ಬೆಂಗ್ಳೂರಲ್ಲಿ ಮಳೆಯ ಅಬ್ಬರ- ಧರೆಗುರುಳಿದ ಮರ, ವಿದ್ಯುತ್ ಕಂಬ, ಅಂಡರ್‍ಪಾಸ್‍ನಲ್ಲಿ ಮರ್ಸಿಡಿಸ್ ಕಾರು ಜಖಂ

Public TV
2 Min Read

ಬೆಂಗಳೂರು: ಮಂಗಳವಾರ ರಾತ್ರಿ ಬೆಂಗಳೂರಲ್ಲಿ ಸುರಿದ ಭಾರಿ ಮಳೆಗೆ ಇಂದಿರಾನಗರದ ತಿಪ್ಪಸಂದ್ರದ ಬಳಿ ತೆಂಗಿನ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದು ವರೆಗೂ ಪಾಲಿಕೆಯಿಂದ ಯಾವ ಸಿಬ್ಬಂದಿಯೂ ಮರ ತೆರವು ಮಾಡಲು ಬಂದಿಲ್ಲ ಅಂತ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತೆಂಗಿನಮರ ವಿದ್ಯುತ್ ತಂತಿ ಮೇಲೆ ಬಿದ್ದಿರೋದ್ರಿಂದ ವಿದ್ಯುತ್ ತಂತಿ ಸಹ ಹರಿದು ಬಿದ್ದಿದ್ದು, ರಾತ್ರಿಯಿಂದ ಕರೆಂಟ್ ಕೂಡ ಇಲ್ಲ.

ಮಂಗಳವಾರ ರಾತ್ರಿ ನಗರದಲ್ಲಿ ಒಂದು ಗಂಟೆ ಸುರಿದ ಮಳೆ ಹತ್ತಾರು ಅನಾಹುತಗಳನ್ನ ಸೃಷ್ಟಿಸಿದೆ. ಬೆಂಗಳೂರಿನ ಪ್ರಮುಖ ನಗರಗಳಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬ ಬಿದ್ದಿದೆ. ಮನೆಗಳಿಗೆ ನೀರು ನುಗ್ಗಿದೆ. ಕಾರು, ಬಸ್ ನೀರಲ್ಲಿ ಮುಳುಗಿ ಹೋಗಿವೆ.

ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಲಿ ಮೆರಿಡಿಯನ್ ಅಂಡರ್‍ಪಾಸ್‍ನಲ್ಲಿ ಸಿಕ್ಕಿಕೊಂಡ ಕಾರನ್ನು ಇನ್ನೂ ಹೊರತೆಗೆದಿಲ್ಲ. ಅಂಡರ್‍ಪಾಸ್‍ನಲ್ಲಿ ನೀರು ತುಂಬಿರೋದ್ರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ನೀರನ್ನು ಹೊರತೆಗೆದಿಲ್ಲ, ಕಾರು ಹೊರಬಂದಿಲ್ಲ. ಹೀಗಾಗಿ ಪ್ಯಾಲೆಸ್ ಗುಟ್ಟಹಳ್ಳಿ, ಗಾಲ್ಫ್ ರಸ್ತೆ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ.

ಆನಂದ್‍ರಾವ್ ಸರ್ಕಲ್‍ನಲ್ಲಿ ಮತ್ತೆ ಮುಳುಗಿದ ಬಸ್: ಇದು ಪ್ರತಿ ಬಾರಿ ಮಳೆ ಬಂದಾಗ್ಲೂ ಕಿನೋ ಥಿಯೇಟರ್ ಮುಂದೆ ಆಗೋ ಮಾಮೂಲಿ ಪ್ರಾಬ್ಲಂ. ಸುತ್ತಲೂ ಎತ್ತರ ಪ್ರದೇಶದಲ್ಲಿ ಮನೆಗಳು ಹಾಗೂ ರಸ್ತೆಗಳಿವೆ. ಅಲ್ಲಿಂದ ಹರಿದುಬರುವ ನೀರು ಅಂಡರ್‍ಪಾಸ್‍ನಲ್ಲಿ ಬಂದು ನಿಲ್ಲುತ್ತೆ. ಇದ್ರಿಂದ ಇಂಥಾ ಅನಾಹುತಗಳು ಪ್ರತಿ ಬಾರಿನೂ ಆಗ್ತಾನೇ ಇದೆ. ಮಂಗಳವಾರದಂದು ಕೂಡ ಇದೇ ಪರಿಸ್ಥಿತಿ ಉಂಟಾಗಿದ್ದು, ಕೆಲವು ಹುಡುಗರು ಅದೇ ಮೋರಿ ನೀರು, ಚೇಂಬರ್ ನೀರಲ್ಲಿ ಈಜಿಕೊಂಡು ಹೋಗಿ ಬಸ್‍ನಲ್ಲಿದ್ದವರನ್ನ ರಕ್ಷಣೆ ಮಾಡಿದ್ದಾರೆ. ಬಸ್ ಮುಳುಗಡೆ ಆಗಿರೋದು ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ಮೇಯರ್ ಪದ್ಮಾವತಿ ಬಂದ್ರು. ಅಗ್ನಿಶಾಮಕ ದಳವೂ ಬಂತು. ನೀರನ್ನ ಹೊರಹಾಕುವ ಕೆಲಸ ಮಾಡಿದ್ರು. ಆದ್ರೆ ಜನ ಮಾತ್ರ ಮೇಯರ್‍ಗೆ ಕ್ಲಾಸ್ ತಗೊಂಡ್ರು. ಇಷ್ಟಾದ್ಮೇಲೆ ಮೇಯರ್ ಪದ್ಮಾವತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಂದು ವರ್ಷದಿಂದ ಕೆಲಸ ಆಗ್ತಿದೆ. ಇನ್ನೊಂದು ತಿಂಗಳಲ್ಲಿ ಶಾಸ್ವತ ಪರಿಹಾರ ಕೊಡ್ತೀವಿ ಅಂದ್ರು.

ಇದು ಆನಂದ್ ರಾವ್ ಸರ್ಕಲ್ ಕಥೆಯಾದ್ರೆ, ಕಾವೇರಿ ಜಂಕ್ಷನ್‍ನ ಅಂಡರ್‍ಪಾಸ್‍ನಲ್ಲಿ ಕಾರು ಮುಳುಗಡೆಯಾಗಿತ್ತು. ಜಯನಗರದಲ್ಲಿ ಭಾರೀ ಮಳೆಗೆ ಜಾಹಿರಾತು ಫಲಕ ರಸ್ತೆಗೆ ಬಂದು ಬಿತ್ತು ಸಂಜಯ್‍ನಗರದಲ್ಲಿ ಬುಡ ಸಮೇತ ಮರ ಬಿದ್ದಿದ್ರಿಂದ ಕಾರು ಜಖಂ ಆಗಿದೆ. ಕಾಕ್ಸ್ ಟೌನ್‍ನಲ್ಲಿ ಪಾದಚಾರಿಯೊಬ್ಬರಿಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಚಂದ್ರಲೇಔಟ್‍ನಲ್ಲಿ ಮತ್ತಿಕೆರೆಯ ಅಯ್ಯಪ್ಪ ದೇವಸ್ಥಾನದ ಹತ್ತಿರ ಮರಗಳು ನೆಲಕಚ್ಚಿವೆ. ಹೊಸಕೆರೆಹಳ್ಳಿಯಲ್ಲಿ ವಿದ್ಯುತ್ ಕಂಬ ಉರುಳಿಬಿದ್ದಿದೆ.

ಹತ್ತಾರು ಮನೆಗಳಿಗೆ ನುಗ್ಗಿದ ನೀರು: ಮಲ್ಲೇಶ್ವರಂ 12ನೇ ಮುಖ್ಯರಸ್ತೆಯಲ್ಲಿ ರಾಘವೇಂದ್ರ ಅನ್ನೋರ ಮನೆಗೆ ನೀರು ನುಗ್ಗಿದೆ. ಹಲಸೂರಿನ ಕೆರೆ ಬಳಿ ನಾಲ್ಕೈದು ಮನೆಗಳಿಗೆ ಚರಂಡಿ ನೀರು ನುಗ್ಗಿತ್ತು. ಜೆಪಿನಗರದ ಕೆಎಸ್‍ಆರ್‍ಟಿಸಿ ಲೇಔಟ್‍ನಲ್ಲೂ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ರಿಂದ ಜನ ರಾತ್ರಿಯಿಡೀ ಮನೆ ಕ್ಲೀನ್ ಮಾಡೋದೇ ಕೆಲಸವಾಗಿತ್ತು.

ಇನ್ನು ಇಂದಿರಾನಗರ, ಪೀಣ್ಯಾ, ಮೈಸೂರು ರಸ್ತೆ, ಯಶವಂತಪುರ, ಯಲಹಂಕ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ನಿಂತಿದ್ರಿಂದ ವಾಹನ ಸವಾರರು ಪರದಾಡಿದ್ರು. ಬರೀ ಒಂದು ದಿನದ ಮಳೆ, ಅದು ಬೇಸಿಗೆ ಮಳೆಗೆ ಬೆಂಗಳೂರು ಗತಿ ಹೀಗಾಗಿದೆ. ಮಳೆಗಾಲ ಬಂದ್ರೆ ಏನ್ ಗತಿ. ಮೇಯರ್ ಅವರು ಸಮಸ್ಯೆ ಬಂದಾಗ ಸ್ಥಳಕ್ಕೆ ಬಂದ್ರೆ ಸಾಲಲ್ಲ. ಸಮಸ್ಯೆ ಸರಿಮಾಡೋಕೆ ಕ್ರಮ ಕೈಗೊಳ್ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *