಟಿಕೆಟ್‍ಗೆ ಪೈಪೋಟಿ – ಅಂತಿಮವಾಗದ ಪಟ್ಟಿ

Public TV
2 Min Read

ಬೆಂಗಳೂರು: ರಾಜ್ಯಸಭೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಯಾವುದೇ ರಾಜಕೀಯ ಪಕ್ಷಗಳು ಅಂತಿಮಗೊಳಿಸಿಲ್ಲ. ಅಭ್ಯರ್ಥಿಗಳ ಆಯ್ಕೆ ಎಲ್ಲ ರಾಜಕೀಯ ಪಕ್ಷಗಳಿಗೂ ತಲೆನೋವಾಗಿದೆ. ಎಲ್ಲ ಪಕ್ಷಗಳೂ ಹಲವು ಸುತ್ತಿನ ಸಮಾಲೋಚನೆ ನಡೆಸಿದರೂ ಇನ್ನೂ ಒಮ್ಮತ ಮೂಡಿಲ್ಲ ಎನ್ನಲಾಗಿದೆ.

ಟಿಕೆಟ್ ಗಾಗಿ ಹಲವು ಪ್ರಮುಖರು ತೀವ್ರ ಪೈಪೋಟಿ ನಡೆಸುತ್ತಿರುವುದೇ ಪಟ್ಟಿ ವಿಳಂಬಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಗೆ ಅವಕಾಶ ಇರುವ ಒಂದು ಸ್ಥಾನಕ್ಕೆ ಹಾಲಿ ಸದಸ್ಯ ಜೈರಾಂ ರಮೇಶ್ ಅವರನ್ನೇ ಮತ್ತೆ ಕಣಕ್ಕಿಳಿಸಲು ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ. ಆದರೆ ಬಹುತೇಕ ರಾಜ್ಯ ನಾಯಕರಿಗೆ ಇದು ಅಸಮಾಧಾನ ತಂದಿದೆ. ಈ ಬಗ್ಗೆ ವರಿಷ್ಠರು ಭಾನುವಾರ ಅಂತಿಮ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.

ಇಂದು ಅಥವಾ ನಾಳೆ ಬಿಜೆಪಿ ವರಿಷ್ಠರ ಮಹತ್ವದ ಸಮಾಲೋಚನಾ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ. ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಗೆಲ್ಲಬಹುದಾಗಿದ್ದು, ಕಣಕ್ಕಿಳಿಯುವ ಇಬ್ಬರು ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದೆ. ಹಾಲಿ ಸದಸ್ಯೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಡಜನ್ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ವರಿಷ್ಠರಿಗೆ ರವಾನಿಸಿದೆ. ಮತ್ತೋರ್ವ ಹಾಲಿ ಸದಸ್ಯ ಕೆ.ಸಿ ರಾಮಮೂರ್ತಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಸುರಾನಾ, ಮಾಜಿ ಶಾಸಕ ಲೆಹರ್ ಸಿಂಗ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಉದ್ಯಮಿ ಪ್ರಕಾಶ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಆಕಾಂಕ್ಷಿತರ ಪಟ್ಟಿಯಲ್ಲಿದ್ದಾರೆ.

nirmala sithraman

 

ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತಾಗಿಯೂ ರಾಷ್ಟ್ರೀಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ಮೂರನೇ ಅಭ್ಯರ್ಥಿಯ ಆಯ್ಕೆಗೆ 15 ಶಾಸಕರ ಕೊರತೆಯಿದ್ದು, ಅದು ಕೈಗೂಡುವುದಾದರೆ ಮಾತ್ರ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಇಲ್ಲದಿದ್ದರೆ ಪ್ರತಿಪಕ್ಷಗಳ ಹೆಚ್ಚುವರಿ ಮತ ಕೀಳಬಲ್ಲ ತಟಸ್ಥ ಅಭ್ಯರ್ಥಿಯೊಬ್ಬರನ್ನು ಮುಂದೆ ಬಿಟ್ಟು ಗೆಲ್ಲಿಸುವ ತಂತ್ರಗಾರಿಯೂ ಬಿಜೆಪಿಯದ್ದಾಗಿದೆ. ಈ ಸಂಬಂದ ಕೆಲವು ಬಿಜೆಪಿ ನಾಯಕರು ಜೆಡಿಎಸ್ ಪ್ರಮುಖರ ಜೊತೆಗೆ ತೆರೆಮರೆಯಲ್ಲಿ ಸಂಪರ್ಕ ನಡೆಸಿ ಒಪ್ಪಂದ ನಡೆಸುವ ಪ್ರಯತ್ನ ನಡೆಸಿದ್ದಾರೆ. ಮಾತುಕತೆ ಯಶಸ್ವಿಯಾದರೆ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಈ ನಡುವೆ ವಿಧಾನಪರಿಷತ್ ಟಿಕೆಟ್ ವಂಚಿತರಿಗೆ ಅವಕಾಶ ನೀಡುವುದೋ ಅಥವಾ ಪಕ್ಷ ನಿಷ್ಠ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದೋ ಎನ್ನುವ ಬಗ್ಗೆ ಬಿಜೆಪಿ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಪರಿಷತ್ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಕೈ ಮೇಲಾಗಿದ್ದು, ಇದರಲ್ಲೂ ಅವರದ್ದೇ ಮಾತು ನಡೆಯುತ್ತಾ ಅನ್ನುವುದನ್ನು ನೋಡಬೇಕಿದೆ.

ಈಗಾಗಲೇ ಮಗನಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಏನಾದ್ರೂ ಆಗುತ್ತಾ ಅನ್ನುವುದನ್ನು ಕಾದು ನೋಡಬೇಕು. ಯಡಿಯೂರಪ್ಪ ಮುನಿಸು ಇನ್ನೂ ತಣ್ಣಗಾಗಿಲ್ಲ, ಪದವೀಧರ-ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಪ್ರಚಾರಕ್ಕೆ ಹೋಗಲು ಅವರು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಜೂನ್ 10 ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಮೇ 24 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನ. ಸೋಮವಾರದೊಳಗೆ ಎಲ್ಲ ಪಕ್ಷಗಳು ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *