ರಣಬಿಸಿಲಿನ ಮಧ್ಯೆ ತಂಪೆರೆದ ವರುಣ- ಬೇಸಿಗೆ ಮಳೆಗೆ ಅಪಾರ ಬೆಳೆಗಳು ನಾಶ

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ರಣಬಿಸಿಲಿನ ಮಧ್ಯೆ ಹಲವೆಡೆ ವರುಣ (Rain) ನ ಆಗಮನವಾಗಿದೆ. ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಸುರಿದ ಭಾರೀ ವರ್ಷಧಾರೆಗೆ ಅನ್ನದಾತರು ತೀವ್ರ ಸಂಕಷ್ಟಕ್ಕೀಡಾಗಿದ್ದಾನೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದಿದ್ದ ಬೆಳೆ ನೀರಲ್ಲಿ ಒದ್ದೆಯಾಗಿದ್ರಿಂದ ರೈತರು ನಷ್ಟ ಅನುಭವಿಸಿದ್ದಾರೆ. ಇದನ್ನೇ ದಳ್ಳಾಳಿಗಳು ಬಂಡವಾಳ ಮಾಡಿಕೊಂಡಿದ್ದು, ಕಡಿಮೆ ಬೆಲೆಗೆ ಖರೀದಿಸ್ತಿದ್ದಾರೆ.

ಚಿಕ್ಕೋಡಿ (Chikkodi) ಉಪ ವಿಭಾಗದ ವಿವಿಧೆಡೆ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಹುಕ್ಕೇರಿ, ರಾಯಬಾಗ, ಚಿಕ್ಕೋಡಿ ತಾಲೂಕಿನಲ್ಲಿ ಬಿಸಿಲಿಗೆ ರೋಸಿ ಹೋಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಕೆಲಹೊತ್ತು ಭಾರೀ ಮಳೆಯಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.  ಇದನ್ನೂ ಓದಿ: ಪಕ್ಷದ ಕಾರ್ಯಕರ್ತರೇ ನಮ್ಮ ಸ್ಟಾರ್‌ಗಳು, ನಾವು ಯಾವುದೇ ಸ್ಟಾರ್ ಪ್ರಚಾರಕರನ್ನು ಕರೆಸಲ್ಲ : ನಿಖಿಲ್‌ ಕುಮಾರಸ್ವಾಮಿ

ವಿಜಯನಗರ (Vijayanagar) ಜಿಲ್ಲೆ ಹೂವಿನ ಹಡಗಲಿ ಪಟ್ಟಣದ ಗವಿಸಿದ್ದೇಶ್ವರ ಮಠದಲ್ಲಿ ಮರಕ್ಕೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಸೋವೇನಹಳ್ಳಿ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು ಮಾವು, ಬತ್ತದ ಬೆಳೆಗೆ ಹಾನಿಯಾಗಿದೆ. ರೈತರಲ್ಲಿ ಆತಂಕ ಹೆಚ್ಚಿಸಿದೆ.

ಗದಗ (Gadag) ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ರೋಣ ತಾಲೂಕಿನ ಕೊತಬಾಳ ಗ್ರಾಮ ಹಾಗೂ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಬಳಿ ಗುಡುಗು, ಸಿಡಿಲು, ಸಹಿತ ಮಳೆ ಸುರದಿದೆ. ಲಿಂಗದಾಳ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಯುವಕರು ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯವಾಗಿದೆ. ಕೊತಬಾಳ ಬಳಿಯ ಜಮೀನು, ರಸ್ತೆಗಳೆಲ್ಲಾ ಹಿಮಾಲಯದಂತೆ ಬಾಸವಾಗಿವೆ. ತಗಡು ಹಾಗೂ ಹಂಚಿನ ಮೇಲ್ಚಾವಣಿ ಮನೆಗಳು ಹಾಳಾಗಿವೆ. ಬಿರುಗಾಳಿಯಿಂದ ಮರಗಳು ಧರೆಗುರುಳಿವೆ.

ವಿಜಯಪುರ (Vijayapur) ಜಿಲ್ಲೆ ಕೊಲ್ಹಾರ ತಾಲೂಕಿನ ಮಸೂತಿ ಕ್ರಾಸ್ ಬಳಿ ಸಿಡಿಲು ಬಡಿದು 15 ಕುರಿಗಳು ಸಾವನ್ನಪ್ಪಿವೆ. ಕುರಿ ಮಾಲಿಕ ಚಂದ್ರಶೇಖರ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಸುಮಾರು 2ಲಕ್ಷ ರೂನಷ್ಟು ನಷ್ಟ ಸಂಭವಿಸಿದೆ.

ಹಾವೇರಿ, ಕೆಪ್ಪಳ, ಶಿವಮೊಗ್ಗದಲ್ಲೂ ಧಾರಾಕಾರ ಮಳೆಯಾಗಿದ್ದು, ಕಾದು ಕೆಂಡವಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ. ಒಟ್ಟಾರೆ ಬಿಸಿಲ ಬೇಗೆ ನಡುವೆ ರಾಜ್ಯದ ಹಲವೆಡೆ ಮಳೆಯ ಅವಾಂತರ ಜೋರಾಗಿದೆ. ಅಕಾಲಿಕ ಮಳೆಯಿದಾಗಿ ರೈತರು ಕಂಗಾಲಾಗಿದ್ದು ವರುಣಯ್ಯ ಸ್ವಲ್ಪ ಕೃಪೆ ತೋರಯ್ಯ ಎನ್ನುತ್ತಿದ್ದಾರೆ.

Share This Article