ಹೊಸ ಸರ್ಕಾರಕ್ಕೆ ಮಣೆ ಹಾಕುತ್ತಾ ರಾಜಸ್ಥಾನ?

Public TV
2 Min Read

-ರಾಜಸ್ಥಾನದಲ್ಲಿ ಯಾರಿಗೆ ಪ್ಲಸ್? ಯಾರಿಗೆ ಮೈನಸ್?

ರಾಜಸ್ಥಾನ: ಪ್ರತೀ ಬಾರಿಯ ಚುನಾವಣೆಯಲ್ಲೂ ಹೊಸ ಸರ್ಕಾರಕ್ಕೆ ಮಣೆ ಹಾಕುವ ಸೂಕ್ಷ್ಮ ಮತದಾರರಿರುವ ರಾಜ್ಯ ರಾಜಸ್ಥಾನ. ಸದ್ಯ ಅಧಿಕಾರ ನಡೆಸುತ್ತಿರುವ ಬಿಜೆಪಿ, ಆಡಳಿತ ವಿರೋಧಿ ಅಲೆಯಿಂದ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದೆ.

2013ರ ಚುನಾವಣೆಯಲ್ಲಿ ಬಿಜೆಪಿ 163 ಸೀಟು ತನ್ನದಾಗಿಸಿಕೊಂಡು ಭರ್ಜರಿಯಾಗಿ ಅಧಿಕಾರ ಹಿಡಿದಿತ್ತು. ಆದರೆ ಈಗ ಈ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಬಿಜೆಪಿ ಗೆಲುವು ಕಷ್ಟಕರವಾಗಿದೆ. ಹಾಲಿ ಸಿಎಂ ವಸುಂಧರಾ ರಾಜೆ ಅರಸ್ ಜಲ್‍ರಾಪಟನ್ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಮಹತ್ವ ಪಡೆದುಕೊಂಡಿದೆ. ಜೊತೆಗೆ ತಮ್ಮ 5 ವರ್ಷದ ಆಡಳಿತವೂ ಅಗ್ನಿಪರೀಕ್ಷೆಗೆ ಒಳಪಟ್ಟಿದೆ.

ಇನ್ನು ಕಾಂಗ್ರೆಸ್ಸಿನ ಪ್ರಬಲ ಅಭ್ಯರ್ಥಿ 2 ಬಾರಿ ಸಿಎಂ ಆಗಿರುವ ಅಶೋಕ್ ಗೆಹ್ಲೋಟ್ ಸರ್ದಾರ್‍ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಬ್ಬ ಯುವ ನಾಯಕ ಸಚಿನ್ ಪೈಲಟ್, ಅಜ್ಮೀರ್ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದು, ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅಜ್ಮೀರ್ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಹಿಂದೂ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಿದೆ. ಇದೇ ಮೊದಲ ಬಾರಿಗೆ ಅಜ್ಮೀರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಯೂನುಸ್ ಖಾನ್ ಕಣಕ್ಕಿಳಿಯುವ ಮೂಲಕ ರಾಜಸ್ಥಾನದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ ಒಟ್ಟು 200 ಸ್ಥಾನಗಳಿದ್ದು, 101 ಬಹುಮತಬೇಕಾಗಿದೆ. 2013ರ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 163, ಕಾಂಗ್ರೆಸ್ 21, ಬಿಎಸ್‍ಪಿ 03 ಹಾಗೂ ಇತರೆ 13 ಸ್ಥಾನಗಳನ್ನು ಪಡೆದುಕೊಂಡಿದ್ದವು. ಇನ್ನೂ 2013ರ ಚುನಾವಣೆಯ ಮತಗಳಿಕೆಯಲ್ಲಿ ಬಿಜೆಪಿ 45.17, ಕಾಂಗ್ರೆಸ್ 33.07, ಬಿಎಸ್‍ಪಿ 3.48 ಮತ್ತು ಇತರೆ 18.28 ಮತಗಳನ್ನು ಗಳಿಸಿತ್ತು.

* ರಾಜಸ್ಥಾನದಲ್ಲಿ ಯಾರಿಗೆ ಪ್ಲಸ್? ಯಾರಿಗೆ ಮೈನಸ್?
ಪ್ರತಿ 5 ವರ್ಷಕ್ಕೊಮ್ಮೆ ರಾಜಸ್ಥಾನ ರಾಜಕೀಯದಲ್ಲಿ ಸರ್ಕಾರ ಬದಲಾವಣೆಯಾಗುತ್ತದೆ. ಅಸೆಂಬ್ಲಿ ಚುನಾವಣೆಗೂ ಮೊದಲು ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದ್ದು, ಸಿಎಂ ವಸುಂಧರಾ ರಾಜೇ ದುರಂಹಕಾರಿ ಅಂತ ಆರೋಪ ಕೇಳಿ ಬಂದಿದೆ. ಆದ್ದರಿಂದ ಜನಸಾಮಾನ್ಯರ ಕೈಗೆ ಸಿಗಲ್ಲ ಅನ್ನೋದು ಬಿಜೆಪಿಗೆ ಮೈನಸ್ ಪಾಯಿಂಟ್ ಆಗಿದೆ. ಪಕ್ಷದ ಹಿರಿಯ ಮತ್ತು ಎರಡನೇ ಸಾಲಿನ ಮುಖಂಡರ ಕಡೆಗಣನೆ ಆರೋಪ ಮಾಡಿದ್ದು, ರಾಜೇ ವಿರುದ್ಧ ಬಿಜೆಪಿಯಲ್ಲೇ ಆಂತರಿಕ ಬಂಡಾಯ ಎದ್ದಿದೆ.

ಬೆಲೆ ಕುಸಿತ ವಿರುದ್ಧ ರಾಜಸ್ಥಾನದಲ್ಲಿ ರೈತರು ಬೃಹತ್ ಹೋರಾಟ ನಡೆಸಿದ್ದರು. ನೋಟು ನಿಷೇಧ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ರಾಜಸ್ಥಾನದಲ್ಲಿ ಪ್ರಮುಖ ಚುನಾವಣಾ ವಿಚಾರವಾಗಿದೆ. ಗೋ ಸಂರಕ್ಷಣೆ ಹೆಸರಲ್ಲಿ ರಾಜಸ್ಥಾನದಲ್ಲಿ ಅಲ್ಪಸಂಖ್ಯಾತ ವ್ಯಕ್ತಿಯ ಹತ್ಯೆ ಮಾಡಲಾಗಿತ್ತು. ಆದ್ದರಿಂದ ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣ ಸಾಧ್ಯತೆ ಇದೆ. ಪ್ರಚಾರದ ಕಡೆಯ ದಿನ ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಮೋದಿ ವೈಯಕ್ತಿಕ ಟಿಪ್ಪಣಿ ಮಾಡಿದ್ದು, ಕುಂಭರಾಮ್ ಬದ್ಲು ಕುಂಭಕರ್ಣ ಎಂದು ಹೇಳಿ ರಾಹುಲ್ ಎಡವಟ್ಟು ಮಾಡಿಕೊಂಡಿದ್ದರು.

* 2013ರ ಎಲೆಕ್ಷನ್‍ನಲ್ಲಿ ಏನಾಗಿತ್ತು?
163 ಕ್ಷೇತ್ರಗಳಲ್ಲಿ ಬಿಜೆಪಿಗೆ ಗ್ರಾಮೀಣ ಭಾಗದಿಂದ 134 ಬಂದಿದ್ದು, ನಗರ ಪ್ರದೇಶದಿಂದ 29 ಕ್ಷೇತ್ರಗಳು ಸಿಕ್ಕಿತ್ತು. ಇನ್ನೂ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ಗ್ರಾಮೀಣ ಭಾಗದಿಂದ 20 ಸ್ಥಾನ ಸಿಕ್ಕಿದ್ದು, ನಗರ ಭಾಗದಲ್ಲಿ ಕೇವಲ ಒಂದೇ ಒಂದು ಸ್ಥಾನವನ್ನು ಕಾಂಗ್ರೆಸ್ ಗಳಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *