ರಾಮನಗರ, ಬೆಳಗಾವಿಯಲ್ಲಿ ವರುಣನ ಆರ್ಭಟ

Public TV
1 Min Read

ರಾಮನಗರ/ಬೆಳಗಾವಿ: ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಇಂದು ವರುಣ ಆರ್ಭಟಿಸಿದ್ದು, ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದೆ.

ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ತಾಲೂಕಿನಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಗಿದೆ. ಒಮ್ಮೊಮ್ಮೆ ಜೋರು ಮಳೆಯಾದ್ರೆ, ಮತ್ತೊಮ್ಮೆ ತುಂತುರು ಮಳೆ ನಿರಂತರವಾಗಿ ಬೀಳುತ್ತಲೇ ಇತ್ತು. ಕನಕಪುರ ಹಾಗೂ ಮಾಗಡಿಯಲ್ಲೂ ಸಹ ಮಳೆಯಾಗಿದೆ.

ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಳೆಯ ನೀರು ರಸ್ತೆಯಲ್ಲಿ ನಿಂತು ವಾಹನ ಸವಾರರು ಪರದಾಡುವಂತಾಗಿತ್ತು. ಶಾಲಾ-ಕಾಲೇಜು ಬಿಡುವ ವೇಳೆಗೆ ಮಳೆ ಜೋರಾಗಿದ್ರಿಂದ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಇತ್ತ ಬೆಳಗಾವಿಯ ಪ್ರವಾಹ ಪೀಡಿತ ಅಥಣಿ ತಾಲೂಕಿನಲ್ಲಿ ಮತ್ತೆ ಮಳೆಯ ಅಬ್ಬರ ಜೋರಾಗಿದೆ. ಕಳೆದ ಎರಡು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಇದೇ ವೇಳೆ ಮನೆ ಸ್ವಚ್ಛಗೊಳಿಸಲು ಹೋದವರಿಗೆ ಮತ್ತೆ ಮಳೆರಾಯನ ಕಾಟ ಎದುರಾಗಿದೆ.

ಅಥಣಿ ತಾಲೂಕಿನ ಸತ್ತಿ, ಸವದಿ, ದರೂರ, ಹುಲಗಬಾಳಿ, ಹಲ್ಯಾಳ, ಅವರಕೋಡ ಗ್ರಾಮಗಳಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದೆ. ಸದ್ಯ ಮತ್ತೆ ಮಳೆ ಆಗುತ್ತಿರುವ ಕಾರಣ ಪ್ರವಾಹ ಸಂತ್ರಸ್ತರಲ್ಲಿ ಆತಂಕ ಹೆಚ್ಚಾಗಿದೆ.

Share This Article
Leave a Comment

Leave a Reply

Your email address will not be published. Required fields are marked *