ಒಂದೇ ಮಳೆಗೆ ಬೆಂಗಳೂರಿನ ಹಲವೆಡೆ ಅವಾಂತರ – ಎಲ್ಲೆಲ್ಲಿ ಎಷ್ಟು ಮಳೆ?

Public TV
2 Min Read

– ಧರೆಗುರುಳಿದ ಬೃಹತ್ ಗಾತ್ರದ ಮರ, ಕಾರು-ಬೈಕ್‌ಗಳು ಜಖಂ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿಂದು (Silicon City) ಹಲವೆಡೆ ಮಳೆ ಸುರಿದಿದ್ದು, ಒಂದೇ ಮಳೆಗೆ ನಗರ ಅಸ್ತವ್ಯಸ್ತವಾಗಿದೆ.

ಒಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಪರಿಣಾಮದಿಂದ ಬೆಳಗ್ಗೆಯಿಂದಲೂ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಯಶವಂತಪುರ, ರಾಜಾಜೀನಗರ, ಮಾರತ್ತಹಳ್ಳಿ, ಹೆಚ್‌ಎಎಲ್ ಏರ್‌ಪೋರ್ಟ್, ಬೆಳ್ಳಂದೂರು, ಹೆಚ್‌ಆರ್‌ಎಸ್ ಲೇಔಟ್ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.

ನಗರದ ಕೆಲವು ಕಡೆಗಳಲ್ಲಿ ಅರೆಬರೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದು, ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಇನ್ನೂ ಕೆಲವು ಕಾಲುವೆಗಳನ್ನು ಸ್ವಚ್ಛಗೊಳಿಸದ ಕಾರಣ ಈ ಸಮಸ್ಯೆ ಉಂಟಾಗಿದೆ. ನೀರು ಹರಿದು ಹೋಗಲು ಜಾಗ ಬಿಡದೇ ಅವೈಜ್ಞಾನಿಕವಾಗಿ ವೈಟ್ ಟಾಪಿಂಗ್ ಕಾಮಗಾರಿ ಮಾಡಿದ್ದು, ಒಂದೇ ಮಳೆಗೆ ಬೆಂಗಳೂರಿನ ಬಣ್ಣ ಬಯಲಾಗಿದೆ.ಇದನ್ನೂ ಓದಿ:ಬಂಗಾಳಕೊಲ್ಲಿಯಲ್ಲಿ ಚುರುಕುಗೊಂಡ ಚಂಡಮಾರುತ – ಒಂದು ವಾರ ರಾಜ್ಯದಲ್ಲಿ ಗಾಳಿ ಸಹಿತ ಮಳೆ

ಯಾವ್ಯಾವ ರಸ್ತೆಗಳಲ್ಲಿ ಸಮಸ್ಯೆ?
-ಸೆಂಟ್ರಲ್ ಜೈಲ್ ರೋಡ್‌ನಿಂದ ರಾಯಸಂದ್ರ ಕಡೆಗೆ
-ಹೊರಮಾವು ನಗರದಿಂದ ರಾಮಮೂರ್ತಿ ನಗರದ ಕಡೆಗೆ
-ಶ್ರೀನಿವಾಗಿಲು ಒಳವರ್ತುಲ ರಸ್ತೆ
-ಕಾವೇರಿ ಕೆಳಸೇತುವೆಯಿಂದ ಪ್ಯಾಲೇಸ್ ಗುಟ್ಟಹಳ್ಳಿ ಕಡೆಗೆ

ಕಾರು, ಬೈಕ್‌ಗಳು ಜಖಂ
ಇನ್ನೂ ರಾಜಾಜಿನಗರದಲ್ಲಿ ಮಳೆ ಜೋರಾಗಿ ಸುರಿದಿದ್ದು, ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರುಗಳ ಮೇಲೆ ಮರ ಬಿದ್ದಿದೆ. ಪರಿಣಾಮ ಸ್ಕಾರ್ಫಿಯೋ ಮತ್ತು ಸ್ವಿಫ್ಟ್ ಕಾರಿನ ಜೊತೆಗೆ ಪಕ್ಕದಲ್ಲಿದ್ದ ಬೈಕ್‌ಗಳು ಜಖಂಗೊಂಡಿವೆ. ಮರ ಬಿದ್ದು ರಸ್ತೆ ಬ್ಲಾಕ್ ಆಗಿದ್ದು, ಸ್ಥಳಕ್ಕೆ ಬಿಬಿಎಂಪಿ ಹಾಗೂ ಕೆ.ಇ.ಬಿ ಸಿಬ್ಬಂದಿ ಭೇಟಿ ನೀಡಿದ್ದು, ಮರ ತೆರವುಗೊಳಿಸುತ್ತಿದ್ದಾರೆ.

ಈಜೀಪುರ ಮುಖ್ಯ ರಸ್ತೆಯಲ್ಲಿ ಕಟ್ಟಡದ ನೆಲ ಮಹಡಿ ಜಲಾವೃತಗೊಂಡಿದ್ದು, ಎರಡು ಅಡಿಯಷ್ಟು ನೀರು ನಿಂತಿದೆ. ಒಳಭಾಗದಲಿದ್ದ ಎರಡು ಕಾರು, ನಾಲ್ಕು ಬೈಕ್ ಜಲಾವೃತಗೊಂಡಿದ್ದು, ಸದ್ಯ ಮೋಟರ್ ಮೂಲಕ ನೀರು ಹೊರತೆಗೆಯಲಾಗುತ್ತಿದೆ. ಜೊತೆಗೆ ಬಿಟಿಎಂ ಲೇಔಟ್ ರಸ್ತೆಗಳು ಜಲಾವೃತಗೊಂಡಿದ್ದು, ಕೃತಕ ನದಿ ಸೃಷ್ಟಿಯಾಗಿದೆ.

ಮಳೆಯಿಂದಾಗಿ ಲೂಲು ಮಾಲ್ ಎದುರುಗಡೆ ಟ್ರಾಫಿಕ್ ಜಾಮ್ ಆಗಿದ್ದು, ನಡುರಸ್ತೆಯಲ್ಲಿಯೇ ಬೆಂಗಳೂರಿನಿಂದ ತುಮಕೂರು ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿಯ ಆಕ್ಸಲ್ ಕಟ್ಟಾಗಿ ಕೆಟ್ಟು ನಿಂತಿದೆ. ಒಂದು ಕಡೆ ಮಳೆ, ಇನ್ನೊಂದು ಬಸ್ ಕೆಟ್ಟು ನಿಂತಿದ್ದು, ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹಾಗೂ ಸಾರ್ವಜನಿಕರು ಸೇರಿ ಬಸ್ ತಳ್ಳಿ ಬದಿಗೆ ಹಾಕಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ?
ಕೋರಮಂಗಲ – 36.50 ಮೀ.ಮೀ
ಹೆಚ್‌ಎಎಲ್ ಏರ್‌ಪೋರ್ಟ್ – 29.50 ಮೀ.ಮೀ
ಮಾರತಹಳ್ಳಿ – 27.50 ಮೀ.ಮೀ
ವನ್ನಾರ್‌ಪೇಟೆ – 24 ಮೀ.ಮೀ
ಹೆಚ್‌ಎಎಲ್ ಏರ್‌ಪೋರ್ಟ್ 2 – 21 ಮೀ.ಮೀ
ವಿಜ್ಞಾನ ನಗರ – 17 ಮೀ.ಮೀ
ಹೆಚ್‌ಎಸ್‌ಆರ್ ಲೇಔಟ್ -15.50 ಮೀ.ಮೀ
ಬೆಲ್ಲಂದೂರು – 15 ಮೀ.ಮೀ
ಗರುಡಾಚಾರಪಾಳ್ಯ – 14.50 ಮೀ.ಮೀ
ಬಿಟಿಎಂ ಲೇಔಟ್ – 14 ಮೀ.ಮೀ
ಕೆಆರ್ ಪುರಂ – 13.50 ಮೀ.ಮೀ
ಪಟ್ಟಾಭಿರಾಮನಗರ – 13.50 ಮೀ.ಮೀ
ರಾಮಮೂರ್ತಿ ನಗರ -13 ಮೀ.ಮೀ
ವಿದ್ಯಾಪೀಠ – 11.50 ಮೀ.ಮೀ
ಹೊಯ್ಸಳ ನಗರ – 11 ಮೀ.ಮೀ
ದೊಡ್ಡಾನೆಕುಂಡಿ – 11 ಮೀ.ಮೀ
ಹೆಮ್ಮಿಗೆಪುರ – 10 ಮೀ.ಮೀ.ಇದನ್ನೂ ಓದಿ:ಬೆಂಗಳೂರಿನ ಹಲವೆಡೆ ಬೆಳಗ್ಗೆಯೇ ತುಂತುರು ಮಳೆ

Share This Article