ರತ್ನಮಂಜರಿ ಟ್ರೈಲರ್ ರಿಲೀಸಾಯ್ತು!

Public TV
1 Min Read

ಬೆಂಗಳೂರು: ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನು ಒಳಗೊಂಡಿರುವ ರತ್ನಮಂಜರಿ ಚಿತ್ರದ ಟ್ರೈಲರ್ ಕಳೆದ ವಾರ ಬಿಡುಗಡೆಯಾಯಿತು. ಪ್ರಸಿದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ.

ಅಮೆರಿಕಾದಲ್ಲಿ ನಡೆದ ನೈಜ ಘಟನೆಯೊಂದನ್ನಾಧರಿಸಿ ಈ ಚಿತ್ರದ ಕಥೆಯನ್ನು ಮಾಡಲಾಗಿದ್ದು ರಾಂಚರಣ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಖಿಲಾ ಪ್ರಕಾಶ್, ಪಲ್ಲವಿರಾಜು ಹಾಗೂ ಶ್ರದ್ಧಾ ಸಾಲಿಯಾನ್ ಮೂರು ಜನ ನಾಯಕಿಯರಾಗಿ ಅಭಿನಯಿಸಿದ್ದಾರೆ. ಈ ಮೂವರಲ್ಲಿ ರತ್ನಮಂಜರಿ ಯಾರು ಎನ್ನುವುದೇ ಚಿತ್ರದ ಸಸ್ಪೆನ್ಸ್. ಹರ್ಷವರ್ಧನ ರಾಜ್ ಅವರ ಸಂಗೀತ ಸಂಯೋಜನೆ ಹಾಗೂ ಪ್ರೀತಂ ತೆಗ್ಗಿನಮನೆ ಅವರ ಛಾಯಾಗ್ರಹಣ ಕೂಡ ಈ ಚಿತ್ರಕ್ಕಿದೆ.

ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ನಾಯಕ ರಾಂಚರಣ್ ಮಾತನಾಡಿ, ಸಿದ್ಧಾಂತ್ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದು, ಅಮೆರಿಕಾದ ಕಂಪನಿಯೊಂದರಲ್ಲಿ ಸಸ್ಯ ವಿಜ್ಞಾನಿಯಾಗಿರುತ್ತೇನೆ. ನನ್ನಲ್ಲಿರುವ ಒಂದು ವಿಶೇಷ ಫೋಟೋಗ್ರಫಿಕ್ ಮೆಮೋರಿಯಿಂದ ಅಲ್ಲಿ ನಡೆದ ಕೊಲೆಯೊಂದರ ಮೂಲವನ್ನು ಹುಡುಕುತ್ತಾ ಹೊರಟಾಗ ನೂರಾರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಯು.ಎಸ್.ನಲ್ಲಿ ಶೂಟ್ ಮಾಡುವಾಗ ಸ್ವಲ್ಪ ತೊಂದರೆಯಾದರೂ ಅಲ್ಲಿನ ಕನ್ನಡಿಗರು ತುಂಬಾ ಸಹಾಯ ಮಾಡಿದರು. ನಮಗೆ ಮಳೆ ತುಂಬಾ ಅನುಕೂಲ ಮಾಡಿಕೊಟ್ಟಿತು ಎಂದು ಹೇಳಿದರು. ನಾಯಕಿ ಅಖಿಲಾ ಪ್ರಕಾಶ್ ಮಾತನಾಡಿ, ಗೌರಿ ಎಂಬ ಫ್ಯಾಷನ್ ಡಿಸೈನರ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಯು.ಎಸ್.ನಲ್ಲಿದ್ದರೂ ನಮ್ಮ ಸಂಪ್ರದಾಯ ಮರೆತಿರುವುದಿಲ್ಲ. ಹಾಡುಗಳನ್ನು ಮಲೇಷಿಯಾ ಹಾಗೂ ಕೂರ್ಗ್ ನಲ್ಲಿ ಶೂಟ್ ಮಾಡಿದ್ದೇವೆ. ನಾವು ಮೂವರು ನಾಯಕಿಯರಿದ್ದು ಅದರಲ್ಲಿ ರತ್ನಮಂಜರಿ ಯಾರು ಅಂತ ನಮಗೂ ಗೊತ್ತಿಲ್ಲ. ಚಿತ್ರ ಬಂದ ಮೇಲಷ್ಟೇ ಅದು ಗೊತ್ತಾಗಲಿದೆ ಎಂದು ಹೇಳಿಕೊಂಡರು. ಮತ್ತೊಬ್ಬ ನಾಯಕಿ ಪಲ್ಲವಿರಾಜು ಮಾತನಾಡಿ, ಮನೆ ಕೆಲಸ ಮಾಡುವ ಹುಡುಗಿ ಪಾತ್ರ ನನ್ನದು. ಸ್ವಲ್ಪ ತಲೆಹರಟೆ ಪಾತ್ರ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *